ಬೆಂಗಳೂರು
ಮುಂಬಯಿಗೆ ಪರಾರಿಯಾಗುತ್ತಿದ್ದ ಕುಖ್ಯಾತ ರೌಡಿ ಮುಲಾಮನನ್ನು ಬೆನ್ನಟ್ಟಿ ಬಂಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೆಲೀಸರು ಯಶಸ್ವಿಯಾಗಿದ್ದಾರೆ.
ರಾಜರಾಜೇಶ್ವರಿ ನಗರ ಹಾಗೂ ಬನ್ನೇರುಘಟ್ಟದಲ್ಲಿ ತಲಾ ಒಂದು ಜೀವ ಬೆದರಿಕೆ ಪ್ರಕರಣ ದಾಖಲಾದ ನಂತರ ಪೊಲೀಸರಿಗೆ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರೌಡಿ ಮುಲಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳುತ್ತಿದ್ದ ಖಚಿತ ಮಾಹಿತಿ ಆಧರಿಸಿ ದೇವನಹಳ್ಳಿ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯತ್ನ,ಬೆದರಿಕೆ ಅಪಹರಣ ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಜರಾಜೇಶ್ವರಿ ನಗರದ ಮುಲಾಮ ಮೂರು ಪೊಲೀಸ್ ಠಾಣೆಗಳ ರೌಡಿಪಟ್ಟಿಯಲ್ಲಿದ್ದಾನೆ ಈತನ ವಿರುದ್ದ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ವಿದ್ಯಾಭ್ಯಾಸವನ್ನು 7 ನೇ ತರಗತಿಗೆ ಬಿಟ್ಟು ವೆಲ್ಡರ್ ಕೆಲಸ ಮಾಡುತ್ತಿದ್ದ ಮುಲಾಮ 18 ನೇ ವಯಸ್ಸಿಗೆ ಅಪರಾಧ ಜಗತ್ತಿಗೆ ಕಾಲಿಟ್ಟು ಕುಖ್ಯಾತ ರೌಡಿ ಬಲರಾಮನ ಬಲಗೈ ಬಂಟನಾಗಿ ಸಹಚರರ ಗ್ಯಾಂಗ್ ಕಟ್ಟಿಕೊಂಡು ಕೊಲೆ ಯತ್ನ, ದೊಂಬಿ, ಹೊಡೆದಾಟ, ಅಪಹರಣ ಇನ್ನಿತರ ಅಪರಾಧ ಕೃತ್ಯಗಳಲ್ಲಿ ತೊಡಗಿ ಬಲರಾಮನ ಮರಣದ ನಂತರ ರೌಡಿ ಚಟುವಟಿಕೆಗಳನ್ನು ಹೆಚ್ಚಿಸಿದ್ದ.
ಮುಲಾಮನ ವಿರುದ್ಧ 3 ಕೊಲೆ, 3 ಕೊಲೆಯತ್ನ, 5 ದರೋಡೆ, 4 ಅಪಹರಣ ಸೇರಿದಂತೆ 19 ಕೇಸ್ ದಾಖಲಾಗಿದ್ದು ರಿಯಲ್ಎಸ್ಟೇಟ್ ದಂಧೆಗೂ ಇಳಿದು ಮುಲಾಮ ಅಪಾರ ಹಣ ಸಂಪಾದಿಸಿದ್ದಾನೆ ಎನ್ನುವ ಆರೋಪ ಎದುರಿಸುತ್ತಿದ್ದಾನೆ
ರಾಜರಾಜೇಶ್ವರಿ ನಗರದಲ್ಲಿ ಬಹುಮಡಿಯ ಕಟ್ಟಡದಲ್ಲಿ ವಾಸವಾಗಿದ್ದ ಮುಲಾಮನನ್ನು 1985ರಲ್ಲಿ ರಾಜಾಜಿನಗರ ಪೊಲೀಸ್ ಠಾಣೆ, ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿಗೆ ಸೇರಿಸಲಾಗಿದೆ.
ಇತ್ತೀಚೆಗಷ್ಟೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರು ರೌಡಿ ಚಟುವಟಿಕೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕೋಕಾ ಕಾಯ್ದೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ ತನ್ನ ಚಾಳಿ ಬಿಡದ ಮುಲಾಮ ಮತ್ತದೇ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಮುಲಾಮನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ