ಸೇವಾ ಭದ್ರತೆಗಾಗಿ ಅಹೋರಾತ್ರಿ ಧರಣಿ ಆರಂಭ

ದಾವಣಗೆರೆ:

          ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಶಾಶ್ವತ ನಿಯಮಾವಳಿ ರೂಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಅತಿಥಿ ಉಪನ್ಯಾಸಕರು ಮಂಗಳವಾರದಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

           ನಗರದ ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೊಟ್ರೇಶ್, ನಮ್ಮ ಸೇವಾ ಭದ್ರತೆಗೆ ಶಾಶ್ವತ ನಿಯಮಾವಳಿ ರೂಪಿಸಬೇಕೆಂಬುದು ಸೇರಿದಂತೆ ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯ 512 ಅತಿಥಿ ಉಪನ್ಯಾಸಕರು ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಿದ್ದೇವೆ. ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2018ವರೆಗೆ ಅತಿಥಿ ಉಪನ್ಯಾಸಕರಾಗಿ ಆಯ್ಕೆಯಾಗಿ, ಕನಿಷ್ಠ ಗೌರವ ಸಂಭಾವನೆಯ ಆಧಾರದ ಮೇಲೆ ಸೇವೆ ಸಲ್ಲಿಸುತ್ತಾ ಬಂದಿದ್ದು, ನಮ್ಮ ನಿರಂತರ ಹೋರಾಟದ ಫಲವಾಗಿ 2018ರ ಡಿಸೆಂಬರ್ 4 ರಂದು ಉನ್ನತ ಶಿಕ್ಷಣ ಸಮಿತಿ ಸಭೆಯಲ್ಲಿ ಅತಿಥಿ ಉಪನ್ಯಾಸಕರಿಗೆ 25 ಸಾವಿರ ರೂ. ವೇತನ ನೀಡಲು ಪರಿಷತ್ ಸದಸ್ಯರು, ಸಚಿವರು ತೀರ್ಮಾನಿಸಿದ್ದನ್ನು ತಕ್ಷಣವೇ ಕಾರ್ಯರೂಪಕ್ಕೆ ತರಬೇಕೆಂದು ಆಗ್ರಹಿಸಿದರು.

           ಜೆಓಸಿ ಶಿಕ್ಷಕರನ್ನು ಕಾಯಂಗೊಳಿಸಿದಂತೆ, ದೆಹಲಿ ಮತ್ತು ಇತರೆ ರಾಜ್ಯ ಸರ್ಕಾರಗಳ ಮಾದರಿಯಲ್ಲಿ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಗೊಳಿಸಬೇಕು. ಈಗಾಗಲೇ ಇಲಾಖೆಯಿಂದ ವಿಶೇಷ ನಿಯಮಾವಳಿ ಕುರಿತ ಕಡತವನ್ನು ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ, ಸಂಪುಟ ಸಮಿತಿ ಮುಂದೆ ತಂದು, ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.

           ರಾಜ್ಯ ಸರ್ಕಾರವು ಪ್ರಸ್ತುತ 3800 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಗೆ ಮುಂದಾಗಿದೆ. ಇದರಿಂದ ಅತಿಥಿ ಉಪನ್ಯಾಸಕರಲ್ಲಿ ತೀವ್ರ ಆತಂಕಕ್ಕೆ ಉಂಟಾಗಿದೆ. ಮಾನವೀಯ ದೃಷ್ಟಿಯಿಂದ ಈಗ ಸೇವೆಯಲ್ಲಿರುವ ಅತಿಥಿ ಬೋಧಕರನ್ನು 3800 ಹುದ್ದೆಗೆ ವಿಲೀನ ಮಾಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು.

           ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಸಮಿತಿಯ ಡಾ.ಕೆ.ಎಂ.ಪ್ರಶಾಂತ ಶರ್ಮ, ಶಿವಕುಮಾರ, ಶಂಕರಯ್ಯ, ಡಾ.ದೇವೇಂದ್ರಪ್ಪ, ಡಾ.ಎಂ.ಪ್ರಭಾಕರ, ಪಿ.ಜಿ.ಮಲ್ಲಿಕಾರ್ಜುನ, ಡಿ.ಪಿ.ಗಂಗಾಧರಮೂರ್ತಿ, ಕೆ.ಚಂದ್ರಶೇಖರ, ಡಾ.ಎಂ.ಸುರೇಶ, ಕೆ.ಮೋಹನ, ಸಿ.ರಾಜಕುಮಾರ, ಡಾ.ಬಸವರಾಜ, ಎ.ಕೆ.ಧನಂಜಯ, ಎಂ.ಎಸ್.ಸಂತೋಷ, ಎಂ.ಆರ್.ರಾಘವೇಂದ್ರ, ವಿ.ಹುಲಿಕುಂಟೇಶ್ವರ, ಪಿ.ವಿ.ಸಿದ್ದಮ್ಮ, ಶ್ವೇತಾ, ಡಾ.ಎ.ಎಂ.ಭಾರತಿ, ಕೆ.ಚಂದ್ರಶೇಖರ, ಗಜೇಂದ್ರ, ಟಿ.ಜಿ.ಮಲ್ಲಿಕಾರ್ಜುನ, ಬಿ.ಎಸ್.ಗಣೇಶ, ವೀಣಾ, ಹರಿಹರ ರಾಘವೇಂದ್ರ, ಹರಪನಹಳ್ಳಿ ಡಾ.ವೈ.ಶೇಖರಪ್ಪ, ಜಗಳೂರು ರೂಪಲಕ್ಷ್ಮಿ, ಹೊನ್ನಾಳಿ ಹಳದಪ್ಪ, ಮಾಯಕೊಂಡ ರಂಗನಾಥ, ಚನ್ನಗಿರಿ ಸಂತೋಷ, ನ್ಯಾಮತಿ ಮಲ್ಲಿಕಾರ್ಜುನ, ಬಸವಾಪಟ್ಟಣ ಗೋವಿಂದರೆಡ್ಡಿ, ಜಿ.ನವೀನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link