ಬೆಂಗಳೂರು
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.
ಮತದಾರರ ಮನವೊಲಿಕೆ ಮನೆ ಮನೆ ಬಾಗಿಲಿಗೆ ತೆರಳಿ ಮತ ಯಾಚನೆ ಮಾಡುತ್ತಿದ್ದು, ಚುನಾವಣಾ ಕಣ ರಂಗೇರಿದೆ. ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಅಖಾಡಕ್ಕೆ ಇಳಿದಿದ್ದಾರೆ. ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಂಟಿಯಾಗಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದು, ವಿರೋಧ ಪಕ್ಷವಾದ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಭಾರೀ ಕಸರತ್ತು ನಡೆಸಿವೆ.
ದೋಸ್ತಿ ಪಕ್ಷಗಳ ಒಗ್ಗಟ್ಟನ್ನು ಛಿದ್ರ ಮಾಡಲು ಬಿಜೆಪಿ ಕೂಡ ಅಣಿಯಾಗಿದ್ದು, ಮೈತ್ರಿ ಸರ್ಕಾರದ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದೆ. ಒಟ್ಟಿನಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬುದನ್ನು ಇದೇ ಶನಿವಾರ ಮತದಾರರು ನಿರ್ಧರಿಸಲಿದ್ದಾರೆ.
ಐದು ಮತಕ್ಷೇತ್ರಗಳಲ್ಲಿ 6,453 ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಇವುಗಳಲ್ಲಿ 1,502 ಸೂಕ್ಷ್ಮ ಮತಗಟ್ಟೆಗಳು, ಮಹಿಳೆಯರಿಗಾಗಿ 57 ಪಿಂಕ್ ಹಾಗೂ ವಿಕಲಚೇತನರಿಗಾಗಿ 26 ಮತಗಟ್ಟೆಗಳನ್ನು ತೆರೆಯಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಛಾಯಾಗ್ರಾಹಕರು ಹಾಗೂ ಅಂತರ್ಜಾಲ ಪ್ರಸಾರ ವ್ಯವಸ್ಥೆ ಮತ್ತು ಕಣ್ಗಾವಲು ವೀಕ್ಷಕರನ್ನು ನೇಮಿಸಲಾಗುತ್ತದೆ. ಬಂದೋಬಸ್ತ್ಗಾಗಿ ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆ (ಸಿಆರ್ಪಿಎಫ್) 39 ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.
ಚುನಾವಣಾ ಅಕ್ರಮಗಳಿಗೆ ಚುನಾವಣಾ ಆಯೋಗದ ಕಡಿವಾಣ ಹಾಕಲು ಹಲವಾರು ಕ್ರಮಗಳನ್ನು ತೆಗೆದುಕೊಂಡು ಹದ್ದಿನ ಕಣ್ಣಿಟ್ಟಿದೆ. ಆದರೂ ಚುನಾವಣಾ ಅಕ್ರಮಗಳ ವರದಿಗಳು ಬರುತ್ತಿವೆ.
ಐದೂ ಕ್ಷೇತ್ರಗಳಲ್ಲಿ ಸಣ್ಣ ಪುಟ್ಟ ಸಭೆಗಳು, ಸಮುದಾಯಗಳ ಸಭೆಗಳು ನಡೆಯುತ್ತಿವೆ. ದೇವಸ್ಥಾನಗಳು, ಛತ್ರಗಳಲ್ಲಿ ಸಭೆಗಳನ್ನು ನಡೆಸಿ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡಲಾಗುತ್ತಿದೆ. ಯುವ ಸಂಘಟನೆ, ಸ್ತ್ರೀಶಕ್ತಿ ಸಂಘಗಳು, ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡುತ್ತಿರುವ ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿರುವುದಲ್ಲದೆ ಉಡುಗೊರೆಗಳನ್ನು ನೀಡಿ ಮತದಾರರನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
