ನಿವೇಶನ ಹಂಚಿಕೆಗೆ ಪಾಲಿಕೆಗೆ ವಾರದ ಗಡುವು

ದಾವಣಗೆರೆ :

     ಮೂಲಭೂತ ಸೌಲಭ್ಯ ಕಲ್ಪಿಸಿ, ನಿವೇಶನ ಹಂಚಿಕೆ ಮಾಡಲು ಆವರೆಗೆರೆ ಧನವಿನ ಓಣಿ ನಿವಾಸಿಗಳು ಮಹಾನಗರ ಪಾಲಿಕೆಗೆ ಒಂದು ವಾರದ ಗಡುವು ನೀಡಿದ್ದಾರೆ.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ)ಯ ಮುಖಂಡ ಎಸ್.ಚಂದ್ರಪ್ಪ, ಇನ್ನೂ ಒಂದು ವಾರದಲ್ಲಿ ನಾವು ಮೊದಲು ಗುಡಿಸಲು ಹಾಕಿಕೊಂಡು ವಾಸವಾಗಿದ್ದ ಜಾಗದಲ್ಲಿ ಕುಡಿಯುವ ನೀರು, ಯುಜಿಡಿ ಹಾಗೂ ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿ ನಿವೇಶನ ಹಂಚಿಕೆ ಮಾಡದಿದ್ದರೆ, ಮಹಾನಗರ ಪಾಲಿಕೆಯ ಆವರಣದಲ್ಲಿಯೇ ಸಾಮೂಹಿಕವಾಗಿ ಅಡುಗೆ ಮಾಡಿ ವಿನೂತನವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

      ಎಸ್ಸಿ, ಎಸ್ಟಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಧನಿವಿನ ಓಣಿಯ 19 ಗುಂಟೆ ಜಾಗವನ್ನು ಪರಿಶಿಷ್ಟರಿಗೆ ಮೀಸಲಾಗಿರುವ ಪಾಲಿಕೆಯ ಶೇ.24.10ರ ಅನುದಾನದಲ್ಲಿ ಖರೀದಿಸಲಾಗಿದೆ. ಅಲ್ಲದೇ, ಇಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು 25 ಲಕ್ಷ ರೂ. ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ವರೆಗೂ ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ ಎಂದು ಆರೋಪಿಸಿದರು.

      2018ರ ಮಾರ್ಚ್ 18ರಂದು ಮಹಾನಗರ ಪಾಲಿಕೆಯ ವಯಿತಿಂದ ಅಂದಿನ ಜಿಲ್ಲಾ ಮಂತ್ರಿಗಳಾಗಿದ್ದ ಎಸ್.ಎಸ್.ಮಲ್ಲಿಕಾರ್ಜುನ್, ಮೇಯರ್ ಆಗಿದ್ದ ಅನಿತಾಬಾಯಿ ಮಾಲತೇಶ್, ಸ್ಥಳೀಯ ಪಾಲಿಕೆ ಸದಸ್ಯ ಎಚ್.ಜಿ.ಉಮೇಶ್ ಹಾಗೂ ಆಯುಕ್ತರ ಸಮ್ಮುಖದಲ್ಲಿ ನಿವೇಶನದ ಹಕ್ಕುಪತ್ರವನ್ನು ವಿತರಿಸಲಾಗಿತ್ತು. ಇದಾದ ಎರಡು ತಿಂಗಳನಂತರದಲ್ಲಿ ಅಂದಿನ ಪಾಲಿಕೆ ಸದಸ್ಯ ಎಚ್.ಜಿ.ಉಮೇಶ್, ಪಾಲಿಕೆ ಅಭಿಯಂತರರಾದ ಸತೀಶ್ ಹಾಗೂ ರವಿ ಬಂದು, ನಿಮ್ಮ ನಿವೇಶನಗಳನ್ನು ಅಳತೆ ಮಾಡಿ, ಹದ್ದುಬಸ್ತು ಮಾಡಿ ನಿಖರವಾಗಿ ನಿವೇಶನ ಹಂಚಿಕೆ ಮಾಡುತ್ತೇವೆ.

     ಅಲ್ಲಿಯ ವರೆಗೂ ಪಕ್ಕದ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಿ ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಆ ಜಾಗವನ್ನು ತೆರವುಗೊಳಿಸಿ ಪಕ್ಕದ ಜಾಗದಲ್ಲಿ ಗುಡಿಸಲು ಹಾಕಿಕೊಂಡಿದ್ದರು. ಆದರೆ, ಈಗ ಒಂದು ವರ್ಷ ಕಳೆದರೂ ಸಹ ನಮಗೆ ನಿವೇಶನ ನೀಡಿಲ್ಲ ಎಂದು ಆರೋಪಿಸಿದರು.

ಕಳೆದ ಒಂದು ವಾರದ ಹಿಂದೆ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರನ್ನು ಭೇಟಿಯಾಗಿ, ಸಮಸ್ಯೆಯನ್ನು ಗಮನಕ್ಕೆ ತಂದಾಗ, ಆಯುಕ್ತರು ಅಭಿಯಂತರರನ್ನು ಕರೆಯಿಸಿ, ಧನವಿನ ಓಣಿಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ, ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೂ, ಸಹ ಅಭಿಯಂತರರು ಈ ವರೆಗೂ ಯಾವುದೇ ಕಾಮಗಾರಿ ಕೈಗೊಳ್ಳದೇ ಮೀನ-ಮೇಷ ಎಣಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

     ಇನ್ನೂ ಒಂದು ವಾರದೊಳಗಾಗಿಯೇ ಸಂಬಂಧಪಟ್ಟ ಅಧಿಕಾರಿಗಳು, ಧನವಿನ ಓಣಿಯಲ್ಲಿ ಕುಡಿಯುವ ನೀರಿನ ಪೈಲ್ ಲೈನ್ ಅಳವಡಿಸಿ, ಯುಜಿಡಿ ಸಂಪರ್ಕ ಕಲ್ಪಿಸಿ, ರಸ್ತೆ ಅಭಿವೃದ್ಧಿ ಕೈಗೊಂಡು ನಿವೇಶನ ಹಂಚಿಕೆ ಮಾಡಿಕೊಡಬೇಕು. ಪರಿಶಿಷ್ಟರಿಗೆ ಸೀಮಿತವಾಗಿರುವ ಜಾಗವನ್ನು ಸೋನಾಲಿಕಾ ಟ್ರಾಕ್ಟರ್ ಶೋ ರೂಂ ನವರು ಒತ್ತುವರಿ ಮಾಡಿದ್ದು, ತಕ್ಷಣವೇ ಅದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು .ಸುದ್ದಿಗೋಷ್ಠಿಯಲ್ಲಿ ಧನವಿನ ಓಣಿ ನಿವಾಸಿಗಳಾದ ಎನ್.ರೇಣುಕಮ್ಮ, ಎಂ.ರೇಣುಕಮ್ಮ, ಎಂ.ಚಂದ್ರಪ್ಪ, ಹಾಲಮ್ಮ ಕೊಟ್ರೇಶ್, ಅಂಜಿನಪ್ಪ, ಮನೋಜ್, ಜೈತುಂಬಿ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link