ಜನತಾ ಕಫ್ರ್ಯೂಗೆ ಜನ ಸ್ಪಂದನೆ: ನಗರದಲ್ಲಿ ಸಂಚಾರ, ವ್ಯವಹಾರ ಸ್ಥಗಿತ

ತುಮಕೂರು
     ಕೊರೊನಾ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕಫ್ರ್ಯೂಗೆ ತುಮಕೂರಿನಲ್ಲಿ ನಾಗರೀಕರ ವ್ಯಾಪಕ ಬೆಂಬಲ ದೊರೆಯಿತು. ಭಾನುವಾರ ಪೂರ್ತಿ ನಗರದಲ್ಲಿ ವಾಹನ ಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.
     ಆಸ್ಪತ್ರೆ, ಔಷಧಾಲಯ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಹಿವಾಟು ಸ್ಥಗಿತಗೊಂಡು ನಗರ ಸ್ತಬ್ಧವಾಗಿತ್ತು.
    ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳ ಸೇವೆ ಇರಲಿಲ್ಲ. ಆಟೋಗಳು ರಸ್ತೆಗಿಳಿಯಲಿಲ್ಲ. ಸರಕು ಸಾಗಾಣಿಕೆ ವಾಹನಗಳ ಸಂಚಾರವೂ ಇರಲಿಲ್ಲ. ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ಇಲ್ಲಿಂದ ಹೊರಡುವುದಾಗಲಿ, ಹೊರಗಿನಿಂದ ಬರುವುದಾಗಲಿ ಇರಲಿಲ್ಲ. ನಗರ ಸಾರಿಗೆ ಬಸ್‍ಗಳ ಸೇವೆಯೂ ಇರಲಿಲ್ಲ. ಖಾಸಗಿ ಬಸ್‍ಗಳು ನಿಲ್ದಾಣ ಬಿಟ್ಟು ಹೊರಡಲಿಲ್ಲ. ತುರ್ತು ಸಂದರ್ಭದಲ್ಲಿ ಕೆಎಸ್‍ಆರ್‍ಟಿ ಸಿ ಬಸ್ ಸೇವೆ ಒದಗಿಸಲು ನಿರ್ಧರಿಸಲಾಗಿತ್ತು. ಆದರೆ ಅಂತಹ ಸಂದರ್ಭ ಬಾರದೆ ಸೇವೆಗೆ ಅವಕಾಶವಾಗಲಿಲ್ಲ. ಸದಾ ಜನಜಂಗುಳಿ ಇರುತ್ತಿದ್ದ ನಗರದ ಎರಡೂ ಬಸ್ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ರೈಲ್ವೇ ನಿಲ್ದಾಣದಲ್ಲೂ ಪರಿಸ್ಥಿತಿ ಇದಕ್ಕಿಂತಾ ಭಿನ್ನವಾಗಿರಲಿಲ್ಲ.
 
    ಯುಗಾದಿ ಹಬ್ಬದ ಸಂದರ್ಭದಲ್ಲಿ ಖರೀದಿಗೆ ಜನ ಸಂದಣಿ ಇರುತ್ತಿದ್ದ ಎಂಜಿ ರಸ್ತೆ, ಮತ್ತಿತರ ರಸ್ತೆಗಳತ್ತ ಜನ ಸುಳಿಯಲಿಲ್ಲ. ಇಲ್ಲಿನ ಎಲ್ಲಾ ವಾಣಿಜ್ಯ ಮಳಿಗೆಗಳು ಬಂದ್ ಆಗಿದ್ದವು. ಪ್ರಮುಖ ರಸ್ತೆ, ವೃತ್ತಗಳಲ್ಲೂ ಜನ ಕಾಣಲಿಲ್ಲ. ಅಲ್ಲಲ್ಲ್ಲಿ ಪೊಲೀಸರು ಬಂದೋಬಸ್ತಿನಲ್ಲಿದ್ದುದು ಕಂಡುಬಂದಿತು. ಪೊಲೀಸ್ ವಾಹನಗಳು ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗಿದವು.
    ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯ ಎಲ್ಲಾ ಅಂಗಡಿಗಳು ಬಂದ್ ಆಗಿದ್ದವು. ನಗರದ ಮದ್ಯ ಮಾರಾಟ ವ್ಯಾಪಾರಿಗಳ ಸಂಘ ಜನತಾ ಕಫ್ರ್ಯೂಗೆ ಬೆಂಬಲ ನೀಡಿದ್ದು ನಗರದ ಎಲ್ಲಾ ಮದ್ಯದಂಗಡಿಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಭಾನುವಾರ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಹಾಗೆ ನಗರದ ಎಲ್ಲಾ ಉದ್ದಿಮೆಗಳನ್ನು ಸ್ಥಗಿತಗೊಳಿಸುವಂತೆ ನಗರಪಾಲಿಕೆ ಆಡಳಿತ ಸೂಚನೆ ನೀಡಿತ್ತು.
    ಬೆಳಗ್ಗೆ 7 ಗಂಟೆಯಿಂದ ರಾತ್ರಿವರೆಗೆ ಇದೇ ಪರಿಸ್ಥಿತಿ ಮುಂದುವರೆದಿತ್ತು. ವಾಣಿಜ್ಯ ಪ್ರದೇಶಗಳ ಅಂಗಡಿಗಳಂತೆ, ಬಡಾವಣೆಗಳ ಸಣ್ಣಪುಟ್ಟ ಅಂಗಡಿಗಳೂ ಭಾನುವಾರ ಬಂದ್ ಆಗಿದ್ದವು. ಪ್ರಮುಖ ರಸ್ತೆಗಳಲ್ಲಿ ವಾಹನ, ಜನ  ಸಂಚಾರ ಇಲ್ಲದೆ ಸಂಚಾರಿ ಪೊಲೀಸರಿಗೆ ಕೆಲಸವೇ ಇಲ್ಲದಂತಾಗಿತ್ತು. ನಗರದ ಎಲ್ಲಾ ವೃತ್ತಗಳ ಸಿಗ್ನಲ್ ಲೈಟ್‍ಗಳನ್ನು ಸ್ಥಗಿತಗೊಳಿಸಲಾಗಿತ್ತು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಇತ್ತಾದರೂ ಹೊರ ರೋಗಿಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಖಾಸಗಿ ಆಸ್ಪತ್ರೆಗಳಲ್ಲೂ ಇದೇ ಪರಿಸ್ಥಿತಿ ಇತ್ತು.
    ಆಸ್ಪತ್ರೆ ಮತ್ತಿತರ ತುರ್ತು ಕೆಲಸಗಳಿಗೆ ಹೋಗಿ ಬರುವವರಿಗೆ ಬಸ್, ಆಟೋ ಇಲ್ಲದೆ ಸಮಸ್ಯೆಯಾಯಿತು. ಇದರ ಹೊರತಾಗಿ,  ಜನತಾ ಕಫ್ರ್ಯೂನಿಂದ ಸಾರ್ವಜನಿಕರಿಗೆ ಅಷ್ಟಾಗಿ ತೊಂದರೆ ಕಂಡುಬರಲಿಲ್ಲ. ಕಾರಣ ಹೆಚ್ಚಿನ ಜನ ಕಫ್ರ್ಯೂ ಹಿನ್ನೆಲೆಯಲ್ಲಿ ಹಿಂದಿನ ದಿನವೇ ಅಗತ್ಯ ಪದಾರ್ಥ ಖರೀದಿಸಿ ಭಾನುವಾರ ಮನೆಯಲ್ಲೆ ಉಳಿಯಲು ಸಿದ್ಧತೆ ಮಾಡಿಕೊಂಡಂ ತಿತ್ತು . ಬೆಳಗ್ಗೆ 7 ಗಂಟೆವರೆಗೆ ಹಾಲು, ತರಕಾರಿ ಮತ್ತಿತರ ಅಂಗಡಿಗಳು ತೆರೆದಿದ್ದು ಅಗತ್ಯವಿರುವವರು ಖರೀದಿ ಮಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link