ತುಮಕೂರು
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ರಾಜ್ಯ ಸರ್ಕಾರ ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆದರೆ ಸರ್ಕಾರ ಅಂತಹ ಪ್ರಯತ್ನ ಮಾಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಆರೋಪಿಸಿದರು.
ಜಿಲ್ಲೆಯಲ್ಲಿ ಕೊರೊನಾ ದೊಡ್ಡ ಆತಂಕ ಮೂಡಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಸಕ್ರಿಯರಾಗಿ ಜಿಲ್ಲಾಡಳಿತಕ್ಕೆ ಸೂಕ್ತ ಮಾರ್ಗದರ್ಶನ ನೀಡದೆ ಮರೆಯಾಗಿದ್ದಾರೆ. ಕೊರೊನಾ ತಡೆಗೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಮತ್ತಿತರರಿಗೆ ಆತ್ಮವಿಶ್ವಾಸ ತುಂಬಿ, ಜಿಲ್ಲೆಯ ಜನರ ಭೀತಿ ನಿವಾರಣೆ ಮಾಡಬೇಕಾದ ಸಚಿವರು ಸಂಪರ್ಕಕ್ಕೇ ಸಿಗುತ್ತಿಲ್ಲ ಎಂದು ದೂರಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಆರೋಗ್ಯ ಕಿಟ್ ವ್ಯವಸ್ಥೆ ಇಲ್ಲ. ಜೊತೆಗೆ ನುರಿತ ತಜ್ಞ ವೈದ್ಯರ ಅವಶ್ಯಕತೆ ಇದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಸಾಮಾಜಿಕ ನಿಯಂತ್ರಣ ಹಾಕಿಕೊಳ್ಳಲು ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಪಿಎಲ್, ಎಪಿಎಲ್ ಪಡಿತರ ಕಾರ್ಡುದಾರರಿಗೆ ಎರಡು ತಿಂಗಳ ಪಡಿತರ ಕೊಡುತ್ತೇವೆ ಎಂದು ಸರ್ಕಾರ ಹೇಳಿದೆ. ಅದನ್ನು ಕೂಡಲೇ ಆರಂಭಿಸಬೇಕು. ಕೊರೊನಾ ನಿಯಂತ್ರಣಕ್ಕೆ ಮನೆ ಮನೆಗೆ ಮಾಸ್ಕ್ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಮತ್ತು ಔಷಧಿ ಅಂಗಡಿಗಳಲ್ಲಿ ಮಾಸ್ಕ್ ಸಿಗುತ್ತಿಲ್ಲ. ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೂ ಕಿಟ್ ಇಲ್ಲ. ಮೊದಲಿಗೆ ಸರ್ಕಾರ ಇದೆಲ್ಲವನ್ನೂ ಒದಗಿಸವಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರೈತರಿಗೆ 6 ಸಾವಿರ ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ. ಸೇರಿಸಿ ಹತ್ತು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿತ್ತು. ಈ ಯೋಜನೆಯನ್ನು ಕೇಂದ್ರ ಸರ್ಕಾರ 12 ಸಾವಿರ ರೂ.ಗಳಿಗೆ ವಿಸ್ತರಿಸಬೇಕು. ರಾಜ್ಯ ಸರ್ಕಾರ ನಾಲ್ಕು ಸಾವಿರದಿಂದ 8 ಸಾವಿರ ರೂ.ಗಳಿಗೆ ವಿಸ್ತರಿಸಬೇಕು ಎಂದು ಮುರಳೀಧರ ಹಾಲಪ್ಪ ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಲಾಕ್ಡೌನ್ನಿಂದ ಸಾರ್ವಜನಿಕರಿಗೆ, ರೈತರಿಗೆ ತೊಂದರೆ ಯಾಗಿದೆ. ಗ್ರಾಮೀಣ ಪ್ರದೇಶದ ಜನ ಮನೆಯಲ್ಲೇ ಉಳಿದು ಕೊರೊನಾ ನಿಯಂತ್ರಣ ಮಾಡಬೇಕು. ಇದರಿಂದ ಗ್ರಾಮೀಣ ಜನರಿಗೆ ಅನೇಕ ತೊಂದರೆಗಳಾಗಿವೆ. ಈ ತೊಂದರೆ ನಿವಾರಣೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದರು.
ರೈತರು ಬೆಳೆದ ತರಕಾರಿ, ಹಣ್ಣು, ರೇಷ್ಮೆಯನ್ನು ಮಾರಾಟ ಮಾಡಲು, ಮಾರುಕಟ್ಟೆಗೆ ತರಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಕೆಲ ವರ್ತಕರು ಹಳ್ಳಿಗೆ ಬಂದು ಕಡಿಮೆ ಬೆಲೆಗೆ ಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮಾರುಕಟ್ಟೆ ಸಮಿತಿಗಳು ಹಳ್ಳಿಗೇ ಬಂದು ರೈತರ ಉತ್ಪನ್ನ ಖರೀದಿಸಿ, ನಗರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ತರಬೇಕು. ಮಳೆಗಾಲ ಪ್ರಾರಂಭವಾದಾಗ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರವನ್ನು ಸ್ಥಳೀಯವಾಗಿ ವಿಎಸ್ಎಸ್ಎನ್ಗಳಲ್ಲಿ ಪಡಿತರ ಧಾನ್ಯ ವಿತರಣೆ ಮಾದರಿಯಲ್ಲಿ ರೈತರಿಗೆ ವಿತರಿಸಬೇಕು.
ರೈತರಿಗೆ ಸಾಲದ ಅಗತ್ಯವಿರುವ ಕಾರಣ ಚಾಲ್ತಿಯಲ್ಲಿರುವ ರೈತರ ಬ್ಯಾಂಕ್ ಖಾತೆಗಳಿಗೆ ಬ್ಯಾಂಕುಗಳು ಸಾಲದ ಹಣ ಜಮಾ ಮಾಡುವಂತೆ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಕೃಷಿ ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಬೇಕು. ಗ್ರಾಮೀಣ ಜನರಿಗೆ ಸರ್ಕಾರ ಉಚಿತವಾಗಿ ಮಾಸ್ಕ್ಗಳನ್ನು ನೀಡಬೇಕು. ಗಾರ್ಮೆಂಟ್ಸ್ನವರು ಮಾಸ್ಕ್ ಸಿದ್ಧಪಡಿಸಲು ಅವರಿಗೆ ಅಗತ್ಯ ತರಬೇತಿ ನೀಡಬೇಕು. ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮಗಳಲ್ಲಿ ಸ್ವಯಂಸೇವಕರಂತೆ ಕೆಲಸಮಾಡಿ ಕೊರೊನಾ ವಿರುದ್ಧ ಜಾಗೃತಿ ಹಾಗೂ ಜನರಿಗೆ ಬೇಕಾದ ಅಗತ್ಯತೆಗಳನ್ನು ಪೂರೈಸಲು ಮುಂದೆ ಬರಬೇಕು ಎಂದು ಗೋವಿಂದರಾಜು ಸಲಹೆ ಮಾಡಿದರು.
ಕ್ಲಿನಿಕ್ ತೆರೆಯುವುದು ಸುರಕ್ಷಿತವಲ್ಲ
ಕೊರೊನಾ ಸೋಂಕು ಹರಡುವ ಸಂದರ್ಭದಲ್ಲಿ ಖಾಸಗಿ ವೈದ್ಯರ ಕ್ಲಿನಿಕ್ಗಳಲ್ಲಿ ಹೊರ ರೋಗಿಗಳ ತಪಾಸಣೆ ಸೇವೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಕ್ಲಿನಿಕ್ಗಳಲ್ಲಿ ಸುರಕ್ಷತಾ ಸೌಲಭ್ಯಗಳು ಕಡಿಮೆ ಇದ್ದು ಮುಚ್ಚಲು ಐಎಂಎಯಿಂದ ನಿರ್ಧರಿಸಲಾಗಿದೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಮಹೇಶ್ ಹೇಳಿದರು.
ಜಿಲ್ಲೆಯಲ್ಲಿ ಸುಮಾರು 27 ಲಕ್ಷ ಜನ ಸಂಖ್ಯೆ ಇದ್ದು 1050 ಖಾಸಗಿ ವೈದ್ಯರ ಕ್ಲಿನಿಕ್ಗಳಿವೆ. ಕ್ಲಿನಿಕ್ಗಳಲ್ಲಿ ಗೊತ್ತಿಲ್ಲದೆ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಅದು ವೈದ್ಯರಿಗೆ ಮಾತ್ರವಲ್ಲದೆ, ಅವರು ತಪಾಸಣೆ ಮಾಡುವ ಇತರ ರೋಗಿಗಳಿಗೂ ಅಂಟುವ ಅಪಾಯವಿದೆ. ಈ ಸಂದರ್ಭದಲ್ಲಿ ಕ್ಲಿನಿಕ್ಗಳನ್ನು ತೆರೆದು ರೋಗಿಗಳ ತಪಾಸಣೆ ಮಾಡುವುದು ಕೂಡಾ ಅಪಾಯವೇ ಆಗಿದೆ. ಈ ಕಾರಣಕ್ಕೆ ಕ್ಲಿನಿಕ್ಗಳನ್ನು ಮುಚ್ಚಲು ಐಎಂಎ ತೀರ್ಮಾನ ಮಾಡಿದೆ ಎಂದರು.
ಇದರ ಬದಲು ಟೆಲಿಮೆಡಿಸನ್ ಶುರುಮಾಡುತ್ತಿದ್ದೇವೆ. ಆಸ್ಪತ್ರೆಗಳ ಮಂದೆ ವೈದ್ಯರ ಮೊಬೈಲ್ ನಂಬರ್ ಪ್ರಕಟಿಸಲಾಗುವುದು, ಅಗತ್ಯವಿರುವವರು ವೈದ್ಯರಿಗೆ ಫೋನ್ ಮಾಡಿ ಉಚಿತವಾಗಿ ಆರೋಗ್ಯ ಸಲಹೆ ಪಡೆಯಬಹುದು. ಅಲ್ಲದೆ, ನಗರದ ಐಎಂಎ ಕಟ್ಟಡದಲ್ಲಿ ಕ್ಲಿನಿಕ್ ತೆರೆಯಲು ಉದ್ದೇಶಿಸಲಾಗಿದೆ, ಪ್ರತಿ ದಿನ ಇಬ್ಬರು ವೈದ್ಯರು ಇಲ್ಲಿ ಸೇವೆಯಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಐಎಂಎ ಟಾಸ್ಕ್ಪೋರ್ಸ್ ರಚಿಸಿ ಹಲವಾರು ಯೋಜನೆಗಳನ್ನು ರೂಪಿಸಿ ಜಿಲ್ಲಾಡಳಿತದ ಕಾರ್ಯದಲ್ಲಿ ಸಹಕರಿಸುತ್ತಿದೆ ಎಂದು ಡಾ. ಮಹೇಶ್ ಹೇಳಿದರು.
ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ, ಕೊರೊನಾ ಗಂಡಾಂತರವಾಗಿ ಕಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸಾರ್ವಜನಿಕರಿಗೆ ಅನೇಕ ತೊಂದರೆಗಳಾಗಿವೆ. ಮಾಸ್ಕ್ಗಳು ಸಿಗುತ್ತಿಲ್ಲ. ಹಿರಿಯ ನಾಗರೀಕರಿಗೆ ತೊಂದರೆ ಆಗಿದೆ. ಇವರಿಗೆ ಹೊರಗೆ ಊಟ, ತಿಂಡಿ ಸಿಗುತ್ತಿಲ್ಲ. ಬೇಳಿಗ್ಗೆ 8 ಗಂಟೆಗೆ ಹಾಲು, ತರಕಾರಿ ಅಂಗಡಿಗಳು ಬಾಗಿಲು ಹಾಕತ್ತವೆ. ಈ ಸಮಸ್ಯೆ ಆಗದಂತೆ ಜಿಲ್ಲಾಡಳಿದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜೆಡಿಎಸ್ ಮುಖಂಡ ಬೆಳ್ಳೆ ಲೋಕೇಶ್ ಮಾತನಾಡಿ, ಹೊರದೇಶದಿಂದ ಬಂದವರನ್ನು ಜನರೊಂದಿಗೆ ಸೇರಲು ಬಿಡದೆ ಆಗಲೇ ಆರೋಗ್ಯ ನಿಗಾದಲ್ಲಿ ಇರಿಸಿ, ಚಿಕಿತ್ಸೆ ನೀಡಿದ್ದರೆ ದೇಶದಲ್ಲಿ ಕೊರೊನಾದಿಂದ ಈ ಮಟ್ಟದ ಆತಂಕ ಎದುರಾಗುತ್ತಿರಲಿಲ್ಲ, ಸುಲಭವಾಗಿ ನಿಯಂತ್ರಿಸಬಹುದಿತ್ತು. ಜನರಲ್ಲಿ ಈಗ ಭಯದ ವಾತಾವರಣವಿದೆ, ಅದನ್ನು ನಿವಾರಿಸಿ ಅವರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.ಶಾಸಕರು, ಮುಖಂಡರು ನಿರ್ಗತಿಕರು, ಭಿಕ್ಷುಕರಿಗೆ ಊಟ ಹಾಕುತ್ತೇವೆ ಎಂದು ಪ್ರಚಾರ ಪಡೆಯುವುದು ಬೇಡ. ನಿರ್ಗತಿಕರನ್ನು ನಿರಾಶ್ರಿತ ಕೇಂದ್ರಕ್ಕೆ ಸೇರಿಸಲಿ, ಅವರಿಗೆ ಬೀದಿಯಲ್ಲಿ ಊಟ ಹಾಕಿ ಪೊಷಣೆ ಮಾಡುವುದು ಬೇಡ ಎಂದರು.
ಕೊರೊನಾ ಸೋಂಕು ತಡೆ ಕಾರ್ಯದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಸರ್ಕಾರ ಬಳಸಿಕೊಳ್ಳಬೇಕು. ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ಶಾಸಕರು, ಸಂಸದರವರೆಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳೂ ಈ ಕಾರ್ಯದಲ್ಲಿ ಸ್ವಯಂ ಸೇವಕರಂತೆ ತೊಡಗಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ದೇಶದಲ್ಲಿ ಕೊರೊನಾ ಹರಡದಂತೆ ತಡೆಯಬಹುದುದಿತ್ತು. ಈಗ ನಿರ್ಲಕ್ಷ ಮಾಡದೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು, ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಬೇಕು ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರೊ. ಕೆ. ಚಂದ್ರಣ್ಣ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ರೆಡ್ ಕ್ರಾಸ್ ಕೈ ಜೋಡಿಸಿದೆ. ಕೊರೊನಾ ವಾರಿಯರ್ ಎಂಬ ಸ್ವಯಂ ಸೇವಕರ ಗುಂಪು ರಚಿಸಿ, ಸಾರ್ವಜನಿಕರಲ್ಲಿ ಕೊರೊನಾ ಬಗ್ಗೆ ಅರಿವು ನೀಡುವುದು, ತುರ್ತು ಸೇವೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಚೇತನ್ ಕುಮಾರ್, ಹಿರಿಯ ನಾಗರೀಕ ನಿಯಮಿತ ಆರೋಗ್ಯ ತಪಾಸಣೆ, ಅವರ ಮನೆಗೆ ಅಗತ್ಯ ಸಾಮಗ್ರಿ ಪೂರೈಕೆ ಮುಂತಾದ ಸೇವೆ ಮಾಡಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಸಹಾಯವಾಣಿ ಆರಂಭಿಸಿ, ನಗರದಲ್ಲಿ ಏಳು ಕ್ಲಸ್ಟರ್ ಮಾಡಿ ಸೇವೆ ಆರಂಭಿಸುವುದಾಗಿ ಹೇಳಿದರು.
ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಕೊರೊನಾ ತಡೆಯುವಲ್ಲಿ ಸರ್ಕಾರ, ಪೊಲೀಸ್ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಆಗಿರುವ ವಿಫಲತೆ ಸರಿಪಡಿಸುವ ಕೆಲಸ ಆಗಬೇಕು. ಅರಿವು ಹಂಚುವ ಬದಲು ಅಂಜಿಕ ಹಂಚುವ ಕೆಲಸ ನಡೆಯುತ್ತಿದೆ. ಲಾಕ್ಡೌನ್ನಿಂದ ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಸರ್ಕಾರ ಅವರಿಗೆ ನೆರವಾಗಬೇಕು ಎಂದರು.
ಕೊರೊನಾ ವಿರುದ್ಧ ಜನ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತರಿಗೇ ಮಾಸ್ಕ್ ಸಿಗುತ್ತಿಲ್ಲ. ಹೀಗೇ ಆದರೆ, ಜಾಗೃತಿ ಮೂಡಿಸುವವರಿಂದಲೇ ಕೊರೊನಾ ಹರಡುವಂತಾಗಬಹುದು. ಕೊರೊನಾ ತಡೆ ಕಾರ್ಯದಲ್ಲಿ ಹಲವಾರು ಸಂಘಟನೆಗಳು ಜಿಲ್ಲಾಡಳಿತದ ಜೊತೆ ಕೈ ಜೋಡಿಸಲು ಸಿದ್ಧ ಇವೆ. ಅಂತಹ ಸಂಘಟನೆಗಳ ಸೇವೆ ಬಳಸಿಕೊಂಡು ಬಡಾವಣೆವಾರು ಜಾಗೃತಿ ಮೂಡಿಸಿ ಹತೋಟಿಗೆ ತರುವಂತಹ ರಚನಾತ್ಮಕ ಕೆಲಸ ಆಗಲಿ ಎಂದರು.
ಚಿಂತಕ ಪ್ರೊ. ದೊರೈರಾಜ್ ಮಾತನಾಡಿ, ಕೊರೊನಾದಿಂದ ಜಗತ್ತಿನ ಜನ ತತ್ತರಿಸಿದ್ದಾರೆ. ಕೊರೊನಾ ತಡೆಗೆ ಜನರಿಗೆ ವೈಜ್ಞಾನಿಕ ಅರಿವು ಮೂಡಿಸಬೇಕು, ಭಯಪಡಿಸುವ ಬದಲು ಎದುರಿಸುವ ಆತ್ಮವಿಶ್ವಾಸ ಮೂಡಿಸಬೇಕು ಎಂದರು.ಜಿಲ್ಲಾಡಳಿತ ಖಾಸಗಿ ವೈದ್ಯರ ಸೇವೆ ಬಳಸಿಕೊಂಡು ಸಮರೋಪಾದಿಯಲ್ಲಿ ಕೊರೊನಾ ನಿಯಂತ್ರಣ ಕಾರ್ಯ ನಡೆಸಬೇಕು. ಮನೆಯಲ್ಲಿ ಉಳಿದಿರುವ ಜನರಿಗೆ ಅಗತ್ಯವಿರುವ ಪದಾರ್ಥಗಳನ್ನು ಅವರು ಇರುವಲ್ಲಿಗೇ ತಲುಪಿಸುವ ವ್ಯವಸ್ಥೆ ಆಗಬೇಕು. ಕೊರೊನಾ ಹತೋಟಿಗೆ ದೊಡ್ಡ ಆರ್ಥಿಕ ಸಂಪನ್ಮೂಲ ಬೇಕು. ಸಂಪನ್ಮೂಲ ಕ್ರೂಢೀಕರಣಕ್ಕೂ ಸರ್ಕಾರ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಶತ್ರುಗಳು ನುಗ್ಗಿದ ಮೇಲೆ ಕೋಟೆ ಬಾಗಿಲು ಹಾಕಿದಂತಾಗಿದೆ. ಮೊದಲೇ ನಿಯಂತ್ರಿಸಿದ್ದರೆ ದೇಶದಲ್ಲಿ ಕೊರೊನಾ ತಡೆ ಸಾಧ್ಯವಾಗುತ್ತಿತ್ತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್, ಆದಿತ್ಯ ಆರ್ಥೋಪೆಡಿಕ್ ಸೆಂಟರ್ನ ಡಾ. ತ್ಯಾಗರಾಜ್, ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಸವಯ್ಯ, ಉದ್ಯಮಿ ಸಾಗರನಹಳ್ಳಿ ಪ್ರಭು ಮತ್ತಿತರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
