ಬೆಳೆ ವಿಮೆ ಸೇರಿದಂತೆ ವಿವಿಧ ಬೆಡಿಕೆಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ಹರಿಹರ;

      ಬೆಳೆ ವಿಮೆ ಜಾರಿ, ಭತ್ತ, ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಹಾಗೂ ದೆಹಲಿಯಲ್ಲಿ ರೈತರ ಮೇಲೆ ಲಾಠಿ ಪ್ರಹಾರ ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ಅವರಿಗೆ ಮನವಿ ನೀಡಿದರು.

     ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ರೈತರು ನಂತರ ಶಿವಮೊಗ್ಗ ರಸ್ತೆ ಮೂಲಕ ಮೆರವಣಿಗೆ ಆರಂಭಿಸಿದರು. ಶಿವಮೊಗ್ಗ ವೃತ್ತ ಹಾಗೂ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿದರು. ನಂತರ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ನೀಡಿದರು.

     ನಂತರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಾಳೂರು ನಾಗರಾಜ್ ಮಾತನಾಡಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉತ್ತರ ಪ್ರದೇಶದ ರೈತರು ಪ್ರತಿಭಟನೆ ನಡೆಸಲು ಆಗಮಿಸುವಾಗ ದೆಹಲಿಯಿಂದ ಹೊರಭಾಗದಲ್ಲಿ ತಡೆದು ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಇದು ಸರಕಾರವು ರೈತರ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದು ಖಂಡಿಸಿದರು.

      ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದು ಕೂಡಲೆ ನಷ್ಟಕ್ಕೀಡಾದ ರೈತರಿಗೆ ಬೆಳೆ ವಿಮೆಯನ್ನು ವಿತರಿಸಬೇಕು. ಮಳೆ ಕೊರತೆಯಿಂದ ಬೆಳೆ ಒಣಗಿ ಹೋದ ರೈತರಿಗೆ ವಿಮೆ ಹಾಗೂ ಸರಕಾರದವರು ಈಗ ಹತ್ತಾರು ಕಟ್ಟುಪಾಡುಗಳನ್ನು ಮುಂದಿಟ್ಟು ವಿಮೆ ವಂಚಿತರನ್ನಾಗಿಸುವ ಹೊಂಚು ಹಾಕುತ್ತಿದ್ದಾರೆ.

      ಮಳೆ ಕೊರತೆಯಿಂದ ತಾಲೂಕಿನಲ್ಲಿ ಬೆಳೆದ ಸಾವಿರಾರು ಹೆ. ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆ ಒಣಗಿರುವುದು ಎಲ್ಲರಿಉಗೂ ತಿಳಿದ ವಿಷಯ. ಈ ಸತ್ಯ ಗೊತ್ತಿದ್ದೂ ರೈತರಿಗೆ ವಿಮೆ ಹಣ ನೀಡದೆ ವಂಚನೆ ಮಾಡುವುದು ಸಹಿಸಲಾಗುವುದಿಲ್ಲ ಎಂದರು.

      ಭತ್ತ ಹಾಗೂ ಮೆಕ್ಕೆಜೋಳದ ಖರೀದಿ ಕೇಂದ್ರಗಳನ್ನು ಕೂಡಲೆ ಆರಂಭಿಸಬೇಕು. ಹೆಚ್ಚು ದಿನಗಳ ಕಾಲ ಬೆಳೆ ಶೇಖರಣೆ ಮಾಡುವ ಸಾಮಥ್ರ್ಯ ಇಲ್ಲದ ರೈತರು ಖಾಸಗಿ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ಆರಂಭಿಸಿದರೆ ಉಪಯೋಗವಿಲ್ಲ.’

     ನೊಣಗಳ ಕಾಟ: ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಕೋಳಿ ಫಾರಂನಿಂದಾಗಿ ನೊಣಗಳ ಕಾಟ ಆರಂಭವಾಗಿದೆ. ಈ ಕುರಿತು ತಾಲೂಕು ಆಡಳಿತದ ಗಮನ ಸೆಳೆದಿದ್ದರೂ ಉಪಯೋಗವಾಗಿಲ್ಲ. ಗ್ರಾಮದ ಜನರು ನೊಣಗಳ ಕಾಟದಿಂದ ಜಿಗುಪ್ಸೆಗೊಂಡಿದ್ದಾರೆ. ಕೋಳಿ ಫಾರಂ ಬಂದ್ ಮಾಡಿಸಬೇಕು, ಇಲ್ಲವೆ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.

      ದೂರು ವಾಪಸ್: ಬುಳ್ಳಾಪುರದಲ್ಲಿ ನಿರ್ವಸಿತ ರೈತರು ಕಟ್ಟಿಕೊಂಡಿದ್ದ ಮೆನಗಳನ್ನು ತಾಲೂಕು ಆಡಳಿತ ಪೊಲೀಸ್ ದಬ್ಬಾಳಿಕೆ ಮೂಲಕ ತೆರವುಗೊಳಿಸಿದೆ. ಮಹಿಳೆಯರ ಮೇಲೂ ಪೊಲೀಸರು ದೌರ್ಜನು ಎಸಗಿದ್ದಾರೆ. ಆ ಪೋಒಲಸರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು, 50 ಗ್ರಾಮಸ್ಥರ ವಿರುದ್ಧ ದಾಖಲಿಸಿರುವ ದೂರನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

      ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ರುದ್ರಮುನಿ ಮಾತನಾಡಿ, ಆಧಾರ್ ತಿದ್ದುಪಡಿ ಮಾಡಿಸುವ ಸೌಲಭ್ಯ ಗ್ರಾಪಂ ಕೇಂದ್ರಗಳಲ್ಲಿ ಸಿಗಬೇಕು. ಭೂ ಮಾಪನಾ ಇಲಾಖೆಯವರು ರೈತರನ್ನು ಓಡಾಡಿಸದೆ, ಲಂಚ ಕೇಳದೆ ಜಮೀನಿನ ಹದ್ದುಬಸ್ತು, ಪೋಡಿಯನ್ನು ಮಾಡಿಕೊಡಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಕಚೇರಿಗೆ ಸೀಮಿತರಾಗದೆ ಗ್ರಾಮಾಂತರ ಭಾಗದಲ್ಲಿ ಸಂಚರಿಸಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಮುಖಂಡರಾದ ಹಾವೇರಿಯ ವೀರಣ್ಣ, ಎಚ್.ಶಿವಪ್ಪ, ಹೊಳೆಸಿರಿಗೆರೆ ಬಸವರಾಜಪ್ಪ, ಅಮರಾವತಿ ಕೆ.ಚಂದ್ರಪ್ಪ, ಡಿ.ರೇವಣಸಿದ್ದಪ್ಪ, ಬಿ.ಎನ್.ಹನುಮಂತಪ್ಪ, ಕೆ.ಚ್.ರಾಜಪ್ಪ, ಕೆ.ಎಂ.ಶಣ್ಮುಖಪ್ಪ, ಕೆ.ಜಿ.ನರೇಂದ್ರ, ಸಿದ್ದಪ್ಪ, ಕೆ.ಎಚ್.ಅಜ್ಜಯ್ಯ, ಕೆ.ಜಿ.ಸಂಗಮೇಶ್, ಆರ್.ಚನ್ನಪ್ಪ, ಹೇಮಂತ್‍ರಾಜ್, ತೆಲಗಿ ಬಿ.ಎ.ಸುರೇಶ್, ಕೊಂಡಜ್ಜಿ ಪ್ರಕಾಶಪ್ಪ, ಜೆ.ಪಿ.ಸಂಜೀವಯ್ಯ, ಎಚ್.ಬಿ.ಬಸವರಾಜಯ್ಯ, ಕೆ.ಎಂ.ಮಲ್ಲಿಕಾರ್ಜುನಯ್ಯ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap