ಪ್ರಜಾಪ್ರಗತಿ ಫಲಶೃತಿ: ಜನರ ಸಮಸ್ಯೆಗೆ ಸ್ಪಂದಿಸಿದ ಮಹಾನಗರಪಾಲಿಕೆ

ತುಮಕೂರು

     ಕಳೆದ 3 ದಿನಗಳ ಹಿಂದೆ ಸಮಸ್ಯೆಗಳ ಸರಮಾಲೆಯಾದ ಉಪ್ಪಾರಹಳ್ಳಿ ಮಾರ್ಗ ಎಂಬ ಶೀರ್ಷಿಕೆಯಡಿ ಉಪ್ಪಾರಹಳ್ಳಿಮಾರ್ಗದ ದುಸ್ಥಿತಿ ಸೇರಿದಂತೆ ಉಪ್ಪಾರಹಳ್ಳಿ ರೈಲ್ವೇ ಕೆಳಸೇತುವೆಯ ಬಳಿ ಇದ್ದ ಕಸ, ಚರಂಡಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಗಮನಿಸಿದ ಮಹಾನಗರ ಪಾಲಿಕೆ ಆಯುಕ್ತರು ಭಾನುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಲ್ಲದೆ ಕೆಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಮಾಡಿದ್ದಾರೆ. ಇದು ಪ್ರಜಾಪ್ರಗತಿ ವರದಿಯ ಫಲಶೃತಿಯಾಗಿದೆ.

        ಮೇ.17ರಂದು ಉಪ್ಪಾರಹಳ್ಳಿ ಅಂಡರ್‍ಪಾಸ್ ಸೇರಿದಂತೆ 15ನೇ ವಾರ್ಡ್‍ನಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ವರದಿ ಪ್ರಕಟ ಮಾಡಲಾಗಿತ್ತು. ಅಂದು ಸ್ಥಳೀಯ ಪಾಲಿಕೆ ಸದಸ್ಯರಾದ ಗಿರಿಜಾಧನಿಯಾಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದರು. ನಮ್ಮ ಪತ್ರಿಕಾ ವರದಿಗೆ ಎಚ್ಚೆತ್ತ ಪಾಲಿಕೆ ಆಯುಕ್ತರಾದ ಟಿ.ಭೂಬಾಲನ್ ಅವರು ಭಾನುವಾರ ಬೆಳಗ್ಗೆ ಉಪ್ಪಾರಹಳ್ಳಿ ರೈಲ್ವೇ ಕೆಳಸೇತುವೆ ಬಳಿ ಇರುವ ಕಸದ ಪಾಯಿಂಟ್‍ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಬಗ್ಗೆ ಅರಿತಿದ್ದಾರೆ.

       ನಂತರ ಸ್ಥಳೀಯರು ಕೂಡ ಆಯುಕ್ತರ ಬಳಿ ಬಂದು ತಾವು ನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ಇದಕ್ಕೆ ಉತ್ತರವಾಗಿ ಸ್ಥಳಕ್ಕೆ ಆರೋಗ್ಯ ನಿರೀಕ್ಷಕರು ಹಾಗೂ ಪರಿಸರ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಪರಿಶೀಲನೆ ನಡೆಸಿದ ಆಯುಕ್ತರು

      ಸ್ಥಳೀಯರ ದೂರುಗಳನ್ನಾಧರಿಸಿ ರೈಲ್ವೇ ಅಂಡರ್‍ಪಾಸ್, ರೈಲ್ವೇ ಸೇತುವೆ ಮೇಲ್ಬಾಗದಲ್ಲಿ ಹಾಗೂ ಕಸದ ಪಾಯಿಂಟ್‍ಅನ್ನು ಪರಿಶೀಲನೆ ನಡೆಸಿದ ಆಯುಕ್ತರು ಪರಿಸರ ಎಂಜಿನಿಯರ್‍ರೊಂದಿಗೆ ಚರ್ಚಿಸಿ ಅಲ್ಲಿ ಸ್ವಚ್ಛತೆ ಕಾರ್ಯ ಮಾಡುವಂತೆ ಸೂಚನೆ ನೀಡಿದ್ದಾರೆ. ಕಸದ ಪಾಯಿಂಟ್ ಬಳಿ ನಿತ್ಯ ಕಸದ ರಾಶಿಗಳು ರಾರಾಜಿಸುತ್ತಿದ್ದವು. ಬೆಳಗ್ಗೆಯಿಂದ ಕಸದ ವಿಂಗಡಣೆ ಮಾಡಿದರೂ ಕೊನೆಗೂ ರಾತ್ರಿ ವೇಳೆಗೆ ಕಸದ ರಾಶಿ ತುಂಬಿಕೊಳ್ಳುತ್ತಿತ್ತು. ಇದೀಗ ಕಸವನ್ನು ಅಲ್ಲಿ ಹಾಕದಂತೆ ಸ್ವಚ್ಛ ಮಾಡಿ, ಟೈರ್‍ಗಳ ಅಳವಡಿಕೆ ಮೂಲಕ ಉತ್ತಮ ವಾತಾವರಣವನ್ನು ಸೃಷ್ಠಿಸಿದ್ದಾರೆ.

ಆಕ್ರೋಶ ವ್ಯಕ್ತಪಡಿಸಿದ್ದ ಸಾರ್ವಜನಿಕರು

        ತುಮಕೂರು ರೈಲ್ವೇ ನಿಲ್ದಾಣದ ಮುಂಭಾಗದಲ್ಲಿನ ರಸ್ತೆಯಲ್ಲಿ ಹಲವು ಶಾಲಾ ಕಾಲೇಜುಗಳು, ಮಹಿಳಾ ಹಾಸ್ಟ್ಟೆಲ್‍ಗಳು, ಇದ್ದು, ಇಲ್ಲಿ ನೂರಾರು ಮಂದಿ ವಾಸ ಮಾಡುತ್ತಾರೆ. ರೈಲ್ವೇ ನಿಲ್ದಾಣಕ್ಕೆ ಹೋಗಲು ಇರುವ ರಸ್ತೆ ಇದಾಗಿದ್ದು ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತವೆ. ಆದರೆ ಇಲ್ಲಿ ಸರಿಯಾದ ರಸ್ತೆ ಇಲ್ಲದೆ ಪರದಾಡುತ್ತಿದ್ದುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದಕ್ಕೆ ಉತ್ತರಿಸಿದ ಆಯುಕ್ತರು ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

         ಸ್ಥಳೀಯರ ಅನುಕೂಲಕ್ಕಾಗಿ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ ಸಂಸದರ ನಿಧಿಯಲ್ಲಿ ಯೋಜನೆ ರೂಪಿಸಿ, ಅಂಡರ್‍ಪಾಸ್ ನಿರ್ಮಾಣ ಮಾಡಲಾಯಿತಾದರೂ ಅದು ಸಂಪೂರ್ಣ ಧೂಳಿನಿಂದ ಕೂಡಿದ್ದು, ಇಲ್ಲಿ ಆಟೋ ರಿಕ್ಷಾ ಸೇರಿದಂತೆ ಕಾರುಗಳು ಕೂಡ ಓಡಾಡುತ್ತಿದ್ದವು. ಈ ಮಾರ್ಗ ಪಾದಾಚಾರಿಗಳು ಹಾಗೂ ದ್ವಿಚಕ್ರವಾಹನಗಳಿಗೆಂದು ಮಾಡಲಾಗಿದೆ. ಆದರೆ ವಾಹನಗಳ ಓಡಾಟದಿಂದ ಹೆಚ್ಚಿನ ಧೂಳು ಬರುವುದರಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.

ಕಸದ ಶೆಡ್ ಮುಂಭಾಗದಲ್ಲಿ ಟೈರ್‍ಗಳಿಂದ ಉತ್ತಮ ವಾತಾವರಣ

       ಉಪ್ಪಾರಹಳ್ಳಿ ರೈಲ್ವೇ ಕೆಳ ಸೇತುವೆ ಬಳಿ ಕಸದ ವಿಲೇವಾರಿ ಘಟಕ ಇದ್ದು, ಇಲ್ಲಿ ನಿತ್ಯ ಕಸದ ರಾಶಿ ತುಂಬಿಕೊಂಡು ದುರ್ವಾಸನೆ ಬೀರುತ್ತಿತ್ತು. ಇದರ ಬಗ್ಗೆಯೂ ಸಾಕಷ್ಟು ದೂರುಗಳು ಬಂದಿದ್ದವು. ಅದರ ಬಗ್ಗೆ ಪತ್ರಿಕೆಯಲ್ಲಿಯೂ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅವರು, ಶೆಡ್ ಮುಂಭಾಗದಲ್ಲಿನ ಕಸದ ಮೂಟೆಗಳನ್ನು ತೆಗೆಸಿದ್ದು, ಸಂಪೂರ್ಣವಾಗಿ ಸ್ವಚ್ಛ ಮಾಡಿಸಿದ್ದಲ್ಲದೆ, ನಿರುಪಯುಕ್ತ ಟೈರ್‍ಗಳನ್ನು ಜೋಡಿಸಿ ಅದಕ್ಕೆ ಬಣ್ಣ ಹಚ್ಚಿ ಅದರ ಸುತ್ತಲೂ ಗಿಡಗಳನ್ನು ನೆಡುವುದರ ಮೂಲಕ ಸುಂದರವಾದ ವಾತಾವರಣ ನಿರ್ಮಾಣ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link