ದಾವಣಗೆರೆ:
ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಹಾಗೂ ಜಿಪಂ ಸದಸ್ಯ ತೇಜಸ್ವಿ ಪಟೇಲ್ ನಿವಾಸಗಳಿಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ, ಬೆಂಬಲ ಕೋರಿದರು.
ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ನಿವಾಸಕ್ಕೆ ತೆರಳಿ, ಜೆ.ಹೆಚ್.ಪಟೇಲರ ಪುತ್ರ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಅದಕ್ಕೆ ಮಹಿಮಾ ಪಟೇಲ್ ಸಹ ಸಕಾರಾತ್ಮಕವಾಗಿ ಸ್ಪಂದಿಸಿದರು.
ನಂತರ ಕಾರಿಗನೂರು ಗ್ರಾಮದಲ್ಲಿ ಪಟೇಲರ ಸಹೋದರನ ಮತ್ತೊಂದು ಮನೆಗೆ ತೆರಳಿದ ಎಚ್.ಬಿ.ಮಂಜಪ್ಪ ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಿಪಂ ಸದಸ್ಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ.ಪಟೇಲರನ್ನು ಭೇಟಿ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ತಮ್ಮನ್ನು ಬೆಂಬಲಿಸಿ, ಗೆಲ್ಲಿಸುವಂತೆ ಮನವಿ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ ದಿವಂಗತ ಚನ್ನಯ್ಯ ಒಡೆಯರ್ ನಂತರ ತಮಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಹಿಂದುಳಿದ ವರ್ಗವನ್ನು ಪ್ರತಿನಿಧಿಸುವ ತಮಗೆ ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಲ್ಲಾ ಹಿರಿಯರ ಆಶೀರ್ವಾದ, ಮಾರ್ಗದರ್ಶನ ಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ತಮಗೆ ಪಕ್ಷವು ಲೋಕಸಭೆಗೆ ಸ್ಪರ್ಧಿಸಲು ಆದೇಶಿಸಿದ್ದು, ಈ ಬಾರಿ ತಮಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮತಯಾಚನೆ, ಪ್ರಚಾರಕ್ಕೆ ಕಾಲಾವಕಾಶವೂ ಕಡಿಮೆ ಇದೆ. ಇರುವಷ್ಟೇ ಸಮಯದಲ್ಲಿ ಇಡೀ ಕ್ಷೇತ್ರವನ್ನು, ಪ್ರತಿಯೊಂದು ಹಳ್ಳಿಗೂ ತಲುಪಿ, ಮತದಾರರ ಬಳಿ ಮತ ಯಾಚಿಸಲು ಮುಂದಾಗಿದ್ದೇನೆ. ಪಕ್ಷದ ಹಾಲಿ-ಮಾಜಿ ಶಾಸಕರು, ಮಾಜಿ ಸಚಿವರು, ಮೈತ್ರಿ ಪಕ್ಷ ಜೆಡಿಎಸ್ನ ಮಾಜಿ ಶಾಸಕರು, ಆ ಪಕ್ಷದ ಪದಾಧಿಕಾರಿಗಳು ಸಹಿತ ತಮ್ಮ ಪರವಾಗಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಜಾತ್ಯತೀತ ಶಕ್ತಿಯನ್ನು ಗೆಲ್ಲಿಸಿ, ಕೋಮುವಾದಿ ಪಕ್ಷವನ್ನು ಸೋಲಿಸಲು ಕೈ ಜೋಡಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರಿಗನೂರು ಗ್ರಾಮದ ಜೆಡಿಯು, ಜೆಡಿಎಸ್ ಮುಖಂಡರು, ಗ್ರಾಮದ ಹಿರಿಯರು, ಪಟೇಲರ ಅಭಿಮಾನಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
