ಚಿಕ್ಕನಾಯಕನಹಳ್ಳಿ : ಬಸ್ ನಿಲ್ದಾಣದಲ್ಲಿ ವೇಳಾಪಟ್ಟಿ ಪ್ರಕಟಿಸಲು ಒತ್ತಾಯ!

 ಚಿಕ್ಕನಾಯಕನಹಳ್ಳಿ : 
      ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಬರುವ, ಹೋಗುವ ಸಮಯದ ಮಾಹಿತಿ ತಿಳಿಯದೆ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಿದ್ದಾರೆ.
      ಈ ಮೊದಲು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬಸ್‍ನ ಸಮಯವನ್ನು ನಿಲ್ದಾಣದ ಗೋಡೆಯ ಮೇಲೆ ಬರೆಯಲಾಗಿತ್ತು, ಇದರಿಂದ ಸಾವಿರಾರು ಮಂದಿ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು, ಆದರೆ ಇತ್ತೀಚೆಗೆ ಗೋಡೆಯ ಮೇಲೆ ಬರೆದ ಸಮಯವು ಅಳಿಸಿ ಹೋಗಿದೆ, ಪ್ರತಿ ಬಸ್ ಬರುವ ಮಾಹಿತಿ ತಿಳಿಯದೆ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದಾರೆ.
     ಇಲ್ಲಿಂದ ಬೆಂಗಳೂರು, ತುಮಕೂರು, ಹೊಸದುರ್ಗ, ಮೈಸೂರು, ತುರುವೇಕೆರೆ, ತಿಪಟೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆ ಹಾಗೂ ಗ್ರಾಮೀಣ ಭಾಗಗಳಿಗೆ ಬಸ್ ಸಂಪರ್ಕವಿದೆ, ಬರುವ ಪ್ರಯಾಣಿಕರು ತಾವು ತಲುಪಬೇಕಾದ ಊರುಗಳಿಗೆ ಬಸ್ಟಾಂಡ್ ಒಳಗೆ ಬರುವ ಪ್ರತಿ ಬಸ್‍ನ ಕಂಡಕ್ಟರ್, ಡ್ರೈವರ್ ಅಥವಾ ನಿಲ್ದಾಣದ ಅಧಿಕಾರಿ ಬಳಿ ತೆರಳಿ ಈ ಬಸ್ ಯಾವ ಊರಿಗೆ ಹೋಗುತ್ತದೆ, ನಾವು ತಲುಪಬೇಕಾದ ಬಸ್ ಯಾವ ಸಮಯಕ್ಕೆ ಬರುತ್ತದೆ ಎಂದು ಕೇಳುತ್ತಿರುವುದು ದಿನನಿತ್ಯ ಸಾಮಾನ್ಯವಾಗಿದೆ.
     ನಿಲ್ದಾಣದಲ್ಲಿ ಕೆಎಸ್‍ಆರ್‍ಟಿಸಿ ವಿಭಾಗದ ಅಧಿಕಾರಿಗಳು ಬಸ್ ಸಮಯವನ್ನು ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಕಾಣುವಂತೆ ತಿಳಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂದು ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಕಾಶ್ ಹೇಳಿದರು.
      ಹೆಚ್ಚಿನ ಬಸ್‍ಗೆ ಒತ್ತಾಯ  ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರು, ತುಮಕೂರು ಭಾಗಗಳಿಗೆ ಸಂಚರಿಸುವ ಜನ ಹೆಚ್ಚಾಗಿದ್ದಾರೆ, ಬೆಳಗ್ಗೆಯಾಗುತ್ತಿದ್ದಂತೆ ಕೆಲಸಕ್ಕೆ ತೆರಳುವ, ಕಾಲೇಜಿಗೆ ಹೋಗುವ ಹಾಗೂ ಬೇರೆ ಊರುಗಳಿಗೆ ಪ್ರಯಾಣಿಸುವ ಜನರು ಬಸ್ ಗಾಗಿ ಕಾದು ಸೀಟು ಹಿಡಿಯುವುದೇ ಒಂದು ಸಾಧನೆ ಮಾಡಿದಂತೆ ಆಗುತ್ತಿದೆ.
      ಇನ್ನೂ ತುಮಕೂರಿನಿಂದ ಚಿಕ್ಕನಾಯಕನಹಳ್ಳಿ, ಹುಳಿಯಾರು, ಹೊಸದುರ್ಗ ವಿಭಾಗಕ್ಕೆ ಸಂಚರಿಸುವ ಪ್ರಯಾಣಿಕರು ಸಂಜೆ 4 ಗಂಟೆಯಾಗುತ್ತಿದಂತೆ ಹೆಚ್ಚಾಗುತ್ತಿದ್ದಾರೆ, ಈ ವೇಳೆ ತುಮಕೂರಿನಿಂದ ಈ ಭಾಗಕ್ಕೆ ಹೆಚ್ಚಿನ ಬಸ್ ಇಲ್ಲದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ.
       ಸಂಜೆ 4 ಗಂಟೆಯಿಂದ ರಾತ್ರಿ 8 ರವರೆಗೆ ತುಮಕೂರಿನಿಂದ ಹೊಸದುರ್ಗ ಮಾರ್ಗಕ್ಕೆ ಹಾಗೂ ಮುಂಜಾನೆ 6 ರಿಂದ 10ರವರೆಗೆ ಹೊಸದುರ್ಗ, ಹುಳಿಯಾರು, ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ತುಮಕೂರು ಭಾಗಕ್ಕೆ ಹೆಚ್ಚಿನ ಬಸ್ ಸೌಕರ್ಯ ಒದಗಿಸುವಂತೆ ಸಾರ್ವಜನಿಕರು ಪತ್ರಿಕೆಯ ಮೂಲಕ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link