ಚಿತ್ರದುರ್ಗ:
ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಪ್ರಗತಿಯ ಕಡೆ ಸಾಗುತ್ತಿದ್ದಾರೆ ಎಂದು ಸಂಸದ ಬಿ.ಎನ್ ಚಂದ್ರಪ್ಪ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಕಾಲದಿಂದಲೂ ಮಹಿಳೆಯರನ್ನು ಶೋಷಣೆಯಿಂದ ಮುಕ್ತಿಗೊಳಿಸಲು ಸಾಕಷ್ಟು ಸಮಾಜ ಸುಧಾರಕರು ಶ್ರಮಿಸಿದ್ದಾರೆ. ಈ ಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತದಲ್ಲಿಯೂ ಮಹಿಳೆಯರು ಸಮಾಜದಲ್ಲಿ ಮನೆ ಮಾಡಿರುವ ಮೂಢನಂಬಿಕೆಗಳು, ಅವೈಜ್ಞಾನಿಕ ಕಟ್ಟುಪಾಡುಗಳಿಂದ ಮುಕ್ತಿ ಹೊಂದಬೇಕಿದೆ. ಆದರೂ ಪ್ರತಿಯೊಂದು ಕ್ಷೇತ್ರದಲ್ಲಿಯು ಮುಂಚೂಣಿಯಲ್ಲಿ ಸಾಗುತ್ತಿರುವುದು ಸಮಾನತೆಗೆ ಅಡಿಪಾಯ ಹಾಕಿದಂತೆ ಎಂದು ಹೇಳಿದರು.
ಜಗತ್ತಿನಲ್ಲಿ ತಾಯಿಗೆ ಮಿಗಿಲಾದ ಸ್ಥಾನವಿಲ್ಲ. ತಾಯಿ ಅತ್ಯಮೂಲ್ಯ. ಇಂತಹ ತಾಯಿಯನ್ನು ವಯಸ್ಸಾದ ಬಳಿಕ ಮಕ್ಕಳೇ ಸರಿಯಾಗಿ ನೋಡಿಕೊಳ್ಳದೆ ಮನೆಯಿಂದ ಹೊರಗೆ ಹಾಕುವ, ವೃದ್ಧಾಶ್ರಮಗಳಿಗೆ ದಾಖಲಿಸುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ತಾಯಿ, ತನ್ನ ಮಕ್ಕಳಿಗೆ ಕೇಡು ಬಯಸಿದ ಇತಿಹಾಸವಿಲ್ಲ. ಹಾಗಾಗಿ ಮಹಿಳೆಯರನ್ನು ತಾಯಿ ಸಮಾನ ನೋಡಬೇಕು. ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿದರು.
ಭಾರತದಲ್ಲಿ ರಾಜಕೀಯವಾಗಿ ಇಂದಿರಾಗಾಂಧಿ, ಮೀರಾ ಕುಮಾರಿ, ಪ್ರತಿಭಾ ಪಟೇಲ್ರಂತ ಮಹಿಳೆಯರು ಮುಂಚೂಣಿಯಲ್ಲಿ ನಿಂತು ಹಲವಾರು ಸಾಧನೆಗಳನ್ನು ಮಾಡಿ ಪುರುಷರಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾದಿಸಿ ತೋರಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ ಪುರುಷರಿಗಿಂತ ಮಹಿಳೆಯರಲ್ಲಿ ತಾಳ್ಮೆ ಹೆಚ್ಚು, ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಹೆಣ್ಣಲ್ಲಿದೆ, ಮನೆಯಲ್ಲಿ ಹೆಣ್ಣಿದ್ದರೆ ಆ ಮನೆಗೊಂದು ಶೋಭೆ ತನ್ನ ಕೌಶಲ್ಯದಿಂದ ಮನೆಯನ್ನು ಹೇಗೆ ಅಲಂಕರಿಸಿಟ್ಟುಕೊಳ್ಳಬೇಕೆನ್ನುವುದು ಹೆಣ್ಣಿಗೆ ತಿಳಿದಿರುತ್ತದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ, ಅದನ್ನು ಸದುಪಯೋಗ ಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸತ್ಯಭಾಮ ಮಾತನಾಡಿ, ಮಹಿಳೆಯರು, ಸಮತೋಲನ ಒಳ್ಳೆಯದು ಎಂಬ ತತ್ವವನ್ನು ಪಾಲಿಸಿದರೆ ಅವರು ಎಲ್ಲಾ ಕ್ಷೇತ್ರದಲ್ಲಿಯೂ ಹಸನ್ಮುಖಿಯಾಗಿರುತ್ತಾಳೆ. ಪುರುಷರಿಗಿಂತ ಮಹಿಳೆಯ ಜೀವಿತಾವಧಿ ಹೆಚ್ಚಾಗಿರುತ್ತದೆ ಕಾರಣ ಸದಾ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತಾಳೆ ಎಂದು ಹೇಳಿದರು.
ಹೆಣ್ಣು ಮನೆಯ ಕೆಲಸದಿಂದ ಹಿಡಿದು, ಯುದ್ದ ವಿಮಾನದಲ್ಲೂ ಮಹಿಳೆಯರು ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ, ಪುರುಷರಿಗಿಂತ ತಾವೇನು ಕಡಿಮೆ ಇಲ್ಲವೆಂಬತೆ ಉನ್ನತ ಹುದೆಗಳನ್ನು ಅಲಂಕರಿಸಿದ್ದಾರೆ, ಹೆಣ್ಣು ಎನ್ನುವ ಕಾರಣಕ್ಕೆ ಭ್ರೂಣ ಹತ್ಯೆ ಮಾಡದಿರಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ ಮಹಿಳೆಯರ ಸಾಮಾಜಿಕ ತೊಂದರೆಗಳ ಬಗ್ಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ. ರಾಧಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ ಅನಂತ, ಶಶಿಕಲಾ ಪಾಪಣ್ಣ, ಹಾಗೂ ತಾಪಂ. ಉಪಾಧ್ಯಕ್ಷೆ ಶಾಂತಮ್ಮ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ ಮತ್ತು ಇತರರು ಭಾಗವಹಿಸಿದ್ದರು. ಜಿಲ್ಲಾ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ ಅವರು ಮತದಾನ ಜಾಗೃತಿಗಾಗಿ ಇದೇ ಸಂದರ್ಭದಲ್ಲಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.