ತುಮಕೂರು![](https://prajapragathi.com/wp-content/uploads/2019/09/Melekote-kere.gif)
![](https://prajapragathi.com/wp-content/uploads/2019/09/Melekote-kere.gif)
ತುಮಕೂರು ನಗರದ 11 ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಮೆಳೆಕೋಟೆ-ಗಂಗಸಂದ್ರ ಅಮಾನಿಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಅದನ್ನು ನಗರದ ರಿಂಗ್ ರಸ್ತೆ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು 11 ನೇ ವಾರ್ಡ್ (ಮೆಳೆಕೋಟೆ)ನ ಮಹಾನಗರ ಪಾಲಿಕೆ ಸದಸ್ಯ ಎಂ.ಕೆ.ಮನು ಮಾಡಿದ್ದಾರೆ.
ಪ್ರಸ್ತುತ ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ರಿಂಗ್ ರಸ್ತೆಯನ್ನು ಪುನರ್ನಿರ್ಮಿಸುವ ಕಾಮಗಾರಿ ನಡೆಯುತ್ತಿರುವುದು ಸರಿಯಷ್ಟೇ. ಆ ಕಾಮಗಾರಿಗಾಗಿ ರಸ್ತೆಯನ್ನು ಲೆವೆಲ್ ಮಾಡಲು ಮೆಳೆಕೋಟೆ-ಗಂಗಸಂದ್ರ ಅಮಾನಿಕೆರೆಯ ಅಂಗಳದಿಂದ ಮನಬಂದಂತೆ ಮಣ್ಣನ್ನು ಅಗೆದು ಸಾಗಿಸಲಾಗುತ್ತಿದೆ. ಜೆಸಿಬಿ ಯಂತ್ರಗಳನ್ನು ಬಳಸಿ, ಸುಮಾರು 30 ಅಡಿ ಆಳದವರೆಗೂ ಹಳ್ಳ ತೋಡಿ ಮಣ್ಣನ್ನು ಸಾಗಿಸಲಾಗಿದೆ. ಇದು ಸಂಪೂರ್ಣವಾಗಿ ಅಕ್ರಮವಾಗಿದೆ ಎಂದು ಅವರು ದೂರಿದ್ದಾರೆ.
ಈ ಹಿಂದೆ ರೈಲ್ವೆ ಇಲಾಖೆಯ ಕಾಮಗಾರಿಗಾಗಿ ಯಾರೋ ಬಂದು ಇಲ್ಲಿನ ಮಣ್ಣನ್ನು ಒಯ್ದಿದ್ದರು. ಈಗ ರಿಂಗ್ ರಸ್ತೆ ಕಾಮಗಾರಿಗೆಂದು ಇಲ್ಲಿನ ಮಣ್ಣನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಈಗಾಗಲೇ ಸುಮಾರು ಅರ್ಧಭಾಗದಷ್ಟು ಕೆರೆಯನ್ನು ಅಗೆದುಹಾಕಲಾಗಿದೆ. ಹೀಗೆ ಯದ್ವಾತದ್ವಾ ಮಣ್ಣು ತೆಗೆದರೆ ಕೆರೆಯ ಗತಿ ಏನಾದೀತು? ಎಂದು ಪ್ರಶ್ನಿಸಿರುವ ಎಂ.ಕೆ.ಮನು, ಸ್ಥಳೀಯ ಜನರೂ ಇದನ್ನು ಈಗಾಗಲೇ ಪ್ರತಿಭಟಿಸಿದ್ದಾರೆ ಎಂದಿದ್ದಾರೆ.
ಮೆಳೆಕೋಟೆ-ಗಂಗಸಂದ್ರ ಕೆರೆಗೆ ಹೇಮಾವತಿ ತುಂಬಿಸಿ ಅಲ್ಲಿಂದ ಮರಳೂರು ಕೆರೆಗೆ ಹೇಮಾವತಿ ನೀರನ್ನು ಕುಡಿಯುವ ನೀರಿನ ಉದ್ದೇಶದಿಂದ ಹರಿಸುವ ಯೋಜನೆ ಇದ್ದು, ಇಂತಹ ಸಂದರ್ಭದಲ್ಲಿ ಈ ರೀತಿ ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ಕೆರೆಯಿಂದ ಮಣ್ಣನ್ನು ಸಾಗಿಸಿದರೆ ಏನರ್ಥ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕೆರೆಗೆ ಸಂಬಂಧಿಸಿದ ರಾಜಕಾಲುವೆಗಳು ಸಹ ಒತ್ತುವರಿಯಾಗಿದ್ದು, ಅವುಗಳನ್ನೂ ತೆರವುಗೊಳಿಸುವ ಅಗತ್ಯವಿದೆ. ಮಹಾನಗರ ಪಾಲಿಕೆಯು ಇದನ್ನು ನಿರ್ವಹಿಸಬೇಕು ಎಂದು ಎಂ.ಕೆ.ಮನು ಹೇಳಿದ್ದಾರೆ.
16 ಕೋಟಿ ಯೋಜನೆ
ನಗರದ ಕುಣಿಗಲ್ ರಸ್ತೆಯಲ್ಲಿರುವ ಮರಳೂರು ಕೆರೆಗೆ ಮೆಳೆಕೋಟೆ-ಗಂಗಸಂದ್ರ ಅಮಾನಿಕೆರೆಯಿಂದ ಪೈಪ್ ಲೈನ್ ಅಳವಡಿಸಿ ಅಲ್ಲಿಂದ ಹೇಮಾವತಿ ನೀರನ್ನು ಹರಿಸುವ ಬಗ್ಗೆ ಯೋಜನೆಯೊಂದನ್ನು ಸಿದ್ಧಗೊಳ್ಳುತ್ತಿದೆಯೆಂದು ತಿಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/09/Melekote-kere.gif)