ಅಕ್ಟೋಬರ್ 15 ಮಹಿಳಾ ರೈತದಿನಾಚರಣೆಗೆ ಸಿದ್ಧತೆ.

ಹುಳಿಯಾರು:

        ಸಹಜ ಕೃಷಿಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಆದ್ಯತೆ ನೀಡಲಾಗಿದೆ. ಅದಕ್ಕಾಗಿ ನಗರ ಪ್ರದೇಶದಲ್ಲಿ ಮಾರಾಟ ಕೇಂದ್ರ ಸ್ಥಾಪಿಸಲಾಗುವುದು ಎಂದು ತುಮಕೂರಿನ ಸಹಜ ಬೇಸಾಯ ಶಾಲೆಯ ವಿಜ್ಞಾನಿ ಡಾ.ಮಂಜುನಾಥ್ ಹೇಳಿದರು.

        ಸಹಜ ಬೇಸಾಯ ಶಾಲೆಯವತಿಯಿಂದ ಹುಳಿಯಾರು ಸಮೀಪದ ಪೋಷಕಟ್ಟೆ ಬಳಿಯ ಸುವರ್ಣಮ್ಮ ಸಿದ್ದಬಸಪ್ಪ ಅವರ ತೋಟದಲ್ಲಿ ನಡೆದ ಸಹಜ ಬೇಸಾಯಗಾರರ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

         ಜಿಲ್ಲೆಯಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ರೈತರು ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲದೆ ಇನ್ನೂ 60 ಕ್ಕೂ ಹೆಚ್ಚು ಜನರು ಪರಿವರ್ತನೆಗೆ ಮುಂದಾಗಿದ್ದಾರೆ. ಸಹಜ ಕೃಷಿಯಲ್ಲಿ ಮಣ್ಣಿನ ಆರೋಗ್ಯ ವೃದ್ಧಿಸುವುದು ಬಹಳ ಮುಖ್ಯವಾದ ಕೆಲಸವಾಗಿದ್ದು ನೀರು ಎಂದಿಗೂ ಸಮಸ್ಯೆಯಲ್ಲ ಎಂದರು. ಮಳೆ ಬರುತ್ತಿರುವುದರಿಂದ ವಿವಿಧ ದೇಸಿ ತರಕಾರಿ ಬೀಜಗಳನ್ನು ನಿಮ್ಮ ಹೊಲಗಳಲ್ಲಿ ಬೀಜದುಂಡೆ ಮಾಡಿ ಎರಚಲು ಇದು ಸೂಕ್ತ ಸಮಯವಾಗಿದ್ದು ದೇಸಿ ಬೀಜಗಳನ್ನು ಸಂರಕ್ಷಿಸಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.

        ಸಿ.ಯತಿರಾಜು ಮಾತನಾಡಿ ಸಹಜ ಕೃಷಿಯನ್ನು ದೊಡ್ಡ ಆಂದೋಲನವಾಗಿ ರೂಪಿಸಲು ಶಾಲೆ ಶ್ರಮಿಸುತ್ತಿದೆ. ಸಹಜ ಬೇಸಾಯ ನಮ್ಮ ಸಂಸ್ಕತಿಯಾಗಲಿ,ಪ್ರತಿ ಸಹಜ ಬೇಸಾಯ ತೋಟವು ಒಂದೊಂದು ಬೀಜದ ರೀತಿ ಸ್ಪೋಟಗೊಂಡು ಹೆಚ್ಚಾಗುತ್ತಾ ಹೋಗಲಿ ಅದೇ ನಮ್ಮ ಗುರಿ ಎಂದರು.

        ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಸಿದ್ದಬಸಪ್ಪ ಮಾತನಾಡಿ ಸಹಜ ಬೇಸಾಯ ನಮಗೆ ತುಂಬಾ ಖುಷಿಕೊಟ್ಟಿದೆ. ಲಕ್ಷ-ಲಕ್ಷ ಖರ್ಚು ಮಾಡಿ ವಿಷಯುಕ್ತ ಬೆಳೆ ಬೆಳೆದು ಗ್ರಾಹಕರಿಗೆ ಕೊಡುವುದು ಪಾಪ ಮಾಡಿದಂತೆ.ಆದರಿಂದಲೇ ನಾನು ದಾಳಿಂಬೆ ಬೆಳೆಯಲಿಲ್ಲ. ಸಹಜ ಬೇಸಾಯ ಮಾಡುತ್ತಿರುವುದರಿಂದ ನಮ್ಮ ತೋಟ ದಿನೇ ದಿನೇ ಕಂಗೊಳಿಸುತ್ತಿದೆ. ಎಲ್ಲರೂ ಇದೇ ರೀತಿ ಸಹಜ ಬೇಸಾಯಗಾರರಾದರೆ ದೇಶಕ್ಕೆ ಒಳಿತು,ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.

         ಸಹಜ ಕೃಷಿಕ ಹೊನ್ನುಡಿಕೆ ರವೀಶ್ ತಮ್ಮ ಅನುಭವ ಹಂಚಿಕೊಂಡರು. ಮೂರು ತಿಂಗಳುಗಳಿಗೊಮ್ಮೆ ಎಲ್ಲಾ ಸಹಜ ಬೇಸಾಯಗಾರರು ಒಂದೆಡೆ ಸೇರಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು. ಇದೇ 15ರಂದು ಪಾವಗಡ ತಾಲ್ಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.\

       ಸಹಜ ಬೇಸಾಯಗಾರರ ಜಿಲ್ಲಾ ಸಮಾವೇಶದಲ್ಲಿ ಜಿಲ್ಲೆಯ ಶಿರಾ, ಪಾವಗಡ, ಕುಣಿಗಲ್, ಚಿ.ನಾ.ಹಳ್ಳಿ, ತುಮಕೂರು ತಾಲೋಕುಗಳಿಂದ ಬಂದಿದ್ದ ರೈತರು ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಒಬ್ಬೊಬ್ಬರಾಗಿ ಹೇಳಿಕೊಂಡರು. ಅದರಲ್ಲಿ ನೀರಿನ ಸಮಸ್ಯೆ, ಗಿಡಗಳ ಬೆಳವಣಿಗೆ ಕುಂಟಿತತೆ, ಜೀವಾಮೃತ ತಯಾರಿ, ಮಾರುಕಟ್ಟೆ, ಸಜೀವ ಹೊದಿಕೆ, ದೇಸಿ ಬೀಜಗಳು ಇತ್ಯಾದಿ ಸಮಸ್ಯೆಗಳಿದ್ದವು. ಅವುಗಳೆಲ್ಲವನ್ನು ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಒಂದೊಂದಾಗಿ ನಿವಾರಿಸುವ ತಂತ್ರಗಳ ಕುರಿತು ವಿವರಿಸಿದರು.
ಡಾ.ನಾಗೇಂದ್ರ, ಸಹಜ ಕೃಷಿಕರಾದ ರಾಮಕೃಷ್ಣಪ್ಪ, ಎನ್.ಇಂದಿರಮ್ಮ, ಕಲ್ಲೇನಹಳ್ಳಿ ಶಿವಕುಮಾರ್, ಭೂಶಕ್ತಿ ಕೇಂದ್ರದ ಪ್ರೀತಮ್.ಸಿ.ರಾಜ್, ರೂಪ, ಬಾಲಾಜಿ, ಮಧುಸೂದನ.ಕೆ.ಪಿ ವಿವೇಕ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link