ಕೊಟ್ಟೂರು

ಪಟ್ಟಣದ ಮುಖ್ಯ ರಸ್ತೆ, ಚರಂಡಿ ನಿರ್ಮಾಣ ಮತ್ತಿತರ ಕಾಮಗಾರಿ ಪ್ರಾರಂಭಿಸಲು ಲೋಕೋಪಯೋಗಿ ಇಲಾಖೆ ಭಾನುವಾರ ಮುಂದಾಗಿರುವುದನ್ನು ಕೆಲವರು ವಿರೋದಿಸಲು ಮುಂದಾದರೆ ಮತ್ತೆ ಕೆಲವರು ಕಾಮಗಾರಿ ಆರಂಭಗೊಳ್ಳಲೇ ಬೇಕು ಎಂದು ಹಠ ಇಡಿದು ಜೋರು ಧ್ವನಿಯಿಂದ ಕೂಗಾಡಿದ ಘಟನೆ ನಡೆಯಿತು. ಕೊನೆಗೂ ಚರಂಡಿ ಕಾಮಗಾರಿ ಆರಂಭಿಸುವ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಪೊಲೀಸರ ಸಹಕಾರ ಪಡೆದು ಪ್ರಾರಂಭಿಸಿದ ಘಟನೆ ಕೊಟ್ಟೂರಿನಲ್ಲಿ ನಡೆಯಿತು.
ಏನಿದು ವಿವಾದ
ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದು ಪ್ರಥಮ ದರ್ಜೆ ಗುತ್ತಿಗೆದಾರ ನಾಗರಾಜ್ ಕಾಮಶೆಟ್ಟಿ ಟೆಂಡರ್ ಮೂಲಕ ಈ ಕಾಮಗಾರಿಯನ್ನು ಪ್ರಾರಂಭಿಸಲಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪಟ್ಟಣದಲ್ಲಿನ ಕೆಲವರು ರಸ್ತೆ ಚೆನ್ನಾಗಿಯೇ ಇದೆ. ರಸ್ತೆ ನಿರ್ಮಾಣ ಕಾರ್ಯ ಮಾಡದೇ ಅಲ್ಲಲ್ಲಿ ಕೆಟ್ಟಿರುವ ರಸ್ತೆಯನ್ನು ದುರಸ್ತಿ ಗೊಳಿಸಿ ಈ ಅನುದಾನವನ್ನು ಬೇರೆಕಡೆ ವರ್ಗಾಯಿಸಿ ಅಭಿವೃದ್ದಿ ಪಡೆಸಬೇಕೆಂದು ಮುಖಂಡ ಎಸ್.ತಿಂದಪ್ಪ ಮತ್ತಿತರರು ಸಂಸದ ವೈ ದೇವೇಂದ್ರಪ್ಪ ನವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದರು. ಈ ಸಂಬಂದಿ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿಗೂ ಪತ್ರ ಬರೆದು ಒತ್ತಾಯಿಸಿದ್ದರು.
ರಸ್ತೆ ನಿರ್ಮಾಣದ ವಾರ್ಡ್ನ್ನು ಪ್ರತಿನಿಧಿಸಿರುವ 1ನೇ ವಾರ್ಡ್ ಪಟ್ಟಣ ಪಂಚಾಯಿತಿ ಸದಸ್ಯ ಮರಬದ ಕೊಟ್ರೇಶ್ ಇವರು ಮುಖ್ಯ ರಸ್ತೆ ಸಂಪೂರ್ಣ ಹದೆಗಟ್ಟಿದ್ದು ಮಳೆ ಬಂದಾಗಲೆಲ್ಲಾ ಚರಂಡಿಯಲ್ಲಿ ನೀರು ಹೋಗದೆ ರಸ್ತೆ ಮೇಲೆ ನಿಂತುಕೊಳ್ಳುತ್ತವೆ. ಶಾಸಕರು ಇದೀಗ ಈ ರಸ್ತೆಯನ್ನು ಅಭಿವೃದ್ದಿ ಪಡಿಸಲು 1 ಕೋಟಿಗೂ ಹೆಚ್ಚಿನ ಅನುದಾನವನ್ನು ಮೀಸಲಿರಿಸಿ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ ಇದನ್ನು ವಿರೋಧಿಸುವವರು ಕೆಲ ರಾಜಕೀಯ ಕಾರಣಕ್ಕಾಗಿ ವಿರೋದಿಸುತ್ತಿದ್ದಾರೆ. ಅವರ ಸ್ವಾರ್ಥವು ಇದೆ ಎಂದು ದೂರಿದ್ದರು.
ಉಭಯ ಮುಖಂಡರ ನಡುವೆ ಪರ ವಿರೋಧದ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಜನತೆ ರಸ್ತೆ ಕಾಮಗಾರಿ ಮತ್ತು ಚರಂಡಿ ನಿರ್ಮಾಣ ಕಾರ್ಯ ಕೈ ಬಿಟ್ಟು ಹೋಗುತ್ತದೆಂಬ ಆತಂಕ ನಿರ್ಮಾಣವಾಗಿತ್ತು.
ಕಾಮಗಾರಿ ಆರಂಭಿಸಲು ಮುಂದಾದ ಪಿಡಬ್ಲ್ಯೂಡಿ ಇಲಾಖೆ
ಭಾನುವಾರ ಒಮ್ಮಲೆ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಪಡಿಸುವುದಕ್ಕಿಂತ ಮುಂಚಿತವಾಗಿ ರಸ್ತೆಯ ಎರಡು ಕಡೆ ಚರಂಡಿಗಳನ್ನು ನಿರ್ಮಿಸಲೆಂದು ಗುತ್ತಿಗೆದಾರ ಕೂಲಿ ಕಾರರರೊಂದಿಗೆ ಕೆಲಸ ಆರಂಭಿಸಲು ಮುಂದಾಗುತ್ತಿದ್ದಂತೆ ವಿಷಯ ತಿಳಿದ ಮುಖಂಡ ಎಸ್. ತಿಂದಪ್ಪ ಕೂಡಲೇ ಉಜ್ಜಯಿನಿ ವೃತ್ತಕ್ಕೆ ಆಗಮಿಸಿ ಈ ಕಾಮಗಾರಿ ಅಗತ್ಯವಿಲ್ಲ ಕುಣಿಬಿದ್ದಿರುವ ಮುಖ್ಯ ರಸ್ತೆಯನ್ನು ದುರಸ್ತಿಗೊಳಿಸಿ ಅಷ್ಟು ಮಾಡಿದರೆ ಸಾಕು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಕೈಗೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿ ವಿರೋದಿಸಿ ಕೆಲಸ ಆರಂಭಿಸದಂತೆ ಹಠ ಇಡಿದರು
.
ಜೆಇ ಸೋಮಣ್ಣ ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ಹೆಚ್.ಎಫ್ ಬಿದರಿ ಮತ್ತಿತರರು ವಿರೋಧ ವ್ಯಕ್ತ ಪಡಿಸುವವರಿಗೆ ಸಮಾದಾನ ಹೇಳಿ ಈಗಾಗಲೇ ಈ ಯೋಜನೆಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಕಾಮಗಾರಿ ಆರಂಭಿಸಲೇಬೇಕು ದಯವಿಟ್ಟು ಸಹಕರಿಸಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.
ಇತ್ತ ಕಾಮಗಾರಿಗೆ ಕೆಲವರು ವಿರೋಧ ವ್ಯಕ್ತ ಪಡಿಸುತ್ತಿರುವ ಮಾಹಿತಿ ತಿಳಿದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ಮತ್ತಿತರರು ಸ್ಥಳಕ್ಕೆ ಆಗಮಿಸಿ ಚರಂಡಿ ಕಾಮಗಾರಿ ಆರಂಭಗೊಳ್ಳಲೇ ಬೇಕು ರಸ್ತೆ ನಿರ್ಮಾಣವು ಆಗಲೇ ಬೇಕು ಇದೊಂದು ಅಭಿವೃದ್ದಿ ಕಾರ್ಯ ನಡೆಯಲೇಬೇಕೆಂದು ಪ್ರತಿವಾದಿಸಿ ಅಧಿಕಾರಿಗಳನ್ನು ಒತ್ತಾಯಿಸತೊಡಗಿದರು.
ಈ ಹಂತದಲ್ಲಿ ಉಭಯ ಗುಂಪಿನನವರು ಜೋರು ಧ್ವನಿಯಲ್ಲಿ ಮಾತನಾಡಿ ಗಲಾಟೆ ಆರಂಭಿಸುತ್ತಿದ್ದಂತೆ ವಿಷಯ ತಿಳಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎ.ಕಾಳಿಂಗ ಕೂಡಲೇ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಕಾಮಗಾರಿ ಸ್ಥಳದಲ್ಲಿ ಬಂದೋಬಸ್ತ ಕಾರ್ಯ ಕೈಗೊಂಡರು.
ನಂತರ ಚರಂಡಿ ಕಾಮಗಾರಿ ಯಷ್ಟೇ ಸದ್ಯಕ್ಕೆ ಆರಂಭಿಸಬೇಕು ಎಂಬ ರಾಜೀ ಸೂತ್ರಕ್ಕೆ ಉಭಯರು ಬಂದ ಕಾರಣಕ್ಕಾಗಿ ಉದ್ಭವಿಸಿದ್ದ ಸಮಸ್ಯೆ ನಿವಾರಣೆಗೊಂಡು ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರು ಮುಂದಾದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
