ಸಣ್ಣ ನೀರಾವರಿ ಕೆರೆ ಪುನಶ್ಚೇತನ ಹಾಗೂ ಹೊಲಗಾಲುವೆಗೆ ಉದ್ಯೋಗ ಖಾತ್ರಿ ನೆರವು : ಎಸ್.ಕೆ.ಕರಿಯಣ್ಣನವರ

ಹಾವೇರಿ
    ಅತಿವೃಷ್ಟಿ ಹಾಗೂ ನೆರೆಯಿಂದ ಹಾಳಾದ ಮೂಲ ಸೌಕರ್ಯಗಳ ಪುನರ್ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಇಲಾಖಾವಾರು ಕಾಮಗಾರಿಗಳ ಮಾಹಿತಿಯನ್ನು ಆಯಾ ಜಿಲ್ಲಾ ಪಂಚಾಯತ್ ಸದಸ್ಯರ ಗಮನಕ್ಕೆ ತರಬೇಕು ಎಂದು ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಸೂಚಿಸಿದರು.
    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ನವಂಬರ್ ತಿಂಗಳಾಂತ್ಯದವರೆಗೆ ಸಾಧಿಸಿದ ಪ್ರಗತಿ ಪರಿಶೀಲನೆ ನಡೆಸಿದ ಅವರು ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ಯೋಜನೆಯಡಿ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ರಸ್ತೆ, ಸೇತುವೆ, ಕಟ್ಟಡಗಳು ಸೇರಿದಂತೆ ಮೂಲ ಸೌಕರ್ಯಗಳ ದುರಸ್ತಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಆದರೆ ಸಮರ್ಪಕವಾಗಿ ಕಾಮಗಾರಿಗಳು ನಡೆಯುತ್ತಿಲ್ಲ. ಅನುದಾನ ದುರುಪಯೋಗವಾಗುತ್ತಿವೆ ಎಂದು ಸಾರ್ವಜನಿಕ ದೂರುಗಳಿವೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
    ಪ್ರಕೃತಿ ವಿಕೋಪ ನಿಧಿಯದಿ ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ಕಾಮಗಾರಿಗಳನ್ನು ಮಂಜೂರಾಗಿವೆ, ಅನುದಾನ ಎಷ್ಟು ಬಿಡುಗಡೆಯಾಗಿದೆ, ಯಾವ ಇಲಾಖೆಗೆ ಎಷ್ಟು ಅನುದಾನ ಮಂಜೂರಾಗಿದೆ, ಯಾವ ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂಬ ಮಾಹಿತಿಯನ್ನು ಅತ್ಯಂತ ಪಾರದರ್ಶಕವಾಗಿ ಕಾಯ್ದುಕೊಳ್ಳಬೇಕು, ಸದಸ್ಯರಿಗೆ ಮಾಹಿತಿ ನೀಡಬೇಕು, ಅನುದಾನ ದುರುಪಯೋಗವಾಗಬಾರದು, ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಪ್ರಕೃತಿ ವಿಕೋಪದಿಂದ ಬೆಳೆಹಾನಿ ಉಂಟಾದ ರೈತರಿಗೆ ಪರಿಹಾರ ವಿತರಣೆ ಮಾಹಿತಿ ಪಡೆದ ಎಸ್.ಕೆ.ಕರಿಯಣ್ಣನವರ, ಯಾವ ರೈತರಿಗೆ ಬೆಳೆಹಾನಿ ಪರಿಹಾರ ಮಂಜೂರಾಗಿದೆ, ಎಷ್ಟು ಹಣ ಮಂಜೂರಾಗಿದೆ, ಯಾರಿಗೆ ಹಣ ಜಮೆಯಾಗಿದೆ ಎಂಬ ಮಾಹಿತಿಯನ್ನು ಪ್ರತಿ ಗ್ರಾಮ ಪಂಚಾಯತ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಫಲಾನುಭವಿಗಳ ಹೆಸರಿನೊಂದಿಗೆ ಪಟ್ಟಿಯನ್ನು ಪ್ರಕಟಿಸುವಂತೆ ಕೃಷಿ ಜಂಟಿ ನಿದೇಶಕರಿಗೆ ಸೂಚನೆ ನೀಡಿದರು. ಬೆಳೆ ಪರಿಹಾರ ಹಾಗೂ ಬೆಳೆವಿಮೆ ಹಣವನ್ನು ಬಾಕಿ ರೈತರಿಗೆ ತ್ವರಿತವಾಗಿ ವಿತರಿಸುವಂತೆ ಸೂಚನೆ ನೀಡಿದರು.
     ಪ್ರಕೃತಿ ವಿಕೋಪದಡಿ ಬೆಳೆ ಪರಿಹಾರ ಪಡೆಯಲು ಜಿಲ್ಲೆಯ 1.66 ಲಕ್ಷ ರೈತರು ಅರ್ಹತೆ ಪಡೆದಿದ್ದಾರೆ. ಈ ಪೈಕಿ 1.3 ಲಕ್ಷ ರೈತರಿಗೆ ಪರಿಹಾರ ಪಾವತಿಸಲಾಗಿದೆ. ಬಾಕಿ 63 ಸಾವಿರ ರೈತರಿಗೆ ಪರಿಹಾರ ಪಾವತಿಸುವ ನಿಟ್ಟಿನಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ. ಒಂದು ಹೆಕ್ಟೇರ್ ಒಣ ಭೂಮಿಯ ಬೆಳೆಯ ನಷ್ಟಕ್ಕೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ 6800 ರೂ., ನೀರಾವರಿಗೆ 13,500 ರೂ. ಪರಿಹಾರ ನೀಡಬೇಕಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಒಣ ಭೂಮಿಗೆ ಹಾಗೂ ನೀರಾವರಿಗೆ ತಲಾ 10 ಸಾವಿರ ರೂ. ಹೆಚ್ಚುವರಿ ಪಾವತಿಸಲು ಹಣ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಒಣ ಭೂಮಿಗೆ 16,800 ರೂ., ನೀರಾವರಿ 23,500 ಪಾವತಿಸಲಾಗುತ್ತಿದೆ ಎಂದು ವಿವರಿಸಿದರು.
     ನೆರೆಯಿಂದ ಹಾನಿಯಾದ ಮೂಲ ಸೌಕರ್ಯಗಳ ದುರಸ್ತಿಗೆ ಇಲಾಖಾವಾರು ಪಟ್ಟಿಯಂತೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಮಂಜೂರಾತಿ ಪಡೆದ ಇಲಾಖೆಗಳು ಕಾಮಗಾರಿಗಳನ್ನು ಆರಂಭಿಸಬೇಕು. ಅನುದಾನ ಬಿಡುಗಡೆಗೆ ಕಾಯಬಾರದು, ಕಾಮಗಾರಿ ಆರಂಭಿಸಿದರೆ ಅನುದಾನ ಬಿಡುಗಡೆಗೊಳಿಸಲಾಗುವುದು. ಬಹುಪಾಲು ಇಲಾಖೆಗೆ ಈಗಾಗಲೇ ಅನುದಾನ ಒದಗಿಸಲಾಗಿದೆ. ಶಾಲಾ ಕೊಠಡಿ ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳ ದುರಸ್ತಿ, ರಸ್ತೆ, ದುರಸ್ತಿ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ದುರಸ್ತಿಗೆ ಒದಗಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ರಮೇಶ ದೇಸಾಯಿ  ಅವರು ಅಧಿಕಾರಿಗಳಿಗೆ ತಿಳಿಸಿದರು.
     ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯ ರಸ್ತೆ, ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವಾಗ ಕಡ್ಡಾಯವಾಗಿ ಇಲಾಖೆಯ ಅಭಿಯಂತರರು ಸ್ಥಳದಲ್ಲಿ ಉಪಸ್ಥಿತರಿದ್ದು ಮೇಲುಸ್ತುವಾರಿ ವಹಿಸಬೇಕು. ಕೇವಲ ಗುತ್ತಿಗೆದಾರರ ಮೇಲೆ ಅವಲಂಬಿತವಾದರೆ ಕಾಮಗಾರಿಗೆ ಬಳಸುವ ಸಾಮಗ್ರಿಗಳ ಗುಣಮಟ್ಟ ಅರಿಯಲು ಸಾಧ್ಯವಿಲ್ಲ. ಇದರಿಂದ ಕಳಪೆ ಕಾಮಗಾರಿಗಳು ನಡೆಯುವ ಸಾಧ್ಯತೆಗಳಿವೆ. ಈ ಕುರಿತಂತೆ ಕಡ್ಡಾಯವಾಗಿ ಇಲಾಖೆ ಉಸ್ತುವಾರಿ ವಹಿಸಬೇಕು ಎಂದು ಅಧ್ಯಕ್ಷ ಕರಿಯಣ್ಣನವರ ಸೂಚಿಸಿದರು.
     ಕೆರೆ-ಕಾಲುವೆ ನಿರ್ಮಾಣಕ್ಕೆ ಖಾತ್ರಿ ನೆರವು: ತುಂಗಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪೈಕಿ ಹೊಲಗಾಲುವೆಗಳ ನಿರ್ಮಾಣಕ್ಕೆ ಮಹಾತ್ಮಗಾಂಧೀಜಿ ಉದ್ಯೋಗ ಖಾತ್ರಿ ನೆರವು ಒದಗಿಸಲು ಜಿಲ್ಲಾ ಪಂಚಾಯತ್ ಸಿದ್ಧವಿದೆ. ಸಣ್ಣ ನೀರಾವರಿ ಕೆರೆಗಳ ಪುನಶ್ಚೇತನ ಹಾಗೂ ಹೊಲಗಾಲುವೆಗಳ ನಿರ್ಮಾಣಕ್ಕೆ ಇಲಾಖೆ ಮೆಟಿರಿಯಲ್ ಕಾಂಪೋನೆಂಟ್ ಭಾಗವನ್ನು ಭರಿಸಿದರೆ ಉದ್ಯೋಗ ಖಾತ್ರಿಯಡಿ ಕೂಲಿ ಕಾಂಪೋನೆಂಟ್ ಭರಿಸಲಾಗುವುದು. ಈ ಕುರಿತಂತೆ ಇಲಾಖಾ ಅಭಿಯಂತರರು ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಉಭಯ ಇಲಾಖಾ ಅಭಿಯಂತರರಿಗೆ ಸೂಚನೆ ನೀಡಿದರು.
ಗೋಡೆ ಅಲಂಕಾರ:
      ಅಂಗನವಾಡಿಗಳ ದುರಸ್ತಿಯ ಸಂದರ್ಭದಲ್ಲಿ ಗೋಡೆ ಬರಹಗಳನ್ನು ಯೋಜಿಸಿ ವಿಶೇಷವಾಗಿ ಅಂಗನವಾಡಿಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿಶೇಷ ಚಿತ್ರಗಳ ಮೂಲಕ ಗೋಡೆ ಬರಹಗಳನ್ನು ಬರೆಸುವಂತೆ ಇಲಾಖಾ ಅಧಿಕಾರಿಗಳಿಗೆ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಕೈಗೊಳ್ಳುವ ಏಜೆನ್ಸಿಗಳಿಗೆ ಸೂಚನೆ ನೀಡಿದರು.
ಸೋಲಾರ ಅಳವಡಿಕೆ:
      ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸೋಲಾರ ದೀಪ ಅಳವಡಿಕೆ ಕುರಿತಂತೆ ಯೋಜಿಸಲಾಗುತ್ತದೆ. ಮೊದಲ ಹಂತದಲ್ಲಿ ಗ್ರಾಮ ಪಂಚಾಯತಿಗಳಲ್ಲಿ, ಎರಡನೇ ಹಂತದಲ್ಲಿ ಎಲ್ಲ ಗ್ರಾಮಗಳಲ್ಲಿ ಸೋಲಾರ ದೀಪ ಅಳವಡಿಸುವ ಮೂಲಕ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ಚಿಂತನೆ ನಡೆದಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಭೆಗೆ ತಿಳಿಸಿದರು.
ಅರಣ್ಯ ವಸತಿಗರಿಗೆ ರಸ್ತೆ:
       ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನವಸತಿಗಳಿಗೆ ಪಿಎಂ.ಆರ್.ಜಿ.ಎಸ್.ವೈ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಬೇಕು. ಕೇಂದ್ರದ ಮಾನದಂಡದಂತೆ ಜಿಲ್ಲೆಯ ಅರಣ್ಯ ವಾಸಿಗಳಿಗೆ ರಸ್ತೆ ನಿರ್ಮಿಸಲು  ಅವಶ್ಯವಿದೆಯೋ ಆನ್‍ಲೈನ್ ತಂತ್ರಾಂಶದ ಮೂಲಕ ಕೇಂದ್ರದ ಅನುಮತಿ ಪಡೆಯಲು ಪ್ರಸ್ತಾವನೆ ಸಲ್ಲಿಸುವಂತೆ ಯೋಜನಾ ಅನುಷ್ಠಾನದ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.
      ಸಭೆಯಲ್ಲಿ ವಸತಿ ನಿರ್ಮಾಣ, ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ, ರಸ್ತೆ ನಿರ್ಮಾಣ, ಏತ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಯೋಜನೆ, ಉದ್ಯೋಗ ಖಾತ್ರಿ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.ಉಪಾಧ್ಯಕ್ಷರಾದ ಶ್ರೀಮತಿ ಗಿರಿಜವ್ವ ಹನುಮಂತಪ್ಪ ಬ್ಯಾಲದಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ದುಗ್ಗತ್ತಿ ಹಾಗೂ ಶ್ರೀಮತಿ  ನೀಲವ್ವ ನಾಗಪ್ಪ ಚವ್ಹಾಣ,  ಮುಖ್ಯ ಯೋಜನಾಧಿಕಾರಿ ಮಣ್ಣವಡ್ಡರ ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link