ಹೊನ್ನಾಳಿ:
ಒಂದು ಕಾಲದಲ್ಲಿ ಶಿಕ್ಷಣ ಪಡೆಯುವುದು ದೊಡ್ಡ ಸಮಸ್ಯೆಯಾಗಿತ್ತು. ಇಂದು ಪೋಷಕರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಲು ವಿಪುಲವಾದ ಅವಕಾಶಗಳಿವೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಶನಿವಾರ ರಾತ್ರಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಾಯಿ ಗುರುಕುಲ ವಸತಿಯುತ ಶಾಲೆ ಮತ್ತು ಸಾಯಿ ಗುರುಕುಲ ಪಿಯು ಕಾಲೇಜು ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ಸಂಭ್ರಮ-10 ಹಾಗೂ 10ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ್ಞಾನ ಎಂಬುದು ಒತ್ತಡ ಹಾಕಿ ತಲೆಯಲ್ಲಿ ತುಂಬುವ ಪ್ರಕ್ರಿಯೆಯಲ್ಲ. ಆಂತರಿಕ ಬೆಳವಣಿಗೆಗೆ ಬೇಕಾದ ಸಮಗ್ರ ಶಿಕ್ಷಣವನ್ನು ಮಗು ಕಲಿಯುವಂತೆ ಮಾಡುವುದೇ ಶಿಕ್ಷಣದ ಗುರಿಯಾಗಬೇಕು ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳು ಬಹು ಅದೃಷ್ಟವಂತರು. ಇದಕ್ಕೆ ಕಾರಣ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ವಸತಿ ಶಾಲೆಗಳು ಪ್ರಾರಂಭವಾಗಿರುವುದು. ಮಕ್ಕಳು ಕಲಿಯುವಂತೆ ಪ್ರೇರೇಪಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ, ಗುರುಕುಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಿ.ಜಿ. ಶಾಂತನಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳನ್ನು ತೆರೆದು ಅವುಗಳನ್ನು ಬೆಳೆಸಿಕೊಂಡು ಹೋಗುವುದು ತುಂಬಾ ಕಷ್ಟದ ಕೆಲಸ. ಶಿಕ್ಷಕ ಬಳಗ ಹಾಗೂ ಇತರ ಸಿಬ್ಬಂದಿ ಸಹಕಾರ ನೀಡಿದರೆ ಮಾತ್ರ ಸಂಸ್ಥೆಗಳು ಉತ್ತರೋತ್ತರವಾಗಿ ಬೆಳೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ಸಾಯಿ ಗುರುಕುಲ ವಸತಿಯುತ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ. ಮರಿಗೌಡ ಮಾತನಾಡಿ, ಶಿಕ್ಷಣ ಸಂಸ್ಥೆ ತರೆಯುವುದು ಒಂದು ದೊಡ್ಡ ಸಾಹಸದ ಕೆಲಸ. ಹೊಸ ಸವಾಲುಗಳನ್ನು ಎದುರಿಸಿ ಸಂಸ್ಥೆ ಕಟ್ಟಬೇಕಿದೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯ ಆರಂಭದ ದಿನಗಳು ಬಹು ಕಷ್ಟದಾಯಕವಾಗಿದ್ದವು. ಎಲ್ಲಾ ಕಷ್ಟಗಳನ್ನು ನಿಭಾಯಿಸಿ ಮುನ್ನುಗ್ಗಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.ಚಿತ್ರದುರ್ಗದ ಶಾರದ ರಾಮಕೃಷ್ಣ ಆಶ್ರಮದ ಸ್ವಾಮಿ ಬ್ರಹ್ಮಾನಂದ ಮಹಾರಾಜ್ ಸಾನಿಧ್ಯ ವಹಿಸಿ, ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಯಿ ಗುರುಕುಲ ವಸತಿಯುತ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಡಿ.ಎಸ್. ಪ್ರದೀಪ್ಗೌಡ, ಡಿ.ಜಿ. ಸೋಮಶೇಖರ್, ಪ್ರಾಂಶುಪಾಲ ಸಿ.ಜಿ. ಸುರೇಂದ್ರ, ಜಿಪಂ ಮಾಜಿ ಅಧ್ಯಕ್ಷ ಬಸವರಾಜಪ್ಪ ಇತರರು ಉಪಸ್ಥಿತರಿದ್ದರು. ಹಾಸ್ಯ ಕಲಾವಿದರಾದ ಗಂಗಾವತಿ ಬಿ. ಪ್ರಾಣೇಶ್, ನರಸಿಂಹ ಜೋಷಿ ಮತ್ತು ಬಸವರಾಜ್ ಮಾಮನಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
