ತುಮಕೂರು![](https://prajapragathi.com/wp-content/uploads/2019/08/Padasale-2.gif)
![](https://prajapragathi.com/wp-content/uploads/2019/08/Padasale-2.gif)
ವಿಶೇಷ ವರದಿ:ಆರ್.ಎಸ್.ಅಯ್ಯರ್
“ದೀಪದ ಕೆಳಗೇ ಕತ್ತಲು” ಎಂಬುದು ಜನಪ್ರಿಯ ನಾಣ್ಣುಡಿ. ತುಮಕೂರು ತಾಲ್ಲೂಕು ಕಚೇರಿ ಆವರಣದಲ್ಲಿರುವ `ಪಡಸಾಲೆ’ಯನ್ನು ಗಮನಿಸಿದರೆ ಈ ಮಾತು ಇಲ್ಲಿ ಅಕ್ಷರಶಃ ಅನ್ವಯಿಸುವಂತಿದೆ.
ತುಮಕೂರು ನಗರವು ಜಿಲ್ಲಾ ಕೇಂದ್ರವಾಗಿದೆ. ನಗರದಲ್ಲಿರುವ ಮಿನಿ ವಿಧಾನಸೌಧವು ಜಿಲ್ಲೆಯ ಆಡಳಿತದ ಕೇಂದ್ರವೆನಿಸಿದೆ. ಇಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಇದೆ. ಆದರೆ ಇದೇ ಕಟ್ಟಡದಲ್ಲಿರುವ ತಾಲ್ಲೂಕು ಕಚೇರಿಯ `ಪಡಸಾಲೆ’ ಮಾತ್ರ ಆಡಳಿತಾಂಗದ ನಿರ್ಲಕ್ಷೃಕ್ಕೊಳಗಾಗಿದೆ.
ಅಂದು ಹೇಗಿತ್ತು?
`ಪಡಸಾಲೆ` (ಅಟಲ್ಜೀ ಜನಸ್ನೇಹಿ ಕೇಂದ್ರ) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಲ್ಲೊಂದು. ನಾಗರಿಕರು ಕಚೇರಿಯಲ್ಲಿ ಮೇಜಿನಿಂದ ಮೇಜಿಗೆ ಅಲೆಯದಂತೆ, ಮಧ್ಯವರ್ತಿಗಳ ಕಾಟವಿಲ್ಲದಂತೆ, ಒಂದೇ ಸೂರಿನಡಿ ಸುಲಭವಾಗಿ ಸರ್ಕಾರದ ವಿವಿಧ ಸೌಲಭ್ಯಯಗಳನ್ನು ಪಡೆಯುವಂತಿರಬೇಕೆಂಬ ಪರಿಕಲ್ಪನೆಯಿಂದ ರೂಪುಗೊಂಡ ವ್ಯವಸ್ಥೆಯಿದು. ತುಮಕೂರು ತಾಲ್ಲೂಕು ಕಚೇರಿಯಲ್ಲಿ ಈ ವ್ಯವಸ್ಥೆಯು 2016ರ ಜನವರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಸಿದ್ಧಗೊಂಡಿತ್ತು.
ಆಗಿನ ಗ್ರೇಡ್-2 ತಹಸೀಲ್ದಾರ್ (ಈಗ ನಿವೃತ್ತರು) ಜಿ.ಎಂ.ಸಣ್ಣಮುದ್ದಯ್ಯ ಅವರ ವೈಯಕ್ತಿಕ ಆಸ್ಥೆಯಿಂದ `ಪಡಸಾಲೆ’ಯು ಇಡೀ ತುಮಕೂರು ಜಿಲ್ಲೆಗೇ ಮಾದರಿಯೆಂಬಂತೆ ಸಿದ್ಧವಾಗಿತ್ತು (ಈ ಬಗ್ಗೆ ದಿನಾಂಕ 14-01-2016 ರ `ಪ್ರಜಾಪ್ರಗತಿ’ಯಲ್ಲಿ ವಿಶೇಷ ಲೇಖನ ಪ್ರಕಟವಾಗಿದ್ದುದನ್ನು ಗಮನಿಸಬಹುದು). ಅವರು ಕೈಗೊಂಡಿದ್ದ ನಿರ್ದಾಕ್ಷಿಣ್ಯ ಕ್ರಮಗಳಿಂದ ಮಧ್ಯಯವರ್ತಿಗಳ ಹಾವಳಿಗೆ ಬ್ರೇಕ್ ಬಿದ್ದಿತ್ತು. ಇದರಿಂದ ಅವರು ಮಧ್ಯವರ್ತಿಗಳ ಕೆಂಗಣ್ಣಿಗೂ ಗುರಿಯಾಗುವಂತಾಗಿತ್ತು. ಆಗ ಅಷ್ಟೊಂದು ಪರಿಣಾಮಕಾರಿಯಾಗಿ `ಪಡಸಾಲೆ’ ರೂಪುಗೊಂಡಿತ್ತು.
ಸಾರ್ವಜನಿಕರು ಸರ್ಕಾರದ ವಿವಿಧ ಸೌಲಭ್ಯಯಗಳನ್ನು ಪಡೆದುಕೊಳ್ಳಲು `ಪಡಸಾಲೆ’ಯಲ್ಲಿ ಒಟ್ಟು 7 ಪ್ರತ್ಯೇಕ ಕೌಂಟರ್ಗಳಿವೆ. ಒಂದೊಂದು ಕೌಂಟರ್ನಲ್ಲಿ ಒಂದೊಂದು ವಿಧದ ಸೌಲಭ್ಯಯವನ್ನು ಒದಗಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಹೊರಾವರಣದಲ್ಲಿ ಸಾರ್ವಜನಿಕರಿಗೆ ಬಿಸಿಲು-ಮಳೆಯಿಂದ ರಕ್ಷಣೆ ಒದಗಿಸಲು ಷೆಲ್ಟರ್ ನಿರ್ಮಿಸಲಾಗಿದೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುವಂತೆ ಪ್ರತಿ ಕೌಂಟರ್ ಮುಂದೆಯೂ ಸ್ಟೀಲ್ ಕಂಬಿಯನ್ನು (ರೈಲಿಂಗ್) ಅಳವಡಿಸಲಾಗಿದೆ.
ಇದಕ್ಕಾಗಿ ಆಗಿನ ಎಸ್.ಬಿ.ಎಂ. ಸಹಕಾರ ನೀಡಿ, 2 ಲಕ್ಷ ರೂ.ಗಳನ್ನು ವಿನಿಯೋಗಿಸಿತ್ತು. ಇನ್ನು ಇಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಹಿಂದಿನ ಶಾಸಕರ ನಿಧಿಯಿಂದ 1.15 ಲಕ್ಷ ರೂ. ವಿನಿಯೋಗಿಸಿ `ಶುದ್ಧ ಕುಡಿಯುವ ನೀರಿನ ಘಟಕ’ವನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಧ್ವವನಿವರ್ಧಕ ವ್ಯವಸ್ಥೆಯನ್ನೂ ಮಾಡಲಾಗಿತ್ತಲ್ಲದೆ, ಮಧ್ಯವರ್ತಿಗಳ ನಿಯಂತ್ರಣಕ್ಕೆ ಸಿ.ಸಿ. ಟಿವಿಯನ್ನೂ ಅಳವಡಿಸಲಾಗಿತ್ತು. ಹೀಗೆ ಸರ್ವವಿಧದಿಂದಲೂ `ಪಡಸಾಲೆ’ ಅಂದು ಸನ್ನದ್ಧವಾಗಿತ್ತು.
ಇಂದು ಹೇಗಾಗಿದೆ?
ಆದರೆ ಇಂದು `ಪಡಸಾಲೆ’ ಆಗಿನಂತೆ ಸುಸ್ಥಿತಿಯಲ್ಲಿಲ್ಲ. ಆಡಳಿತಾಂಗದ ಸಂಪೂರ್ಣ ನಿರ್ಲಕ್ಷೃಕ್ಕೊಳಗಾಗಿದೆ ಎಂಬುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ದೂರು.
![](https://prajapragathi.com/wp-content/uploads/2019/08/Padasale-1.gif)
ಕೌಂಟರ್ಗಳ ಮುಂದಿನ ಸ್ಥಳ ಸ್ವಚ್ಛವಾಗಿಲ್ಲ. ಕಸ ಮತ್ತು ಧೂಳಿನಿಂದ ತುಂಬಿರುತ್ತದೆ. ಈ ಅಸ್ವಚ್ಛ ಸ್ಥಳದಲ್ಲಿ ಸರತಿಯಲ್ಲಿ ನಿಂತುಕೊಂಡೇ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ದಿನವೂ ಈ ಸ್ಥಳವನ್ನು ಸ್ವಚ್ಛಗೊಳಿಸುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಕೌಂಟರ್ಗಳ ಮುಂದೆ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲಲು ಅನುಕೂಲವಾಗುವಂತೆ ಸ್ಟೀಲ್ ಕಂಬಿಗಳನ್ನು (ರೈಲಿಂಗ್) ಹಾಕಲಾಗಿದ್ದುದರಲ್ಲಿ ಅರ್ಧ ಭಾಗ ಈಗ ಹಾಳಾಗಿದೆ. ಮುರಿದು ಬಿದ್ದಿದೆ. ಆ ಕಂಬಿಗಳು ಯಾವಾಗ ಬೇಕಾದರೂ ಕಣ್ಮರೆಯಾಗಬಹುದಾಗಿದೆ!
`ಶುದ್ಧ ಕುಡಿಯುವ ನೀರಿನ ಘಟಕ’ ಎಂಬುದು ಈಗ ಇಲ್ಲಿ ನೆಪಮಾತ್ರಕ್ಕೆ ಮಾತ್ರ ಇರುವಂತಿದೆ. ಕೆಟ್ಟು ಹೋಗಿರುವ ಈ ಘಟಕ ಬಹು ದೀರ್ಘಕಾಲದಿಂದ ನಿರುಪಯುಕ್ತವಾಗಿದೆ. ಬಾಯಾರಿ ಬಂದವರಿಗೆ ಈಗ ಇಲ್ಲಿ ನೀರಿಲ್ಲ. ನಗರ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಬರುವ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/08/Padasale-1.gif)