ಕೊರಟಗೆರೆ
ಅಶಕ್ತ ಜನರ ಆಶ್ರಯಕ್ಕೆ ಬರುವಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಂಧ್ಯಾ ಸುರಕ್ಷಾ, ವಿಧವಾ, ವೃದ್ದಾಪ್ಯ ಹಾಗೂ ಅಂಗವಿಕಲ ವೇತನಗಳ ಹಂಚಿಕೆಯ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಇತ್ತೀಚೆಗೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಕಂದಾಯ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೋಳಾಲ ಹೋಬಳಿ ವ್ಯಾಪ್ತಿಯ 31 ಫಲಾನುಭವಿಗಳಿಗೆ ಸ್ಥಳದಲ್ಲಿಯೆ ಸಂಬಂಧಪಟ್ಟ ಅಧಿಕಾರಿಗಳ ಮುಖೇನ ಪರಿಶೀಲನೆ ನಡೆಸಿ ತಹಸೀಲ್ದಾರ್ ನಾಗರಾಜು ಹಾಗೂ ಉಪ ತಹಸೀಲ್ದಾರ್ ಮಧುಚಂದ್ರರ ಮುಖೇನ ಹಂಚಿಕೆ ಮಾಡಲಾಯಿತು. ಅರ್ಜಿ ಸಲ್ಲಿಸಲಾದ 31 ಫಲಾನುಭವಿಗಳಲ್ಲಿ 15 ಸಂಧ್ಯಾ ಸುರಕ್ಷಾ ವೇತನ, 7 ವೃದ್ದಾಪ್ಯ ವೇತನ, 6 ವಿಧವಾ ವೇತನ ಹಾಗೂ 3 ಅಂಗವಿಕಲ ವೇತನ ಸೇರಿದಂತೆ 31 ಅರ್ಜಿದಾರರಿಗೆ ಸ್ಥಳದಲ್ಲಿಯೆ ಆದೇಶ ಕಾಪಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜು ಮಾತನಾಡಿ, ಪಿಂಚಣಿಗೆ ಸಂಬಂಧಿಸಿದ ಅರ್ಜಿದಾರರ ಅರ್ಜಿಗಳನ್ನು ಪಡೆದು, ಆದಷ್ಟು ಬೇಗ ಆದೇಶ ಪ್ರತಿಗಳನ್ನು ವಿತರಿಸಲಾಗುವುದು. ಪಿಂಚಣಿ ವಿಚಾರದಲ್ಲಿ ಜನರು ಕಂದಾಯ ಇಲಾಖೆಗೆ ಅನಾವಶ್ಯಕವಾಗಿ ಅಲೆದಾಡುವ ಅವಶ್ಯಕತೆಯಿಲ್ಲ. ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಖೆ ಸ್ಪಂದಿಸಲಿದೆ. ಮಧ್ಯವರ್ತಿಗಳ ಮೂಲಕ ಹಣ ಖರ್ಚು ಮಾಡಿಕೊಂಡು ಫಲಾನುಭವಿಗಳು ಸಂಕಟ ಅನುಭವಿಸುತ್ತಿರುವುದರ ಮಾಹಿತಿ ಅರಿತು ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸುವ ಮುಖೇನ ಸ್ಥಳದಲ್ಲಿಯೆ ಫಲಾನುಭವಿಗಳಿಗೆ ಆದೇಶ ಕಾಪಿ ವಿತರಿಸುವ ವಾತಾವರಣ ಕಲ್ಪಿಸುವುದರ ಜೊತೆಗೆ ಇನ್ನೂ ಹೆಚ್ಚೆಚ್ಚು ಇಂತಹ ಪಿಂಚಣಿ ಅದಾಲತ್ಗಳನ್ನು ತಾಲ್ಲೂಕಿನ ಇತರೆ ಹೋಬಳಿಗಳಲ್ಲಿಯೂ ಹಮ್ಮಿಕೊಳ್ಳಲಾಗುವುದು ಎಂದರು.
ಉಪ ತಹಸೀಲ್ದಾರ್ ಮಧುಚಂದ್ರ ಮಾತನಾಡಿ, ಪಿಂಚಣಿ ಅದಾಲತ್ಗೆ ಸಂಬಂಧಿಸಿದಂತೆ 31 ಅರ್ಜಿದಾರರಿಗೆ ಸ್ಥಳದಲ್ಲಿಯೆ ಆದೇಶ ಕಾಪಿಯನ್ನು ವಿತರಿಸಿಸಲಾಗಿದೆ. ಪಿಂಚಣಿ ಅದಾಲತ್ ಸಂದರ್ಭದಲ್ಲಿ 13 ಅರ್ಜಿಗಳು ಬಂದಿದ್ದು, ಇವುಗಳನ್ನು ಸಹ ಅತಿ ತ್ವರಿತವಾಗಿ ಒಂದೆರಡು ದಿನಗಳಲ್ಲಿ ವಿತರಿಸಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಮತ್ತೊಂದು ಪಿಂಚಣಿ ಅದಾಲತ್ ಸಂದರ್ಭದಲ್ಲಿ ಬರುವಂತಹ ಎಲ್ಲಾ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿಯೆ ಪರಿಶೀಲಿಸಿ ಆದೇಶ ಕಾಪಿ ವಿತರಿಸುವ ವಾತಾವರಣ ಕಲ್ಪಿಸಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/16-oct-photo.jpg)