ಕುಣಿಗಲ್![]()
![](https://prajapragathi.com/wp-content/uploads/2020/01/download-1.gif)
ತಾಲ್ಲೂಕಿಗೆ ವಿವಿಧ ಯೋಜನೆಯಡಿ ಮಂಜೂರಾಗಿದ್ದ ಸುಮಾರು ರೂ.700 ಕೋಟಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡದೆ ತಾರತಮ್ಯವೆಸಗುವ ಮೂಲಕ ಅನ್ಯಾಯಮಾಡಿದ್ದು ಇದಕ್ಕೆ ತಾಲ್ಲೂಕಿನ ಇತರೆ ಪಕ್ಷಗಳು ಬೆಂಬಲ ನೀಡಲಿ ಬಿಡಲಿ ನಾವು ನಮ್ಮ ನಾಯಕರ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಡಾ. ರಂಗನಾಥ್ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಗೆ 36 ಟಿ.ಎಂ.ಸಿ. ಹೇಮಾವತಿನೀರು ಹರಿಯಬೇಕು ಆದರೆ 24 ಟಿ.ಎಂ.ಸಿ. ಬರುತ್ತಿದ್ದು ಕುಣಿಗಲ್ ತಾಲ್ಲೂಕಿಗೆ ನಿಗಧಿಯಾಗಿದ್ದ ನೀರಿನಲ್ಲಿ ಕೇವಲ 180 ಎಂ.ಸಿ.ಎಫ್.ಟಿ. ನೀರು ಮಾತ್ರ ಬಂದಿದ್ದು, ಈ ತಾಲ್ಲೂಕಿಗೆ ಅನ್ಯಾಯವಾಗಿದ್ದರಿಂದ ಹಿಂದಿನ ಸಂಮಿಶ್ರ ಸರ್ಕಾರದ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಸುರೇಶ್ ಅವರ ಪರಿಶ್ರಮದಿಂದ ತುಮಕೂರು ಇದು ಸಮರ್ಪಕವಾಗಿ ಹರಿಯದ ಹಿನ್ನೆಲೆಯಲ್ಲಿ 0 ಇಂದ ವೈ ಚಾನಲ್ ವರೆಗೆ 400 ಕೋಟಿ ವೆಚ್ಚದಲ್ಲಿ ಅಗಲಿಕರಣ ಕಾಮಗಾರಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಇದೇ ರೀತಿ ಕೊನೆಯ ಭಾಗವಾದ ಕುಣಿಗಲ್ ದೊಡ್ಡಕೆರೆ ಕಡೆಗೆ ಕಳೆದ 25 ವರ್ಷದಿಂದ ನೀರು ಹರಿಯದೇ ಹೋಗಿದ್ದರಿಂದ ಈ ನಾಲೆಯ ಮೂಲಕ ಬದಲಾಗಿ ಲಿಂಕ್ ಕೆನಾಲ್ ಮೂಲಕ ನೀರು ಹರಿಸಲು 614 ಕೋಟಿ ರೂ. ಮಂಜೂರು ನೀಡಲಾಗಿತ್ತು.
ಆದರೆ ರಾಜ್ಯ ಸರ್ಕಾರ ಈ ಕಾಮಗಾರಿಗಳುನ್ನು ಇದುವರೆಗೂ ತಡೆದು ನಿಲ್ಲಿಸಿದ್ದು ಇದೀಗ ತುಮಕೂರು ಜಿಲ್ಲೆಯ ಮುಖ್ಯ ನಾಲಾ ಅಭಿವೃದ್ದಿಗೆ ಮಾತ್ರ ಮಂಜೂರಾದ 400 ಕೋಟಿ ಹಣದ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿ ವೈಚಾನಲ್ ಬಳಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ಸಂಸದರು ಹೊರಟಿದ್ದಾರೆ ಆದರೆ ಒಂದೇ ವೇಳೆಯಲ್ಲಿ 2 ಕಾಮಗಾರಿಗಳು ಮಂಜೂರಾಗಿದ್ದು ನಮ್ಮ ಕ್ಷೇತ್ರದ ಕಾಮಗಾರಿಗೆ ಮಂಜೂರು ನೀಡದೆ ಅನ್ಯಾಯ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಶಾಸಕ ರಾಜ್ಯ ಸರ್ಕಾರದ ಕ್ರಮದವಿರುದ್ದ ಕಿಡಿಕಾರಿದರು.
ತಾಲ್ಲೂಕಿನ ಹೇಮಾವತಿ ಅಚ್ಚುಕಟ್ಟುದಾರರ ರಸ್ತೆ ಅಭಿವೃದ್ದಿಗೆ 53 ಕೋಟಿ, ಲೋಕೋಪಾಯೋಗಿ ಯೋಜನೆಯ ರಸ್ತೆ ಕಾಮಗಾರಿಗೆ 33 ಕೋಟಿ ಅನುದಾನ, ಪಟ್ಟಣದ ರಸ್ತೆಗೆ 2 ಕೋಟಿ ಹಣವನ್ನು ಹಿಂದಿನ ಸರ್ಕಾರ ಮಂಜೂರು ಮಾಡಿತ್ತು. ಆದರೆ ಇವೆಲ್ಲವನ್ನೂ ಈಗಿನ ಎಡೆಯೂರಪ್ಪ ನೇತೃತ್ವದ ಸರ್ಕಾರವು ತಡೆಹಿಡಿಯುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ನಮ್ಮ ನಾಯಕರುಗಳ ನೇತೃತ್ವದಲ್ಲಿ ಬೃಹತ್ ಹೋರಾಟವನ್ನು ರೂಪಿಸಲಿದ್ದು ಈ ಹೋರಾಟಕ್ಕೆ ತಾಲ್ಲೂಕಿನ ಇತರೆ ಪಕ್ಷದ ಮುಖಂಡರುಗಳು ಸಹಕಾರ ನೀಡಲಿ ಬಿಡಲಿ ಹೋರಾಟವನ್ನು ಮಾಡುತ್ತೇವೆ ಎಂದು ಕಿಡಿಕಾರಿದ ಅವರು ಮೊದಲು ವಿಧಾನಸೌಧದಲ್ಲಿ ಧ್ವನಿ ಎತ್ತಿ ಅನ್ಯಾಯವನ್ನು ಖಂಡಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/01/download-1.gif)