ಹಾವೇರಿ :
ತಾಲೂಕಿನ ಗುತ್ತಲ ಹೋಬಳಿಯ ನೆಮ್ಮದಿ ಕೇಂದ್ರದಲ್ಲಿ ರೈತರಿಗೆ ಅವರ ಜಮೀನಿನ ಪಹಣಿ ಪತ್ರಿಕೆಗಳನ್ನು ನೀಡುವಲ್ಲಿ ವಿಳಂಬವಾಗುತ್ತಿದ್ದು, ಬೇಗನೆ ನೀಡುವಂತೆ ಶಿಪಾರಸ್ಸು ಮಾಡುವಂತೆ ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರ ರೈತರ ಕ್ಷೇಮಾಭಿವೃದ್ದಿ ಸಂಘ(ರಿ) ವತಿಯಿಂದ ಜಿಲ್ಲಾಧಿಕಾರಿ ಡಾ|| ವೆಂಕಟೇಶ್ ಎಂವ್ಹಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿದಿನ ಸುಮಾರು 80 ರಿಂದ 100 ಜನರ ಸರದಿ ಜಮಾಯಿಸಿ, ದಿನವಿಡಿ ಪಹಣಿಗಾಗಿ ಸದರಿಯಲ್ಲಿ ನಿಂತ ಪಹಣಿ ಸಿಗದೇ ಊರಿಗೆ ವಾಪಸ್ ಹೋಗುವಂತಾಗಿದ್ದು ದುರದೃಷ್ಠಕರ,ನೆಮ್ಮದಿ ಕೇಂದ್ರದಲ್ಲಿರುವ ಒಂದೇ ಕಂಪ್ಯೂಟರ್ನಲ್ಲಿ ತಹಶಿಲ್ದಾರರ ಕಛೇರಿಗೆ ಸಂಬಂಧಪಟ್ಟ ಎಲ್ಲ ಅರ್ಜಿಗಳನ್ನು ನಮೂದ ಮಾಡುತ್ತಿರುವುದರಿಂದ ಅರ್ಜಿಗಳು ಬಹಳ ಸಮಯ ತೆಗೆದುಕೊಳ್ಳುವಂತಾಗಿದೆ.
ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.ಇನ್ನೊಂದು ಕಂಪ್ಯೂಟರ್ ವ್ಯವಸ್ಥೆ ಮಾಡಿ ಬರಿ ಪಹಣಿ ಪತ್ರ ಬೇಕುನ್ನುವ ರೈತರಿಗೆ ತಕ್ಷಣ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲು ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ, ಇಲ್ಲಿಯವರೆಗೆ ವ್ಯವಸ್ಥೆಯನ್ನು ಸರಿಪಡಿಸಿರುವುದಿಲ್ಲ. ಇಂತಹದ್ದೊಂದು ಸಮಸ್ಯೆಯನ್ನು ನಿವಾರಿಸಲು ತಹಶಿಲ್ದಾರ ಸಾಹೇಬರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿರುವುದಿಲ್ಲ. ಈ ರೀತಿ ಗೋಳನ್ನು ರೈತರು ಅನುಭವಿಸುವಂತಾಗಿದೆ.
ಗುತ್ತಲ ನಾಡಕಛೇರಿಗೆ ಖುದ್ದಾಗಿ ಭೇಟಿ ನೀಡಿ, ವಾಸ್ತವಾಂಶವನ್ನು ಸಂಪೂರ್ಣವಾಗಿ ತಿಳಿದುಕೊಂಡು ರೈತರು ಹಾಗೂ ರೈತ ಮಹಿಳೆಯರು ದಿನನಿತ್ಯ ಅನುಭವಿಸುತ್ತಿರುವ ತೊಂದರೆಯನ್ನು ನಿವಾರಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ನೀಡುವಾಗ ಕಬ್ಬು ಬೆಳೆಗಾರ ರೈತರ ಕ್ಷೇಮಾಭಿವೃದ್ದಿ ಸಂಘ(ರಿ)ಕಾರ್ಯಾಧ್ಯಕ್ಷ ಸಿದ್ದರಾಜ ಮ.ಕಲಕೋಟಿ.ಜಿಲ್ಲಾಧ್ಯಕ್ಷ ಅಶೋಕರಡ್ಡಿ ಹ.ಮರ್ಚರಡ್ಡೇರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
