ಬೆಂಗಳೂರು
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರಾಗಿಣಿಗೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿದ್ದರಾಮಯ್ಯ, ಡ್ರಗ್ಸ್ ಮಾಫಿಯಾ ಬಗ್ಗೆ ಅಧಿವೇಶನದಲ್ಲಿ ಮಾತಾಡುತ್ತೇನೆ.
ಡ್ರಗ್ಸ್ ನಮ್ಮ ಕಾಲದಲ್ಲೂ ಇತ್ತು. ಅವರ ಕಾಲದಲ್ಲೂ ಇತ್ತು, ಎಲ್ಲರ ಕಾಲದಲ್ಲೂ ಡ್ರಗ್ಸ್ ಇತ್ತು. ನಾವೂ ಕೂಡ ಅದನ್ನು ಮಟ್ಟಹಾಕಲು ಯತ್ನಿಸಿದ್ದೆವು. ಈಗ ಅವರ ಕಾಲದಲ್ಲಿ ಇದು ಬಯಲಿಗೆ ಬಂದಿದೆ. ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಆಗಬೇಕು. ರಾಗಿಣಿಗೂ ಬಿಜೆಪಿಗೂ ಸಂಬಂಧ ಇಲ್ಲ ಅಂತಾರೆ. ಆದರೆ, ಆಕೆ ಬಿಜೆಪಿ ಪರ ಪ್ರಚಾರ ಮಾಡಿರೋದಕ್ಕೆ ಸಾಕ್ಷಿ ಇದೆ. ಫೋಟೋಗಳು, ವೀಡಿಯೋಗಳು ಇವೆ ಎಂದು ಬಿಜೆಪಿ ವಿರುದ್ಧವೇ ಸಿದ್ದರಾಮಯ್ಯ ಆರೋಪಿಸಿದರು.
ರಾಜಕಾರಣಿಗಳ ಮಕ್ಕಳೇ ಇರಲೀ, ರಾಜಕಾರಣಿಗಳೇ ಇರಲಿ, ಯಾರೇ ಇರಲಿ ಡ್ರಗ್ಸ್ ಕೇಸಲ್ಲಿ ಶಿಕ್ಷೆಯಾಗಲಿ. ನಮಗೂ ಮಾಧ್ಯಮಗಳಿಂದ ತಿಳಿಯುತ್ತಿದೆ. ಯಾರೇ ಇದ್ದರೂ ತನಿಖೆ ಆಗಲಿ. ಡ್ರಗ್ಸ್ ಮಟ್ಟ ಹಾಕೋಕೆ ನಮ್ಮ ಅವಧಿಯಲ್ಲೂ ಪ್ರಯತ್ನ ಮಾಡಿದ್ದೆವು. ಈಗ ಹೆಚ್ಚಾಗಿ ಬಯಲಿಗೆ ಬರ್ತಿದೆ. ಎನ್ಸಿಬಿ ಈಗ ಎಲ್ಲವನ್ನೂ ಪತ್ತೆ ಹಚ್ಚುತ್ತಿದೆ. ನಾರ್ಕೋಟಿಕ್ ಆ್ಯಕ್ಟ್ ಇದೆ, ಅದರ ಪ್ರಕಾರ ಕ್ರಮ ತೆಗೆದುಕೊಳ್ಳಲಿ ಎಂದರು.
ಇನ್ನು, ಬಿಐಇಸಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಸಿದ್ದರಾಮಯ್ಯ, ಮಾಧ್ಯಮಗಳಲ್ಲಿ ನಾನು ಕಮೀಷನರ್ ಮಾತು ನೋಡಿದ್ದೇನೆ. ಅಗತ್ಯವಿಲ್ಲದಿದ್ರೂ ಮಾತಾಡಿದ್ದಾರೆ. ಕೋವಿಡ್ ಸೆಂಟರ್ ಅಗತ್ಯವಿಲ್ಲ ಅಂತ ಮಾತನಾಡಿದ್ದಾರೆ. ಅವರು ಯಾವ ಕಾರಣಕ್ಕೆ ಮುಚ್ಚಿದ್ದಾರೆ ನೋಡೋಣ ಎಂದರು.
ಜಮೀರ್ ಅಹ್ಮದ್ ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಎವಿಡೆನ್ಸ್ ಇದ್ದರೆ ಯಾರಾದರೂ ಆಗಲಿ ತನಿಖೆ ಮಾಡಲಿ. ರಾಗಿಣಿಗೂ ನಮ್ಮ ಪಕ್ಷಕ್ಕೆ ಸಂಬಂಧವಿಲ್ಲ. ಅವರು ಕ್ಯಾಂಪೇನ್ ಎಲ್ಲಿ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ, ಅದು ಮುಂದುವರಿಯಲಿ. ಯಾರೇ ಇರಲಿ ಆಕ್ಷ್ಯನ್ ತೆಗೆದುಕೊಳ್ಳಲಿ. ಇದಕ್ಕೆ ನಮ್ಮಅಭ್ಯಂತರವೇನಿಲ್ಲ. ರಾಜಕಾರಣಿಗಳು ಇದ್ರೂ ಸರಿ, ಯಾರಾದ್ರೂ ಸರಿ. ಆದಿತ್ಯ ಅಳ್ವ ಇರಲಿ, ಯಾರೇ ಇರಲಿ. ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ. ತಪ್ಪಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಆರೋಪಿಗಳನ್ನ ಬಿಡಿಸಲು ಸಚಿವರು ಪ್ರಭಾವ ವಿಚಾರಕ್ಕೆ ಮಾತಾಡಿದ ಸಿದ್ದರಾಮಯ್ಯ, ಯಾರಾದರೂ ಆ ರೀತಿ ಮಾಡಿದ್ರೆ ತಪ್ಪು. ಅದರ ಇನ್ಫಾರ್ಮೇಷನ್ ನಾವು ಕಲೆಕ್ಟ್ ಮಾಡ್ತೇವೆ. ಡಿಜೆಹಳ್ಳಿ ಗಲಭೆ, ಬಿಲ್ಗಳ ಬಗ್ಗೆಯೂ ಮಾತನಾಡ್ತೇನೆ. ಸದನದಲ್ಲಿ ಎಲ್ಲ ವಿಚಾರಗಳನ್ನ ಮಾತನಾಡ್ತೇವೆ. ಬಿಜೆಪಿ ನಾಯಕರ ಮೇಲಿನ ಕೇಸ್ ವಾಪಸ್ ವಿಚಾರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅದು ಅಧಿಕೃತವಾದರೆ ಸದನದಲ್ಲಿ ಪ್ರಸ್ತಾಪ ಮಾಡ್ತೇವೆ ಎಂದರು.ರಾಜ್ಯದ ಕೈಗಾರಿಕಾ ಕ್ಷೇತ್ರ 17ಕ್ಕೆ ಕುಸಿತವಾಗಿದೆ. ನಾವಿದ್ದಾಗ 8 ಸ್ಥಾನದಲ್ಲಿದ್ದೆವು. ಈಗ 17ನೇ ಸ್ಥಾನಕ್ಕೆ ಬಂದಿದೆ. ಈಗ ಇರೋದು ಯಾವ ಸರ್ಕಾರನಪ್ಪಾ, ಅದನ್ನ ಮೊದಲು ಅವರು ಹೇಳಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
ಶಿಕ್ಷಕರಿಗೆ ಸಂಬಳ ಕೊಡ್ತಿಲ್ಲ. ಸಿಲಿಂಡರ್ ಸಬ್ಸಿಡಿ ರದ್ಧು ಮಾಡಿದ್ದಾರೆ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಕಟ್ ಮಾಡಿದ್ದಾರೆ. ಇದರ ಬಗ್ಗೆ ಮೊದಲು ಮಾತನಾಡ್ರಪ್ಪಾ. ಸರ್ಕಾರ ನಡೆಸೋಕೆ ಆಗದಿದ್ದರೆ ಕೆಳಗಿಳಿಯಿರಿ. ನಿರ್ಮಲಾ ಸೀತಾರಾಮನ್ ಏನ್ ಹೇಳ್ತಾರೆ? ಇವತ್ತು ಏಕಾನಮಿ ಹಾಳಾಗಬೇಕಿದ್ದರೆ ಮೋದಿ ಸರ್ಕಾರವೇ ಕಾರಣ. ಜಿಡಿಪಿ ಎಲ್ಲಿಗೆ ಕುಸಿದಿದೆ ಗೊತ್ತಿಲ್ವಾ? ಇಷ್ಟೊಂದು ಕೆಳಮಟ್ಟಕ್ಕೆ ಜಿಡಿಪಿ ಇಳಿದಿರಲಿಲ್ಲ. 23% ಜಿಡಿಪಿ ಕುಸಿದಿದೆ. ಸುಮಾರು 18 ಲಕ್ಷ ಕೋಟಿ ಜಿಡಿಪಿ ಕುಸಿದಿದೆ ಎಂದು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/08/siddaramaiah.gif)