ಬ್ಯಾಡಗಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದಕ್ಕೆ ಕಾರಣರಾದವರಿಗೆ ಹೈಕಮಾಂಡ್ ಮಣೆ ಹಾಕುತ್ತಿದ್ದು ವರಿಷ್ಠರ ನಡುವಳಿಕೆಯಿಂದ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ, ವಾರದೊಳಗೆ ಎಲ್ಲವನ್ನೂ ಸರಿಪಡಿಸುವಂತೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಸ್.ಆರ್.ಪಾಟೀಲ ಕಾಂಗ್ರೆಸ್ ವರಿಷ್ಟರಿಗೆ ಗಡುವು ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸೋಲಿಸಲು ಪಕ್ಷದಲ್ಲೇ ಷಡ್ಯಂತ್ರ ರೂಪಿಸಲಾಗಿತ್ತು, ಅದಾಗ್ಯೂ ನನ್ನ ವೈಯಕ್ತಿಕ ಶ್ರಮದಿಂದ ಸುಮಾರು 71 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದೇನೆ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ಗೆ ನಿಷ್ಟೆಯಾಗಿ ಕೆಲಸ ಮಾಡಿದ್ದರಿಂದಲೇ ಜನರು ನನಗೆ ಆಶೀರ್ವದಿಸಿದ್ದಾರೆ, ಆದರೆ ಇದೀಗ ಕ್ಷೇತ್ರದಿಂದ ಹೊರಗಿನವರು ನಮ್ಮ ತಾಲೂಕಿನಲ್ಲಿ ರಾಜಕಾರಣ ಮಾಡಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರು.
ಪಕ್ಷದಲ್ಲೇನಾಗುತ್ತಿದೆ ತಿಳಿಯುತ್ತಿಲ್ಲ: ಪಕ್ಷದಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ, ಪಕ್ಷಕ್ಕೆ ನಿಷ್ಟೆ ತೋರದವರಿಗೂ ಸಹ ತಾಲೂಕ ಘಟಕದಲ್ಲಿ ಹುದ್ದೆಗಳು ಸಿಗುತ್ತಿವೆ, ಇದನ್ನೆಲ್ಲಾ ನೋಡಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ನಮ್ಮನ್ನೂ ನಂಬಿಕೊಂಡು ಕೆಲ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ ಮತ್ತು ದುಡಿಯುತ್ತಿದ್ದಾರೆ, ಅಂತಹವರನ್ನು ಗುರ್ತಿಸಿ ಸೂಕ್ತ ಸ್ಥಾನಮಾನಗಳನ್ನು ಕೊಡುವ ಮೂಲಕ ಆವರ ಶ್ರಮವನ್ನು ಗೌರವಿಸಬೇಕಾಗುತ್ತದೆ, ಪಕ್ಷದಲ್ಲಿ ಏನೂ ನಡೆಯುತ್ತಿದೆ ಎಂಬುದು ಇಂದಿಗೂ ಅರ್ಥವಾಗುತ್ತಿಲ್ಲ ಎಂದರು.
ನೈತಿಕವಾಗಿ ಹೊಣೆ ಹೊತ್ತುಕೊಳ್ಳಲು ಸಿದ್ಧರಾಗಿ..?: ಸೋಲಿನ ಆತ್ಮಾವಲೋಕನ ಮಾಡಿಕೊಂಡಿದ್ದೇನೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದರೂ ಪಕ್ಷ ವಿರೋಧಿ ಚಟುವಟಕೆಗಳಿಂದ ಅನಿವಾರ್ಯವಾಗಿ ಸೋಲಬೇಕಾಯಿತು, ಹೀಗಿದ್ದರೂ ನೈತಿಕವಾಗಿ ಸೋಲಿನ ಹೊಣೆ ಹೊತ್ತುಕೊಳ್ಳಲು ನಾನು ಸಿದ್ಧನಾಗಿದ್ದೇನೆ ಆದರೆ ನನ್ನ ಸಹಕಾರದೊಂದಿಗೆ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದವರೂ ನೈತಿಕ ಹೊಣೆಹೊತ್ತುಕೊಳ್ಳಲು ಸಿದ್ಧರಿರುವವರೇ ಎಂದು ಪ್ರಶ್ನಿಸಿದರು..?
ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ: ಪದಾಧಿಕಾರಿಗಳ ಆಯ್ಕೆಯಿಂದ ಹಿಡಿದು, ಪಕ್ಷದ ವಿವಿಧೆಡೆ ಸದಸ್ಯರ ನಾಮ ನಿರ್ದೇಶನದವರೆಗೂ ಇನ್ನಿತರ ವಿಷಯಗಳಲ್ಲಿ ಪಕ್ಷದ ಹೈಕಮಾಂಡ್ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಬರುವ ಲೋಕಸಭಾ ಚುನಾವಣೆ ನಿರ್ಣಾಯಕ ಹಂತದಲ್ಲಿ ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೊಟ್ಟು ಮಾತು ಉಳಿಸಿಕೊಳ್ಳಲಾಗದ ಶಾಸಕ: ಸ್ಥಳೀಯ ಶಾಸಕರು ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಸಾರ್ವಜನಿಕರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಅಲ್ಲದೇ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಇದುವರೆಗೂ ನೀರಾವರಿ ಸೌಲಭ್ಯ ರೈತನಿಗೆ ತಲುಪಿಲ್ಲ, ಅಲ್ಲದೇ ಭೂಮಿ ಕೆಳೆದುಕೊಂಡವರಿಗೆ ಪರಿಹಾರದ ಹಣ ಸಿಕ್ಕಿಲ್ಲ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು ಕಳೆದ ಕಾಂಗ್ರೆಸ್ ಅವಧಿಯಲ್ಲಿನ ಕಾಮಗಾರಿಗಳನ್ನೇ ಮುಂದುವರೆಸಿಕೊಂಡು ಇಂದಿಗೂ ಹೋಗಲಾಗುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ತಾಲೂಕ ಶಕ್ತಿ ಸಂಚಾಲಕ ಜಗದೀಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
