2017 ರಲ್ಲಿ ಶಾಲೆಯಲ್ಲಿ ನಡೆದ ವಿಷ ಪ್ರಕರಣ ನೆನೆದು ಕಣ್ಣೀರಿಟ್ಟರು

ಹುಳಿಯಾರು:

       ತಮ್ಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಂಭ್ರಮಾಚರಣೆಯ ಸಂದರ್ಭದಲ್ಲೂ ಶಾಲೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕಣ್ಣೀರಿಟ್ಟ ಘಟನೆ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಮಂಗಳವಾರ ನಡೆದಿದೆ.

       ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ನೇ ತರಗತಿ ಪರೀಕ್ಷೆಯಲ್ಲಿ 500 ಕ್ಕೆ 498 ಅಂಕಗಳನ್ನು ಗಳಿಸಿ ಚೆನ್ನೈ ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಪಡೆಯುವ ಮೂಲಕ ವಿದ್ಯಾವಾರಿಧಿ ಇಂಟರ್‍ನ್ಯಾಷನಲ್ ಸ್ಕೂಲ್‍ನ ಕೀರ್ತಿ ಫತಾಕೆಯನ್ನು ಹಾರಿಸಿದ ವಿದ್ಯಾರ್ಥಿ ಡಿ.ಯಶಸ್ ಅವರಿಗೆ ಏರ್ಪಡಿಸಿದ್ದ ಅಭಿನಂಧನಾ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರು ಹಾಗೂ ಶಾಲೆಯ ಅಧ್ಯಕ್ಷರೂ ಆದ ಕೆ.ಎಸ್.ಕಿರಣ್‍ಕುಮಾರ್ ಅವರು ಮಾತನಾಡಿ ಶಾಲೆಯ ಪ್ರಗತಿಯನ್ನು ಸಹಿಸಲಾಗದೆ ಕಿಡಿಗೇಡಿಗಳು ಶಾಲಾ ಮಕ್ಕಳು ತಿನ್ನುವ ಅನ್ನಕ್ಕೆ ವಿಷ ಬೆರೆಸಿ 4 ಜನರ ಸಾವಿಗೆ ಕಾರಣರಾದರು. ಟಿವಿಗಳಿಗೆ ಇಲ್ಲಸಲ್ಲದ ಸುದ್ದಿ ಕೊಟ್ಟು ಇಡೀ ದಿನ ನನ್ನ ಮತ್ತು ನನ್ನ ಪತ್ನಿಯ ಮಾನ ಹಾನಿ ಮಾಡಿದರು ಎಂದು ಕಣ್ಣೀರಿಟ್ಟರು.

      ಯಶಸ್‍ನ ಈ ಸಾಧನೆ ಸತತ 2 ವರ್ಷಗಳಿಂದ ನಾವು ಅನುಭವಿಸಿಕೊಂಡು ಬರುತ್ತಿರುವ ಮಾನಸಿಕ ಹಿಂಸೆ ಮತ್ತು ನೋವನ್ನು ಶೇ.50 ರಷ್ಟು ಮರೆಯುವಂತೆ ಮಾಡಿದೆ. ಉಳಿದ ಶೇ.50 ರಷ್ಟು ನೋವನ್ನು ಮಕ್ಕಳ ಅನ್ನಕ್ಕೆ ವಿಷ ಹಾಕಿದ್ದ ಪಾಪಿಗಳು ಪತ್ತೆಯಾಗಿ ಅವರಿಗೆ ಶಿಕ್ಷೆಯಾದಾಗ ಮಾತ್ರ ಸಾಧ್ಯ. ಹಾಗಾಗಿ ಸಿಐಡಿ ತಂಡ ತಮ್ಮ ತನಿಖೆಯನ್ನು ಮತ್ತೊಷ್ಟು ಚುರುಕುಗೊಳಿಸಿ ಆದಷ್ಟು ಬೇಗ ಆರೋಪುಗಳನ್ನು ಪತ್ತೆ ಮಾಡಿ ನಮ್ಮನ್ನು ಕಳಂಕದಿಂದ ಹೊರ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ತಾತಾ ಮುತ್ತಾತನೆ ನನಗೆ ಸ್ಪೂರ್ತಿ

        ನನ್ನ ಮುತ್ತಾತ ವೀರಭದ್ರೇಗೌಡರು 1940 ರಲ್ಲೇ ಕೆಂಕೆರೆಯಲ್ಲಿ ಉಚಿತ ವಿದ್ಯಾರ್ಥಿ ನಿಲಯ ತೆರೆದು ಇದರ ಖರ್ಚುವೆಚ್ಚಕ್ಕೆ 25 ಎಕರೆ ತೆಂಗಿನ ತೋಟ ಬಿಟ್ಟಿದ್ದರು. ನನ್ನ ತಾತ ಮರುಳಪ್ಪ ಅವರು 1952 ರಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಲು ಭೂದಾನ ಮಾಡಿದ್ದರು. 25 ವರ್ಷಗಳ ಹಿಂದೆ ಡಿಗ್ರಿ ಕಾಲೇಜಿಗೂ ಭೂಧಾನ ಮಾಡಿದ್ದರು. ಇವರಿಬ್ಬರೂ ಹಳ್ಳಿಯ ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ಟ ಪ್ರೋತ್ಸಾಹ ನನಗೆ ಹಳ್ಳಿಯಲ್ಲಿ ವಿದ್ಯಾವಾರಿಧಿ ಶಾಲೆ ತೆರೆಯಲು ಸ್ಪೂರ್ತಿಯಾಯಾತು ಎಂದರು.

ಆರಂಭದಿಂದಲೂ ಬೆಳವಣಿಗೆಗೆ ಅಡ್ಡಿ

     ಶಾಲೆಯ ಆರಂಭದಿಂದ ಇಲ್ಲಿಯವರೆವಿಗೂ ಅನೇಕ ಎಡರು ತೊಡರುಗಳನ್ನು ಕೊಟ್ಟಿದ್ದಾರೆ. ಸಿಬಿಎಸ್‍ಸಿ ಅಫಿಲೇಷನ್ ಸಿಗುವ ಸಂದರ್ಭದಲ್ಲಿ ತಡೆಯೊಡ್ಡಿದ್ದರು. ಆಗ ಸಂಸದಾಗಿದ್ದ ಜಿ.ಎಂ.ಸಿದ್ದೇಶ್ವರ್, ಗದ್ದಿಗೌಡರ್, ಸುರೇಶ್ ಅಂಗಡಿ ಈ ಮೂರು ಮಂದಿ ಸೇರಿ ಅಫಿಲೇಷನ್ ಕೊಡಿಸಿಕೊಟ್ಟರು. ಪ್ರತಿ ವರ್ಷ ಶೇ.100 ಫಲಿತಾಂಶ ಬಂದು ಪ್ರಗತಿಯ ಪಥದಲ್ಲಿ ಸಾಗುತ್ತಿರುವಾಗ ಸಿಬಿಎಸ್‍ಸಿ ಬೋರ್ಡ್‍ಗೆ ದೂರು ನೀಡಿ ಕಿರಿಕಿರಿ ಮಾಡಿದರು. ಇಷ್ಟೆಲ್ಲಾ ಕಷ್ಟನಷ್ಟಗಳನ್ನು ಎದುರಿಸಿಕೊಂಡು ಶಾಲೆ ಕಟ್ಟಿ ಬೆಳೆಸಿದಕ್ಕೆ ಯಶಸ್ ಸಾಧನೆ ಮೂಲಕ ಸಾರ್ಥಕತೆ ಕಾಣುವಂತ್ತಾಗಿದೆ ಎಂದರು. ಶಾಲೆಯ ಕಾರ್ಯದರ್ಶಿ ಕವಿತಾಕಿರಣ್, ಪ್ರಾಚಾರ್ಯ ಕೆ.ಬಿ.ಕೃಷ್ಣಮೂರ್ತಿ, ರಾಜ್ಯದ ಟಾಪರ್ ಯಶಸ್, ಯಶಸ್ ತಾಯಿ ನೇತ್ರಾವತಿ, ಸೋದರ ಮಾವ ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap