ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಬೆಂಬಲಿಸಿ : ರಮೇಶ್‍ಬಾಬು

ಚಳ್ಳಕೆರೆ

    ಕಳೆದಬಾರಿ ಆಗ್ನೇಯ ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾದ ನಾನು ಕೇವಲ ಒಂದೂವರೆ ವರ್ಷ ಅವಧಿಯಲ್ಲಿ ವಿಧಾನ ಪರಿಷತ್‍ನ ಒಳಗೂ. ಹೊರಗೂ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಪ್ರಸ್ತುತ ಪದವೀಧರರ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದು, ಪ್ರಬುದ್ದಮಾನ ಮತದಾರರಾದ ತಾವು ನನ್ನನ್ನು ಆಯ್ಕೆ ಮಾಡಿದಲ್ಲಿ ನಿರುದ್ಯೋಗವೂ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ತಿಳಿಸಿದರು.

    ಅವರು, ನಗರದ ಛೇಂಬರ್ ಆಫ್ ಕಾರ್ಮಸ್ ಸಭಾಂಗಣದಲ್ಲಿ ಪಕ್ಷ ಏರ್ಪಡಿಸಿದ್ದ ಪದವೀಧರ ಕ್ಷೇತ್ರದ ಮತದಾರರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಪಕ್ಷದ ನೇತಾರರಾದ ಡಿ.ಕೆ.ಶಿವಕುಮಾರ್, ಎಸ್.ಸಿದ್ದರಾಮಯ್ಯ ಸೇರಿದಂತೆ ಹಲವಾರು ಹಿರಿಯರ ಸಹಕಾರದಿಂದ ಈ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿ ಜನರ ಸೇವೆ ಮಾಡುವೆ. ಪದವೀಧರ ಮತದಾರರ ಸಮಸ್ಯೆಗೆ ಹಗಲುರಾತ್ರಿ ಕಾರ್ಯನಿರ್ವಹಿಸುವೆ. ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೆ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಸದಾಕಾಲ ಜನರ ಶ್ರೇಯಸನ್ನು ಬಯಸುವ ಕಾಂಗ್ರೆಸ್ ಪಕ್ಷಕ್ಕೆ ತಾವು ಸದಾ ಬೆಂಬಲಿಸಬೇಕೆಂದು ಮನವಿ ಮಾಡಿದರು.

    ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಕಾಂಗ್ರೆಸ್ ಪಕ್ಷ ಹಲವಾರು ಹಂತದಲ್ಲಿ ಜನರ ಶ್ರೇಯಸ್ಸಿಗಾಗಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಈ ಬಗ್ಗೆ ನಿರ್ಲಕ್ಷ ತಾಳಿದೆ. ಅಧಿಕಾರದ ಅಮಲು ಬಿಜೆಪಿಯ ನೆತ್ತಿಗೇರಿದ್ದು, ಕೇವಲ ಹಣ ಗಳಿಸಲು ಬಿಜೆಪಿ ಅಧಿಕಾರ ನಡೆಸುತ್ತಿದೆ. ಆದ್ದರಿಂದ ಪದವೀಧರ ಮತದಾರರು ರಮೇಶ್‍ಬಾಬುರವರನ್ನು ಗೆಲ್ಲಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ರಾಜ್ಯದ ಪ್ರಗತಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ರಾಜ್ಯದ ವಿಧಾನ ಪರಿಷತ್‍ಗೆ ತನ್ನದೇಯಾದ ವೈಶಿಷ್ಟ್ಯತೆ ಇದೆ. ಮೇಲ್ಮನೆ ಎಂದರೆ ಅದು ಬುದ್ದಿ ಜೀವಿಗಳ ಕೇಂದ್ರವಾಗಿದೆ. ಸದಾಕಾಲ ಕಾರ್ಯನಿರ್ವಹಿಸುವ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ರಮೇಶ್‍ಬಾಬುರಂತಹ ಸದ್ಗುಣ ವ್ಯಕ್ತಿ ಮೇಲ್ಮನೆ ಸದಸ್ಯರಾದರೆ ನಿರುದ್ಯೋಗವೂ ಸೇರಿದಂತೆ ನೂರಾರು ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಈ ಕ್ಷೇತ್ರದ ಪದವೀಧರ ಮತದಾರರು ಮೊದಲ ಪ್ರಾಶಸ್ತ್ಯದ ಮೂಲಕ ಅವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಮಾಜಿ ಸದಸ್ಯ ಬಾಬುರೆಡ್ಡಿ, ಹಿರಿಯ ಮುಖಂಡ ಟಿ.ಪ್ರಭುದೇವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ರಾಜ್ಯ ಮಹಿಳಾ ಕಾರ್ಯದರ್ಶಿ ಶುಭವೇಣುಗೋಪಾಲ್, ಕಾಂಗ್ರೆಸ್ ಮುಖಂಡ ದಿವಾಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಬಿ.ಯೋಗೇಶ್‍ಬಾಬು, ತಾಲ್ಲೂಕು ಪಂಚಾಯಿತಿ ಸದಸ್ಯರಾದ ತಿಮ್ಮಾರೆಡ್ಡಿ, ಜಿ.ವೀರೇಶ್, ನಗರಸಭಾ ಸದಸ್ಯರಾದ ರಮೇಶ್‍ಗೌಡ, ವೈ.ಪ್ರಕಾಶ್, ಎಂ.ಜೆ.ರಾಘವೇಂದ್ರ, ಯುವ ಘಟಕದ ಅಧ್ಯಕ್ಷ ಕೆ.ಎಂ.ಶಿವಕುಮಾರ್‍ಸ್ವಾಮಿ, ಎಸ್.ಎಚ್.ಸೈಯದ್, ಸೂರನಾಯಕ, ಸಿ.ಟಿ.ವೀರೇಶ್, ಜಿ.ಟಿ.ವೀರಭದ್ರಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link