ಹುಳಿಯಾರು
ಹುಳಿಯಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಳಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಸಿಆರ್ಪಿ ದಯಾನಂದ್ ಮನವಿ ಮಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ನಿತ್ಯ ಮಳೆ ಬರುತ್ತಿರುವುದರಿಂದ ಶಾಲಾ ಆವರಣದಲ್ಲಿ ಮಳೆ ನೀರು ನಿಂತು ಕೆಸರಾಗುತ್ತದೆ. ಇಲ್ಲಿಗೆ ನಿತ್ಯ ಬರುವ ಹಂದಿಗಳು ಕೆಸರು ಗುಂಡಿಯಲ್ಲಿ ಹೊರಳಾಡಿ ಶಾಲೆಯ ಗೋಡೆಗೆ ಉಜ್ಜುತ್ತವೆ, ಇಲ್ಲದೆ ಮೈ ಕೊಡವಿ ಮಕ್ಕಳಿಗೆ ಸಿಡಿಸುತ್ತಿವೆ.
ಇನ್ನು ಶಾಲಾ ಆವರಣದಲ್ಲಿ ಬಿಸಿಯೂಟ ಸಿದ್ಧವಾಗುವ ಸಮಯಕ್ಕೆ ಹಾಜರಾಗುವ ಹಂದಿಗಳು ಮಕ್ಕಳು ನೆಮ್ಮದಿಯಿಂದ ಊಟ ಮಾಡಲು ಬಿಡದೆ ಉಪಟಳ ನೀಡುತ್ತವೆ. ಮಕ್ಕಳು ಊಟ ಮಾಡಿದ ತಟ್ಟೆ ತೊಳೆಯಲು ಸಾಧ್ಯವಾಗದಂತೆ ಮೇಲರಗುತ್ತವೆ. ಇದರಿಂದ ಮಕ್ಕಳು ಭಯಭೀತರಾಗಿ ಎಲ್ಲೆಂದರಲ್ಲಿ ತಟ್ಟೆ ತೊಳೆದು ಶಾಲೆ ಸೇರುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಹಂದಿಗಳನ್ನು ಹಿಡಿಸುವಂತೆ ಪಟ್ಟಣದ ಅನೇಕರು ಮನವಿ ಕೊಟ್ಟಿದ್ದರೂ ಪಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದರು. ಹಾಗಾಗಿ ಈ ವಿಷಯವನ್ನು ಸಾರ್ವಜನಿಕರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದ ಪರಿಣಾಮ ಹಿಡಿಸುವಂತೆ ಸೂಚನೆ ನೀಡಲಾಗಿತ್ತು.
ಆದರೆ ಪಪಂ ಅಧಿಕಾರಿಗಳು ಹಂದಿ ಮಾಲೀಕರ ಸಭೆ ಕರೆದು ಖಡಕ್ ಎಚ್ಚರಿಕೆ ನೀಡಿರುವುದಾಗಿ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯದಲ್ಲಿ ಹರಿಬಿಟ್ಟು ಸುಮ್ಮನಾಗಿದ್ದಾರೆ. ವಾಸ್ತವವಾಗಿ ಪಟ್ಟಣದಲ್ಲಿ ಇನ್ನೂ ಹಂದಿಗಳ ಹಾವಳಿ ಹೆಚ್ಚಾಗಿದ್ದು ಇದರ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ