ಹರಪನಹಳ್ಳಿ:
ಶ್ರದ್ಧಾ ಭಕ್ತಿಯ ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ಮುಸ್ಲಿಂ ಬಾಂಧವರ ಮೂವತ್ತು ದಿನಗಳ ಉಪವಾಸ ಅಂತ್ಯಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಟ್ಟಣದ ಮೂರು ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ರಂಜಾನ್ ಹಬ್ಬದ ಮೆರಗು ಹೆಚ್ಚಿಸಿದರು.
ಹೊಸಪೇಟೆ ರಸ್ತೆಯ ತರಳಬಾಳು ಕಲ್ಯಾಣ ಮಂಟಪ ಹಿಂಭಾಗ ದರ್ಗಾದಲ್ಲಿ ಆಲಿ ಆದೀಸ್ ಪಂಗಡದ ಮುಸ್ಲಿಂ ಬಾಂಧವರು ಬೆಳಗ್ಗೆ 8.30ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಡಗಲಿ ರಸ್ತೆಯ ದರ್ಗಾದಲ್ಲಿ ಅಲಿ ಸುನ್ನಿ ಪಂಗಡದವರು 10 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಎಚ್ಪಿಎಸ್ ಕಾಲೇಜು ಹಿಂಭಾಗ ಹಕ್ ಸಮಿತಿಯವರು 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪವಿತ್ರ ರಂಜಾನ್ ಹಿನ್ನೆಲೆ ಸಾವಿರಾರು ಮಂದಿ ಮುಸ್ಲಿಂ ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಇದಕ್ಕಾಗಿ ಹೊಸಪೇಟೆ ರಸ್ತೆಯ ಈದ್ಗಾ ಮೈದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 8 ಗಂಟೆ ವೇಳೆಗೆ ಒಂದೆಡೆ ಜಮಾಯಿಸಿದ ಮುಸ್ಲಿಂ ಮಹಿಳೆಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭ ಕೋರಿದರು.
ರಂಜಾನ್ ಹಿನ್ನೆಲೆ ಬುಧವಾರ ಬೆಳಗ್ಗೆಯಿಂದಲೇ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಸಂಬಂಧಿಗಳೊಂದಿಗೆ ಮಸೀದಿಗಳಿಗೆ ತೆರಳಿದ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಬಡವರಿಗೆ ಬಟ್ಟೆ, ಆಹಾರ ಸಾಮಾಗ್ರಿ, ಹಣವನ್ನು ದಾನವಾಗಿ ನೀಡಿದರು. ಪಟ್ಟಣದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಹಡಗಲಿ ರಸ್ತೆ, ಹೊಸಪೇಟೆ ರಸ್ತೆಯ ಈದ್ಗಾ ಮೈದಾನಗಳ ಸುತ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಪುರಸಭೆ ಸದಸ್ಯರಾದ ಡಿ.ಅಬ್ದುಲ್ ರೆಹಮಾನ್, ಜಾಕೀರ್ ಹುಸೇನ್, ಲಾಟಿ ದಾದಾಪೀರ್, ಎಂ.ಕೆ.ಜಾವೇದ್, ಮುಖಂಡರಾದ ಜಾವೇದ್, ಬೆಲ್ದಾರ್ ಬಾಷಾಸಾಬ್, ಮೂಸಾಸಾಬ್, ಇರ್ಷಾದ್ ಬಾಷಾ, ಮಾಬೂಷಾ, ಬಿ.ಶೇಕ್ಸಾವಲಿ, ರಾಜಾಸಾಬ್, ಎಂ.ಜಾಫರ್, ಉಮರಸಾಬ್, ಸೋಗಿ ಇಬ್ರಾಹಿಂ, ಗುಂಡಿನಕೇರಿ ಸತಾರಸಾಬ್ ಸೇರಿದಂತೆ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
