ಬೆಂಗಳೂರು
ಮದ್ಯ ತೆಗೆದುಕೊಂಡು ಬಂದು ಚಿಲ್ಲರೆ ಕೊಡದ ಸ್ನೇಹಿತನ ಮುಖಕ್ಕೆ ಗುದ್ದಿ, ದೊಣ್ಣೆಯಿಂದ ಹೊಡೆದು ಬಾರ್ಬೆಂಡರ್ (ಕಂಬಿಕಟ್ಟುವ)ನೊಬ್ಬನನ್ನು ಪೇಂಟರ್ ಕೊಲೆ ಮಾಡಿರುವ ದುರ್ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಮಚಂದ್ರಾಪುರದ ದೇವ್ಪ್ರಸಾದ್ ಅಲಿಯಾಸ್ ಬ್ಲಡ್ ಬಾಬು (36)ಎಂದು ಕೊಲೆಯಾದವರನ್ನ ಗುರುತಿಸಲಾಗಿದೆ.
ಕೊಲೆಗೈದು ಪರಾರಿಯಾಗಿದ್ದ ಆರೋಪಿ ರಾಮಚಂದ್ರಾಪುರದ ಏರ್ಫೋರ್ಸ್ ಕಾಂಪೌಂಡ್ ಬಳಿಯ ಶ್ರೀನಿವಾಸ್ಮೂರ್ತಿ ಅಲಿಯಾಸ್ ಚಿನ್ನು (32)ನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ
ಬಾರ್ಬೆಂಡ್ಡಿಂಗ್ ಕೆಲಸ ಮಾಡುತ್ತಿದ್ದ ದೇವ್ಪ್ರಸಾದ್ ಹಾಗೂ ಪೇಯಿಂಟಿಂಗ್ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ಮೂರ್ತಿ ಇಬ್ಬರು 10 ವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರು ಜೊತೆಯಲ್ಲೇ ಕೆಲಸಕ್ಕೆ ಹೋಗುತ್ತಿದ್ದರು.
ಕಳೆದ ಏ. 1 ರಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಇಬ್ಬರು ಬೆಳಿಗ್ಗೆ 11ರ ವೇಳೆ ಮದ್ಯಪಾನ ಮಾಡಲು ಮುಂದಾಗಿದ್ದಾರೆ. ಮದ್ಯ ತರಲು ಶ್ರೀನಿವಾಸಮೂರ್ತಿ 500 ರೂ.ಗಳನ್ನು ಕೊಟ್ಟು ದೇವ್ಪ್ರಸಾದ್ನನ್ನು ಬಾರ್ಗೆ ಕಳುಹಿಸಿದ್ದ.ಮದ್ಯ ತೆಗೆದುಕೊಂಡು ಬಂದ ನಂತರ ಇಬ್ಬರು ಸೇರಿ ಕುಡಿದು ಅಮಲಿನಲ್ಲಿ ಮದ್ಯ ಖರೀದಿಸಿ ಉಳಿದ ಚಿಲ್ಲರೆ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.
ರೋಗದಿಂದ ಬಳಲುತ್ತಿದ್ದ
ಜಗಳ ವಿಕೋಪಕ್ಕೆ ತಿರುಗಿದಾಗ ದೇವ್ಪ್ರಸಾದ್ಗೆ ದೊಣ್ಣೆಯಿಂದ ಹೊಡೆದು ಮುಖಕ್ಕೆ ಬಲವಾಗಿ ಶ್ರೀನಿವಾಸಮೂರ್ತಿ ಗುದ್ದಿದ್ದಾನೆ. ಮೂಗಿನಿಂದ ರಕ್ತ ಬರಲು ಆರಂಭಿಸಿದ್ದು, ಮೊದಲೇ ರಕ್ತ ಹೆಪ್ಪುಗಟ್ಟದಿರುವ ರೋಗ(ಕಿಮೋಫಿಲಿಯಾ)ದಿಂದ ಬಳಲುತ್ತಿದ್ದ ದೇವ್ಪ್ರಸಾದ್, ಸಾಕಷ್ಟು ರಕ್ತ ಸೋರಿಕೆಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯಪುರ ಪೊಲೀಸ್ ಇನ್ಸ್ಪೆಕ್ಟರ್ ರಾಮಮೂರ್ತಿ ಅವರು ಪ್ರಕರಣ ದಾಖಲಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
