ಹರಿಹರ:
ದಾವಣಗೆರೆ ಜಲಸಿರಿ ಯೋಜನೆಯಿಂದ ಹಾಳಾಗಿರುವ ನಗರದ ಶಿವಮೊಗ್ಗ ರಸ್ತೆಯಿಂದ ವಿದ್ಯಾನಗರದ ಸಿ ಬ್ಲಾಕ್ 11ನೇ ಕ್ರಾಸ್ ವರೆಗಿನ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಹೊಸದಾಗಿ ನಿರ್ಮಿಸಲು ಆಗ್ರಹಿಸಿ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಮಾಜಿ ನಗರಸಭೆ ಸದಸ್ಯ ನಾಗರಾಜ್ ಮೆಹರ್ವಾಡೆ ಮಾತನಾಡಿ, ದಾವಣಗೆರೆ ನಗರಕ್ಕೆ ದಿನಪೂರ್ತಿ ಕುಡಿಯುವ ನೀರು ಪೂರೈಸುವ ಜಲಸಿರಿ ಯೋಜನೆಗೆ ಪೈಪ್ ಲೈನ್ ಅಳವಡಿಸಲು 40 ಲಕ್ಷ ರೂ. ವೆಚ್ಚದಲ್ಲಿ ಇತ್ತೀಚಿಗೆ ನಿರ್ಮಿಸಿದ್ದ 60 ಅಡಿ ಸಿಮೆಂಟ್ ರಸ್ತೆಯ ಅರ್ಧ ಭಾಗ ಅಗೆದು ಹಾಳು ಮಾಡಿದ್ದಾರೆ.
ಇದು ವಿದ್ಯಾನಗರದ ಮುಖ್ಯ ರಸ್ತೆಯಾಗಿದ್ದು, ನಿತ್ಯ ಸಾವಿರಾರು ರಸ್ತೆಗಳು ಸಂಚರಿಸುತ್ತವೆ. ಕೊರಕಲಾಗಿರುವ ರಸ್ತೆಯಲ್ಲಿ ಜನ-ವಾಹನ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಉರುಳಿ ಬೀಳುತ್ತಿದ್ದಾರೆ. ಆಟೋ, ಕಾರುಗಳು ಸಹ ಅಪಘಾತಕ್ಕೀಡಾಗುತ್ತಿವೆ. ಮಂಗಳವಾರ ರಾತ್ರಿ ಈ ರಸ್ತೆಯಲ್ಲಿ ಕಾರೋಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಶಾಲಾ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ಮಕ್ಕಳನ್ನು ದೂರದ ಶಿವಮೊಗ್ಗ ರಸ್ತೆಗೆ ಕರೆದೊಯ್ಯುವದು ವಿದ್ಯಾರ್ಥಿಗಳಿಗೆ ಪಜೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಸಿರಿ ಕಾಮಗಾರಿಗೂ ಮೊದಲು ನಗರದ ಯುಜಿಡಿ ಯೋಜನೆಗೆಂದು ಅರ್ಧದಷ್ಟು ರಸ್ತೆ ಅಗೆದು ಹಾಳು ಮಾಡಲಾಗಿತ್ತು. ಈಗ ಪೂರ್ತಿ ರಸ್ತೆ ಹಾಳಾಗಿದ್ದು, ಕೂಡಲೆ ಸಂಬಂಧಪಟ್ಟವರು ಮುಂಚಿನಂತೆ ಹೊಸದಾಗಿ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿದ ಪೌರಾಯುಕ್ತೆ ಎಸ್.ಲಕ್ಷ್ಮಿ ದಾವಣಗೆರೆ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೊಸ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕರವೇ ತಾಲ್ಲೂಕು ಅಧ್ಯಕ್ಷ ನಾಗರಾಜ್ ಗೌಡ, ಕೆ.ಜಿ.ಎಸ್.ಪಾಟೀಲ್, ಶರಣಮ್ಮ, ಕೊಟ್ರಪ್ಪ ಕೆ., ಬಸವರಾಜ, ಎಂ.ಗುಡ್ಡದಯ್ಯ, ಅನಿಲ್, ಹೆಚ್.ಬಸವರಾಜ, ಷಂಶುದ್ದೀನ್, ಲತಾ, ಅಮೃತಾ, ಸಿಂಧು, ಯೋಗೇಶ್ ಬಳೆಗಾರ, ಚನ್ನವೀರಸ್ವಾಮಿ, ಸುಮಿತ್ರಾ, ರೇಖಾ, ರಮೇಶ್, ಗಣೇಶ್, ನಾಗರಾಜ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
