ಹುಳಿಯಾರು
ಹುಳಿಯಾರಿನಲ್ಲಿ ಇತ್ತೀಚೆಗಷ್ಟೆ ಕೊರೊನಾ ಪಾಸಿಟಿವ್ ಬಂದಿದ್ದ ಕ್ಷೌರಿಕನ ಬಳಿ ಹೇರ್ ಕಟ್ ಮಾಡಿಸಿದ್ದವರ ಪೈಕಿ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.
ಹುಳಿಯಾರಿನ ತಿಪಟೂರು ರಸ್ತೆಯ ಒಣಕಾಲುವೆಯ ವಾಸಿಯಾಗಿದ್ದ ಕ್ಷೌರಿಕನು ದುರ್ಗಮ್ಮನಗುಡಿ ರಸ್ತೆಯಲ್ಲಿ ಹೇರ್ ಸಲೂನ್ ನಡೆಸುತ್ತಿದ್ದರು. ಇವರಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಸಮೀಪದ ಮೇಲನಹಳ್ಳಿಯ ಕೋವಿಡ್ ಕೇಂದ್ರಕ್ಕೆ ಚಿಕಿತ್ಸೆಗಾಗಿ ಮೂರ್ನಾಲ್ಕು ದಿನಗಳ ಹಿಂದಷ್ಟೆ ಕಳುಹಿಸಿಕೊಡಲಾಗಿತ್ತು.
ಈತ ಗಂಟಲು ದ್ರವ ಪರೀಕ್ಷೆಗೆ ಒಳಪಡುವ ಹಿಂದಿನ ಎರಡ್ಮೂರು ದಿನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಕ್ಷೌರ ಮಾಡಿದ್ದರು. ಅದರಲ್ಲಿ ಕೇಶವಾಪುರದ ನರಸಿಂಹರಾವ್ ಕಾಂಪ್ಲೆಕ್ಸ್ ವಾಸಿಯಾಗಿರುವ 28 ವರ್ಷದ ಯುವಕ ಸಹ ಒಬ್ಬನಾಗಿದ್ದು ಈತನಿಗೆ ವಾರದಿಂದಲೂ ಜ್ವರ ಕಾಡುತ್ತಿತ್ತು. ಅನುಮಾನಗೊಂಡ ಪೋಷಕರು ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಗಂಟಲು ದ್ರವ ಕೊಟ್ಟು ಕೊರೊನಾ ಪರೀಕ್ಷೆ ಮಾಡಿಸಿದರು.
ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಡವಾದ ಹಿನ್ನೆಲೆಯಲ್ಲಿ ಯುವಕನನ್ನು ಚಿಕಿತ್ಸೆಗಾಗಿ ಮೇಲನಹಳ್ಳಿಯ ಕೋವಿಡ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಅಲ್ಲದೆ ಇವರು ವಾಸವಾಗಿದ್ದ ನರಸಿಂಹರಾವ್ ಕಾಂಪ್ಲೆಕ್ಸ್ ಸೀಲ್ಡೌನ್ ಮಾಡಲಾಗಿದೆ. ಈ ಕಾಂಪ್ಲೆಕ್ಸ್ನಲ್ಲಿ 5 ಕುಟುಂಬಗಳು ವಾಸವಾಗಿದ್ದು ಎಲ್ಲರನ್ನೂ ಹೋಂ ಕ್ವಾರಂಟೈನ್ನಲ್ಲಿಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ