ಚಿಕ್ಕನಾಯಕನಹಳ್ಳಿ :
ಬೆಳಗಾವಿ ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಸರ್ಕಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ತಹಶೀಲ್ದಾರ್ ತೇಜಸ್ವಿನಿ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಬೆಳಗಾವಿ ತಾಲ್ಲೂಕು ಪೀರನವಾಡಿಯಲ್ಲಿ ಸ್ವತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆ ವೇಳೆ ನಡೆದಿರುವ ಪೋಲಿಸ್ ನವರ ವರ್ತನೆ ಸರಿಯಲ್ಲ, ಭಾರತ ಸ್ವಾತಂತ್ರ್ಯಕ್ಕೋಸ್ಕರ ಆಂಗ್ಲರ ವಿರುದ್ದ ಹೋರಾಡಿ ಗಲ್ಲು ಶಿಕ್ಷೆಯನ್ನು ಅನುಭವಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಿಗೆ ಗೌರವ ನೀಡಬೇಕು, ಕೂಡಲೇ ಸರ್ಕಾರ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನವರ ಪ್ರತಿಮೆಯನ್ನು ನಿಗಧಿತ ಸ್ಥಳದಲ್ಲಿ ಸ್ಥಾಪಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಯಲಿದೆ ಎಂದು ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಕುಂಚಾಂಕುರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಾತನಾಡಿ, ಜನರಲ್ಲಿ ಕ್ರಾಂತಿಯ ಕಿಡಿಯನ್ನು ಹಚ್ಚಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮೂಲಕ ಕ್ರಾಂತಿಕಾರಕ ಹೋರಾಟ ಮಾಡಿ ದೇಶಕ್ಕೋತ್ಸಕರ ಶಿಕ್ಷೆಯನ್ನು ಅನುಭವಿಸಿದ್ದು ಸಂಗೊಳ್ಳಿರಾಯಣ್ಣ, ಅವರ ಪ್ರತಿಮೆಯನ್ನು ರಾಯಣ್ಣ ಭಕ್ತರು ಪ್ರತಿಷ್ಠಾಪಿಸಲು ಹೋದ ಸಂದರ್ಭದಲ್ಲಿ ಪೋಲಿಸರು ಬಿಡದೆ ದೌರ್ಜನ್ಯ ಮಾಡಿರುವುದು ಖಂಡನೀಯ ಎಂದು ಆಗ್ರಹಿಸಿದರು.
ಸಂಗೊಳ್ಳಿರಾಯಣ್ಣ ಅಭಿಮಾನಿ ಬಳಗದ ಚಿ.ಲಿಂ.ರವಿಕುಮಾರ್ ಮಾತನಾಡಿ, ಕಿತ್ತೂರಿನ ರಾಣಿ ಚೆನ್ನಮ್ಮನ ಬಲಗೈ ಭಂಟನಾಗಿ ಬ್ರಿಟೀಷರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣ ದೇಶಪ್ರೇಮಿ, ಅವರ ಪ್ರತಿಮೆಗೆ ಅಡ್ಡ ಪಡಿಸುತ್ತಾ ದೌರ್ಜನ್ಯ ಎಸಗಿರುವುದು ಸರಿಯಲ್ಲ, ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ನ್ಯಾಯವಾಗಿ ಸಿಗಬೇಕಾದ ಮನ್ನಣೆಯನ್ನು ಜಿಲ್ಲಾಡಳಿತ, ಸರ್ಕಾರ ದೊರಕಿಸಿಕೊಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಯುವುದು ಎಂದರು.
ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ರಾಯಣ್ಣನ ಪ್ರತಿಮೆಯನ್ನು ತನ್ನ ಸ್ವಗ್ರಾಮದಲ್ಲಿ ಪ್ರತಿಷ್ಠಾಪಿಸಲು ಬಿಡಲಿಲ್ಲವೆಂದರೆ ಇದು ನಾಚಿಕೆಗೇಡು, ರಾಯಣ್ಣನ ಮೂರ್ತಿಯನ್ನು ಕಿತ್ತಿರುವುದು, ರಾಷ್ಟ್ರಧ್ವಜವನ್ನು ಬಂಧಿಸಿ ತೆಗೆದುಕೊಂಡು ಹೋಗಿರುವವರ ವಿರುದ್ದ ಸರ್ಕಾರ ತೀವ್ರವಾಗಿ ಪರಿಗಣಿಸಿ ಇಂತಹ ಕೆಲಸ ಮಾಡಿದವರನ್ನು ಅಮಾನತ್ತುಗೊಳಿಸಬೇಕು ಎಂದರಲ್ಲದೆ, ರಾಯಣ್ಣನ ಪ್ರತಿಮೆ ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಠಾಪನೆ ಆಗಬೇಕು. ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ರಾಯಣ್ಣನ ಪಾಠಗಳನ್ನು ತೆಗೆದಿದ್ದು, ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ರಾಯಣ್ಣನ ಪಾಠಗಳನ್ನು ಪುಃನ ಸೇರಿಸಿ ಎಂದು ಮನವಿ ಮಾಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಲು ಹೋದಾಗ ಏಕಾಏಕಿ ಪೋಲಿಸ್ ಇಲಾಖೆ ಪ್ರತಿಮೆಯನ್ನು ತೆರವುಗೊಳಿಸಿ ದೇಶಕ್ಕಾಗಿ ಪ್ರಾಣಕೊಟ್ಟಂತಹ ಮಹಾನ್ ವ್ಯಕ್ತಿಗೆ ಅವಮಾನ ಮಾಡಿದ್ದಾರೆ ಇದು ಖಂಡನೀಯ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಮಂಜುನಾಥ್, ವಿನಯ್ ಸೇರಿದಂತೆ ಸಂಗೊಳ್ಳಿರಾಯಣ್ಣನ ಅಭಿಮಾನಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
