ಹಾನಗಲ್ಲ :
ಪರಿಸರ ನಾಶದಿಂದ ಜಾಗತಿಕ ತಾಪಮಾನ ಸಮತೋಲನ ಕಳೆದುಕೊಳ್ಳುತ್ತಿದೆ, ಕಾಡಿಲ್ಲದೆ ಮಳೆ ಇಲ್ಲ, ಮಳೆ ಇಲ್ಲದೆ ಬರ ಕಾಡುತ್ತಿದೆ, ಅರಣ್ಯ ನಾಶದಿಂದ ವಿನಾಶದತ್ತ ಮಾನವ ಕುಲ ಸಾಗುತ್ತಿರುವುದನ್ನು ಕಂಡೂ ಪರಿಸರ ಜಾಗೃತಿಗೆ ಮುಂದಾಗದೇ ಮಾನವ ಪರಿಸರದ ಶಾಪಕ್ಕೆ ಗುರಿಯಾಗುತ್ತಿದ್ದಾನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಜಾತಾ ಪಾಟೀಲ ಎಚ್ಚರಿಸಿದರು,
ರವಿವಾರ ಹಾನಗಲ್ಲಿನ ರೋಶನಿ ಸಮಾಜಸೇವಾ ಸಂಸ್ಥೆ ಆವರಣದಲ್ಲಿ ಹಿರಿಯ ಸಿವಿಲ್ ಜಡ್ಜ ಮತ್ತು ಜೆಎಂಎಫ್ಸಿ ನ್ಯಾಯಾಲಯ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ರೋಶನಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ಪರಿಸರ ದಿನಾಚರನೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಕಾಡು, ಗಿಡ ಕಡಿದು ಹಸಿರನ್ನು ನಾಶ ಮಾಡಬೇಡಿ. ಮನೆಗೊಂದು ಮರ ಊರಿಗೊಂದು ವನ ಘೋಷಣೆಯಾಗು ಉಳಿಯದೆ ಎಲ್ಲರೂ ಪಾಲಿಸುವಂತಾಗಬೇಕು. ನಮಗಾಗಿ ಕಾಡು ಉಳಿಸಲು ನಾವೇ ಮುಂದಾಗಬೇಕು ಎಂದರು.
ಸಿವಿಲ್ ನ್ಯಾಯಾದೀಶರಾದ ಎಫ್.ವಿ.ಕೆಳಗೇರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಇಂದಿನ ಬರಗಾಲಕ್ಕೆ ಅರಣ್ಯ ನಾಶವೇ ಕಾರಣ. ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಕೈಗೆಟುಕುವಂತಿದ್ದ ನೀರು ಈಗ ಸಾವಿರ ಅಡಿ ಕೊರೆದರೂ ಭೂಮಿಯಂದ ಸಿಗುತ್ತಿಲ್ಲ ಎಂಬ ಎಚ್ಚರಿಕೆ ಬೇಕಾಗಿದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಪರಿಸರದ ನಾಶ ಮನುಕುಲದ ನಾಶ, ಮಾನವ ಪ್ರಕೃತಿ ಆರಾಧಕನಾಗಬೇಕು, ವಿರೋಧಿಯಾಗಬಾರದು. ಪರಿಸರ ಸಂರಕ್ಷಣ ಕಾಯಿದೆ ಕಡ್ಡಾಯವಾಗಿ ಜಾರಿಗೊಳಿಸಬೇಕು. ಸಮಾಜಕ್ಕೆ ಮೂಲಭೂತ ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸಬೇಕು. ನೆಲ ಜಲ ಪರಿಸರ ಉಳಿಸಲು ಕಟಿಬದ್ಧರಾಗಬೇಕು. ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸಂಪೂರ್ಣ ನಿಷ್ಕ್ರೀಯರಾಗಿದ್ದಾರೆ. ಈ ಮಂಡಳಿಗಳು ಕ್ರಿಯಾಶೀಲವಾಗಿಲ್ಲ. ಕಾಡು ಉಳಿದರೆ ನಾಡು ಉಳಿಯುತ್ತದೆ. 12 ಲಕ್ಷ ಹೆಕ್ಟೇರ ಬಂಜರು ಭೂಮಿ ಕರ್ನಾಟಕದಲ್ಲಿ ಇದೆ. ಇಲ್ಲಿ ಗಿಡ ನೆಡುವ ಮೂಲಕ ಪರಿಸರ ಉಳಿಸಲು ಸಹಕಾರಿಯಾಗಬೇಕು ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಅಧ್ಯಕ್ಷತೆವಹಿಸಿದ್ದರು. ನ್ಯಾಯವಾದಿಗಳಾದ ರವಿಬಾಬು ಪೂಜಾರ ,ಹಾದಿಮನಿ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪರಮೇಶ್ವರ ಪೇಳನವರ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಅರಿಶಿನದ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಮುಂದಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
