ಬೆಂಗಳೂರು
ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಎಲ್ಲ ರಣತಂತ್ರಗಳನ್ನು ಹೆಣೆದಿದ್ದೇವೆ.ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರೇ ಬಂದು ಈ ರಣತಂತ್ರದ ಯಶಸ್ಸಿಗೆ ಶಕ್ತಿ ತುಂಬಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿಂದು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಶತ:ಸ್ಸಿದ್ದ.ಅಲ್ಲೀಗ ಯಾವ ಗೊಂದಲವೂ ಇಲ್ಲ.ಇದ್ದ ಗೊಂದಲ ನಿವಾರಣೆಯಾಗಿ ಯಾರು,ಎಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.
ಇದೇ ರೀತಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿರುವ ತುಮಕೂರು ಇರಬಹುದು,ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸಿದ ಹಾಸನ ಲೋಕಸಭಾ ಕ್ಷೇತ್ರ ಇರಬಹುದು.ಎಲ್ಲೆಡೆಯಲ್ಲಿಯೂ ನಾವು ಜಯಭೇರಿ ಬಾರಿಸುತ್ತೇವೆ ಎಂದರು.ಯಾವುದೇ ಕ್ಷೇತ್ರದಲ್ಲಿ ಯಾರು ಯಾರು ಬಂಡಾಯ ಎದ್ದಿದ್ದಾರೆ ಎಂಬ ವಿವರ ನಮ್ಮ ಮುಂದಿದೆ.ಅದಕ್ಕವರು ತಕ್ಕ ಬೆಲೆ ತೆರುತ್ತಾರೆ.ಅದರಲ್ಲಿ ಯಾವ ಅನುಮಾನವೂ ಬೇಡ ಎಂದು ಹೇಳಿದರು.ಚುನಾವಣೆ ಮೈತ್ರಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವಾದ ನಂತರ ಶೇಕಡಾ ಇಪ್ಪತ್ತರಷ್ಟು ಮಂದಿಗೆ ಭಿನ್ನಾಭಿಪ್ರಾಯ ಇತ್ತು.ಆದರೆ ಅಂತಹ ಭಿನ್ನಾಭಿಪ್ರಾಯಗಳೆಲ್ಲ ಈಗ ನಿವಾರಣೆಯಾಗಿವೆ ಎಂದು ನುಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ.ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದ್ದೇವೆ ಎಂದ ಅವರು,ಈಗ ಬಿಜೆಪಿಯವರು ಏನೇ ಘೋಷಣೆ ಮಾಡಿದರೂ ಚುನಾವಣೆಯ ಫಲಿತಾಂಶ ಬಂದ ದಿನ ಅದಕ್ಕೆ ತನ್ನ ದಾರಿ ಯಾವುದು?ಅನ್ನುವುದು ಸ್ಪಷ್ಟವಾಗಿರುತ್ತದೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ಮುಗಿದ ನಂತರ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ಸರ್ಕಾರ ಪತನವಾಗುತ್ತದೆ ಎಂಬುದು ಸುಳ್ಳು.ಯಾವ ಕಾರಣಕ್ಕೂ ಮೈತ್ರಿ ಸರ್ಕಾರಕ್ಕೆ ತೊಂದರೆ ಇಲ್ಲ.ಅದು ನಿರಾತಂಕವಾಗಿ ಮುಂದುವರಿಯಲಿದೆ ಎಂದರು. ಮೈತ್ರಿಕೂಟ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂಬುದು ಕಪೋಲಕಲ್ಪಿತ ಮಾತು.ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ನಿರ್ಧರಿಸಿ ರಚನೆಯಾದ ಸರ್ಕಾರ ಇದು.ಯಾವ ಕಾರಣಕ್ಕೂ ಬೀಳುವುದಿಲ್ಲ ಎಂದು ಹೇಳಿದರು.
ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.ಅದೊಂದು ರೀತಿ ಹಬ್ಬಗಳ ಗಡುವು ಇದ್ದಂತೆ.ಹಬ್ಬ ಬರುತ್ತದೆ.ಮುಗಿಯುತ್ತದೆ.ಆದರೆ ಏನೂ ವ್ಯತ್ಯಾಸವಾಗುವುದಿಲ್ಲ ಎಂದು ನುಡಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿವೆ ಎಂದ ಅವರು,ಲೋಕಸಭಾ ಚುನಾವಣೆ ಬೇರೆ.ಸ್ಥಳೀಯ ಮಟ್ಟದ ಚುನಾವಣೆಗಳು ಬೇರೆ ಎಂದು ಸಮರ್ಥನೆ ಮಾಡಿಕೊಂಡರು.ಬಹುತ್ವದ ಭಾರತವನ್ನು ನಾಶ ಮಾಡಲು ಬಿಜೆಪಿ ಹೊರಟಿದೆ.ಇದು ಮತದಾರರಿಗೂ ಅರ್ಥವಾಗಿದೆ.ಹೀಗಾಗಿ ಅವರು ಅದೇನೇ ಪ್ರಚಾರ ಮಾಡಿದರೂ ಫಲ ನೀಡುವುದಿಲ್ಲ.ಹೀಗಾಗಿ ಈ ಬಾರಿ ಚುನಾವಣೆಯ ಫಲಿತಾಂಶ ಬಂದ ನಂತರ ಅವರು ವಿರೋಧ ಪಕ್ಷದ ಸಾಲಿನಲ್ಲಿ ಕೂರಲೇಬೇಕು ಎಂದು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
