ಇಂದಿರಾ ಕ್ಯಾಂಟೀನ್ ಅವ್ಯವಹಾರ ತನಿಖೆಗೆ ಆದೇಶ

ತುಮಕೂರು

      ಬಡವರಿಗಾಗಿ ಆರಂಭಿಸಲಾದ ಇಂದಿರಾಕ್ಯಾಂಟೀನ್ ನಿರ್ವಹಣೆಯ ದೈನಂದಿನ ಲೆಕ್ಕದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿದ್ದು, ಈ ಅವ್ಯವಹಾರ ನಗರ ಪಾಲಿಕೆ ವಲಯದಲ್ಲಿ ಸಾಕಷ್ಟು ಚರ್ಚೆಗೆ ಈಡುಮಾಡಿದೆ. ದಿನಂಪ್ರತಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ ತಲಾ 500 ಟೋಕನ್‍ಗಳನ್ನು ವಿತರಿಸಲಾಗಿರುವ ಮಾಹಿತಿ ಇದೀಗ ಸಾಕಷ್ಟು ವಿವಾದಗಳಿಗೂ ಕಾರಣವಾಗಿದೆ.

      ಪ್ರತಿದಿನ ಇಷ್ಟು ಟೋಕನ್‍ಗಳು ಕರಾರುವಕ್ಕಾಗಿ ವಿತರಣೆಯಾದವೇ..? ಎಲ್ಲ ದಿನಗಳಂದು ಇಷ್ಟು ಸಂಖ್ಯೆಯ ಗ್ರಾಹಕರು ಫಲಾನುಭವಿಗಳಾಗಿದ್ದಾರೆಯೇ ಎಂಬ ಅನುಮಾನಗಳು ವ್ಯಾಪಕವಾಗಿವೆ.ಟೋಕನ್ ನೀಡುವುದರಲ್ಲಿಯೇ ವಂಚನೆ ಎಸಗಿರುವುದಾಗಿ ಮಾಹಿತಿ ಹೊರಬಂದಿದ್ದು, ಈ ಬಗ್ಗೆ ಆ.26ರ ಸೋಮವಾರ ದಂದು ವರದಿ ಪ್ರಕಟಗೊಂಡ ಬೆನ್ನಲ್ಲೇ ಪಾಲಿಕೆಯಲ್ಲಿ ಆಂತರಿಕ ಸಭೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

      ಬಡವರಿಗೆ ಸರಬರಾಜು ಮಾಡುವ ಊಟದಲ್ಲೂ ವಂಚನೆ ಎಸಗಿ ಹಣ ಮಾಡುವ ವ್ಯಕ್ತಿಗಳು ಹುಟ್ಟಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಷ್ಟೋ ಜನ ಅನ್ನ ಹಾಕಿ ಮಾನವೀಯತೆ ಮೆರೆದರೆ ಕೆಲವರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬಡವರ ಅನ್ನಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಸಾಕ್ಷಿಯಾಗಿರುವುದು ತುಮಕೂರಿನ ಇಂದಿರಾ ಕ್ಯಾಂಟೀನ್‍ಗಳು.

      ತುಮಕೂರು ಮಹಾನಗರ ಪಾಲಿಕೆಯ 4 ಕ್ಯಾಂಟೀನ್‍ಗಳಲ್ಲಿ ಪ್ರತಿನಿತ್ಯ ಬೆಳಗ್ಗೆ 2000 ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ 4000 ಊಟ ಸರಬರಾಜು ಮಾಡುತ್ತಿರುವುದಾಗಿ ಲೆಕ್ಕ ತೋರಿಸಲಾಗುತ್ತಿದೆ. ಪ್ರತಿ ಕ್ಯಾಂಟೀನ್‍ಗಳಲ್ಲಿ ಬೆಳಗ್ಗೆ 500, ಮಧ್ಯಾಹ್ನ 500 ಹಾಗೂ ಸಂಜೆ 500 ಗ್ರಾಹಕರ ಲೆಕ್ಕ. ಈ ಲೆಕ್ಕವೇ ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

       ಹೌದು ಒಂದು ಲೆಕ್ಕಪುಸ್ತಕದಲ್ಲಿ ಟೋಕನ್‍ಗಳನ್ನು ನೀಡಲಾದ ಬಿಲ್‍ಗಳನ್ನು ಅಂಟಿಸಿ ಲೆಕ್ಕ ಬರೆದಿಟ್ಟರೆ ಇನ್ನೊಂದು ಲೆಕ್ಕಪುಸ್ತಕದಲ್ಲಿ ದಿನಕ್ಕೆ 500 ಟೋಕನ್‍ಗಳನ್ನು ವಿತರಣೆ ಮಾಡಲಾಗಿದೆ ಎಂದು ನಮೂದು ಮಾಡಿರುವುದು ಈಗ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಇಲ್ಲಿ ರಾಮಕೃಷ್ಣನ ಲೆಕ್ಕ ನಡೆಯುತ್ತಿರುವುದು, ನೈಜ ಮಾಹಿತಿ ಒಂದಾದರೆ ನಮೂದಾಗುತ್ತಿರುವ ಮಾಹಿತಿ ಮತ್ತೊಂದು ಎಂಬಂತಾಗಿದೆ.

      ಅಲ್ಲದೆ ಒಂದು ತಿಂಗಳ ದೈನಂದಿನ ಲೆಕ್ಕಾಚಾರಗಳನ್ನು ಒಂದೇ ಬಾರಿ ಬರೆದಿಟ್ಟು ತಿಂಗಳ ಕೊನೆಗೆ ಮಾಹಿತಿ ಕೊಡುವ ತಂತ್ರಗಾರಿಕೆಯೂ ಅಡಗಿದೆ. ಇದರಲ್ಲಿ ಅದೆಷ್ಟು ಜನ ಸೇರಿಕೊಂಡಿದ್ದಾರೋ ತನಿಖೆಯಿಂದ ಹೊರಬರಬೇಕಾಗಿದೆ.

       ಇತ್ತೀಚೆಗೆ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿದ್ದ ಮಹಾನಗರ ಪಾಲಿಕೆ ಮಹಾಪೌರರಾದ ಲಲಿತಾರವೀಶ್ ಮತ್ತವರ ತಂಡ ಅಲ್ಲಿನ ಲೆಕ್ಕಪುಸ್ತಕಗಳನ್ನು ಪರಿಶೀಲನೆ ಮಾಡಿದಾಗ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಆಯುಕ್ತರ ಬಳಿ ಚರ್ಚೆ ಮಾಡಲು ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಆಯುಕ್ತರು ಸ್ಮಾರ್ಟ್ ಸಿಟಿ ಕಾರ್ಯಗಳಲ್ಲಿ ನಿರತರಾಗಿದ್ದರು. ಜೊತೆಗೆ ನಾಲ್ಕನೇ ಶನಿವಾರ ರಜೆ, ಭಾನುವಾರ ರಜೆ ಇದ್ದಕಾರಣ ಚರ್ಚೆ ಮಾಡಲು ಆಗಿಲ್ಲ ಎಂಬುದು ತಿಳಿದು ಬಂದಿದೆ.

         ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ದೂರು ನೀಡಲು ಮುಂದಾಗಿದ್ದು, ಈ ವಿಚಾರವಾಗಿ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ದೂರನ್ನು ನೀಡಬೇಕೋ ಅಥವಾ ಬೇಡವೋ ಎಂಬ ವಿಚಾರವಾಗಿ ಎರಡು ತಂಡಗಳು ರಚನೆಯಾಗಿದ್ದು, ಒಂದು ತಂಡ ದೂರು ನೀಡಬೇಕು ಎಂದು ಪಟ್ಟು ಹಿಡಿದರೆ, ಇನ್ನೊಂದು ತಂಡ ದೂರು ನೀಡುವುದು ತಕ್ಷಣಕ್ಕೆ ಬೇಡ ಎಂಬ ನಿಲುವು ತಳೆದಿರುವ ಬಗ್ಗೆಯೂ ತಿಳಿದುಬಂದಿದೆ.

        ಇದಾದ ಬಳಿಕ ಮಂಗಳವಾರದಂದು ಸಂಜೆ ಐದು ಗಂಟೆ ಸುಮಾರಿಗೆ ಪಾಲಿಕೆಯ ಸಭಾಂಗಣದಲ್ಲಿ ಆಯುಕ್ತರು, ಮಹಾಪೌರರು, ಉಪಮಹಾಪೌರರು, ವಿವಿಧ ಸ್ಥಾಯಿಸಮಿತಿ ಅಧ್ಯಕ್ಷರು, ಸದಸ್ಯರು ಗಳೊಂದಿಗೆ ಆಂತರಿಕ ಚರ್ಚೆಗಳು ನಡೆದಿದ್ದು, ಪಾಲಿಕೆ ಆಯುಕ್ತ ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದ್ದುದರ ಜೊತೆಗೆ ರಿಜಿಸ್ಟಾರ್‍ನಲ್ಲಿ ನಮೂದು ಮಾಡಲಾದ ಮಾಹಿತಿಯನ್ನು ತೋರಿಸಿ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link