ಚಿತ್ರದುರ್ಗ:
ಲಂಬಾಣಿಗರ ವಲಸೆ ತಪ್ಪಿಸಲು ಆಗ್ರಹಿಸಿ ಕರ್ನಾಟಕ ತಾಂಡ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ ಪತ್ರ ಚಳುವಳಿ ನಡೆಸಿದ ನಂತರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಲಂಬಾಣಿ ಸಮುದಾಯದವರು ಉದ್ಯೋಗ ಹುಡುಕಿಕೊಂಡು ಉತ್ತರ ಕರ್ನಾಟಕ ಸೇರಿ ಮಧ್ಯಕರ್ನಾಟಕದಿಂದ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗುವಂತ ಪ್ರವೃತ್ತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಲಸೆ ಹೋಗುವಂತಹವರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದು, ಹಾಗೆಯೇ ವಲಸೆ ಹೋಗುವ ಸಂದರ್ಭದಲ್ಲಿ ಅಪಘಾತ, ಅನಾರೋಗ್ಯದಂತ ಸಮಸ್ಯೆಗಳಿಗೆ ಈಡಾಗಿ ತಮ್ಮಗಳ ಬದುಕನ್ನೇ ಕಳೆದುಕೊಳ್ಳುವಂತ ಪರಿಸ್ಥಿತಿಯನ್ನು ಲಂಬಾಣಿ ಸಮುದಾಯ ಎದುರಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಲಂಬಾಣಿ ಜನರ ವಲಸೆ ತಪ್ಪಿಸಲು ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಬೇಕು ಮತ್ತು ಲಂಬಾಣಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕೌಶಲ್ಯ ತರಬೇತಿಗಳನ್ನು ನೀಡಬೇಕು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗಗಳನ್ನು ಕಲ್ಪಿಸಬೇಕು. ವಲಸಿಗರ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿಶೇಷ ಶಾಲೆಗಳನ್ನು ತೆರೆಯಬೇಕೆಂದು ಪತ್ರ ಚಳುವಳಿ ನಡೆಸಿದ ಪ್ರತಿಭಟನಾಕಾರರು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಲಂಬಾಣಿ ಸಮುದಾಯದಲ್ಲಿ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳಗಳು ನಡೆಯುತ್ತಿದ್ದು, ಇಂತಹ ಘಟನೆಗಳಿಂದ ಈ ಸಮುದಾಯವನ್ನು ಕಾಪಾಡಬೇಕಾದ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು.
ರಾಜ್ಯದ ವಿವಿಧ ಭಾಗಗಳಲ್ಲಿ ಕಾಫಿ ತೋಟಗಳಲ್ಲಿ ಗೋವಾದ ಬೀಚ್ಗಳಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆಯುತ್ತಿದ್ದು, ಇಂತಹ ಮಹಿಳೆಯರಿಗೆ ರಕ್ಷಣೆ ನೀಡುವಂತ ವ್ಯವಸ್ಥೆ ಜಾರಿಯಾಗಬೇಕೆಂದು ಒತ್ತಾಯಿಸಿದರು.
ಲಂಬಾಣಿ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗಾಗಿ ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ಅಸ್ತಿತ್ವಕ್ಕೆ ತರಲಾಗಿದ್ದು, ನಿಗಮದಿಂದ ಸಮಾಜದ ಏಳಿಗೆ ಸಾಧ್ಯವಾಗುತ್ತಿಲ್ಲವೆಂಬ ಅಂಶ ಮನವರಿಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಪತ್ರ ಚಳುವಳಿ ಮತ್ತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಪ್ರತಿಭಟನೆ ನೇತೃತ್ವವನ್ನು ರಕ್ಷಣಾ ವೇದಿಕೆಯ ವಸಂತನಾಯ್ಕ, ವಸಂತನಾಯ್ಕ, ಜಗದೀಶ್ನಾಯ್ಕ, ರವಿಕುಮಾರ್ನಾಯ್ಕ, ಶಿವಕುಮಾರ್, ಶಂಕರ್ನಾಯ್ಕ ಇನ್ನು ಮುಂತಾದವರು ಇದ್ದರು.
ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ಕುಮಾರ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಆರ್.ಮೂರ್ತಿ, ಲಿಂಗಾಯಿತ ಸಮಾಜದ ಮುಖಂಡ ಸತೀಶ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
