ಹೊಸಪೇಟೆ :
ಕಳೆದ ಒಂದು ವಾರದಿಂದ ಕಾಕುಬಾಳು ಸುತ್ತಮುತ್ತ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಕುರಿ ಮತ್ತು ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ಕೂಡಲೇ ಅರಣ್ಯ ಇಲಾಖೆಯವರು ಇತ್ತ ಗಮನ ಹರಿಸಿ ಮುಂದೆ ಆಗುವ ಅನಾಹುತ ತಪ್ಪಿಸಬೇಕೆಂದು ತಾಲೂಕು ಕುರಿಗಾರರ ಹಿತರಕ್ಷಣಾ ಹೋರಾಟ ಸಮಿತಿ ಸದಸ್ಯರು ಅರಣ್ಯಾಧಿಕಾರಿ ಎನ್.ಬಸವರಾಜು ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಕುರಿಗಾರರ ಹಿತರಕ್ಷಣಾ ಹೋರಾಟ ಸಮಿತಿ ಸಂಚಾಲಕ ಎಚ್.ಮಹೇಶ್ ಮಾತನಾಡಿ, ಕೆಲವು ದಿನಗಳ ಹಿಂದೆ ಕಾಕುಬಾಳು ಗ್ರಾಮದ ಎರಡೋಣಿ ಈರಣ್ಣ ಅವರ ಹೊಲದಲ್ಲಿ ರಾತ್ರಿ ವೇಳೆ ಚಿರತೆ ದಾಳಿ ಮಾಡಿ ಕುರಿ ಮರಿಗಳನ್ನು ಹಾಗು ನಾಯಿಗಳನ್ನು ಹೊತ್ತೊಯ್ದಿದೆ. ಹಾಗೆಯೇ ಕುರಿಗಳ ಪಕ್ಕದಲ್ಲಿ ಕುರಿ ಕಾಯುವ ಹುಡುಗರು ಮಲಗುವುದರಿಂದ ಅವರ ಮೇಲೆ ದಾಳಿ ಮಾಡುವ ಸಂಭವವಿದೆ. ಇತ್ತೀಚೆಗೆ ಸೋಮಲಾಪುರ ಗ್ರಾಮದಲ್ಲಿ ಚಿರತೆ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ ಘಟನೆ ನಮ್ಮ ಕಣ್ಣ ಮುಂದೆ ಇದೆ. ಹೀಗಾಗಿ ಅರಣ್ಯ ಇಲಾಖೆಯವರು ಕೂಡಲೇ ಎಚ್ಚೆತ್ತು, ಕಾಕುಬಾಳು ಗ್ರಾಮದ ಕೆಂಚನಕಲ್ಲು ಪ್ರದೇಶದಲ್ಲಿ ಬೋನು ಇರಿಸಿ, ಚಿರತೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಮಿತಿಯ ಸಂಚಾಲಕರಾದ ಆರ್.ಕೊಟ್ರೇಶ್, ಎರ್ರಿಸ್ವಾಮಿ, ಪ್ರಕಾಶ್ ಕಾಕುಬಾಳು, ಎರಡೋಣಿ ಈರಣ್ಣ, ವಕೀಲರಾದ ಎಲ್.ಎಸ್.ಆನಂದ, ದಮ್ಮೂರ್ ರಾಘವೇಂದ್ರ, ಮುಖಂಡರಾದ ತಾರಳ್ಳಿ ಜಂಬಯ್ಯ, ಸೊಂಟಿ ಅಯ್ಯಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
