ಹರಪನಹಳ್ಳಿ
ಭೂ ರಹಿತ ಬಗರ್ ಹುಕುಂ ಹಾಗೂ ಅರಣ್ಯ ಅವಲಂಭಿತ ರೈತರಿಗೆ ಕೂಡಲೇ ಸಾಗುವಳಿ ಚೀಟಿ, ಹಾಗೂ ಅರಣ್ಯ ಹಕ್ಕಿನ ಮಾನ್ಯತೆ ಪತ್ರ ನೀಡುವಂತೆ ಕರ್ನಾಟಕ ಭೂ-ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕ ಕೆ.ಬಿ.ರೂಪನಾಯ್ಕ್ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ತಾಲ್ಲೂಕಿನಲ್ಲಿ ಕಳೆದ 1998/99 ರಲ್ಲಿ 9964 ರೈತರು 24 ಸಾವಿರ ಎಕರೆ ಸಾಗುವಳಿ ಭೂಮಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಕೇವಲ 1800 ರೈತರಿಗೆ 2018-19ರಲ್ಲಿ ಹಕ್ಕು ಪತ್ರ ಮಾತ್ರ ನೀಡಿ ಪಹಣಿ ನೀಡಲು ಮೀನಮೇಷ ಎನಿಸುತ್ತಿದ್ದಾರೆ. ತಿರಸ್ಕøತಗೊಂಡ ಅರ್ಜಿಗಳನ್ನು ಮರು ಪರಿಶೀಲಿಸಿ ಸಾಗುವಳಿ ಚೀಟಿ ನೀಡಲು ಕ್ರಮ ಜರುಗಿಸಬೇಕು ಎಂದರು.
ಮಲಗಿರುವ ಸಮಾಜ ಕಲ್ಯಾಣ ಇಲಾಖೆ :
ರಾಜ್ಯ ಸರ್ಕಾರ ಪುನರ್ ಪರಿಶೀಲನೆಗೆ ಜೂಲೈ 30 ರಂದು ನಿಗದಿಗೊಳಿಸಿದೆ. ಅಷ್ಟರಲ್ಲೇ ಅರಣ್ಯ ಅತಿಕ್ರಮಣದಾರರಿಗೆ ಅನ್ಯಾಯವಾಗದಂತೆ ಪ್ರಕ್ರಿಯೆ ಜರುಗಿಸಬೇಕು. ಮಲಗಿರುವ ಸಮಾಜ ಕಲ್ಯಾಣ ಇಲಾಖೆ ಗ್ರಾಮ ಸಭೆ ಅಥವಾ ಅರಣ್ಯ ಹಕ್ಕು ಸಮಿತಿಗಳು ಅರ್ಜಿಗಳನ್ನು ಪುನರ್ ಪರಿಶೀಲಿಸಿ ಸಂಬಂಧಿಸಿದ ಸಾಕ್ಷಗಳ ಬಗ್ಗೆ ಮಾರ್ಗದರ್ಶನ ನೀಡಲು ಕ್ರಮ ಜರುಗಿಸಬೇಕು.
ಅನುಸೂಚಿತ ಬುಡಕಟ್ಟು ಹಾಗೂ ಇತರೇ ಸಾಂಪ್ರದಾಯಕ ಅರಣ್ಯವಾಸಿಗಳ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿ ವಿಲೇವಾರಿ ಪ್ರಕ್ರಿಯೆ ತೀವ್ರಗೊಳಿಸಬೇಕು ಎಂದರು.
ತಾಲ್ಲೂಕಿನಲ್ಲಿ ಸಾವಿರಾರು ರೈತರು ಬಗರ್ ಹುಕುಂ ಹಾಗೂ ಅರಣ್ಯ ಅವಲಂಭಿತ ರೈತರಿಗೆ ಸಾಗುವಳಿ ಚೀಟಿ ಹಾಗೂ ಅರಣ್ಯ ಹಕ್ಕಿನ ಮಾನ್ಯತೆ ಪತ್ರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೂತನವಾಗಿ ಆಯ್ಕೆಯಾದ ಶಾಸಕರು ಹಾಗೂ ಲೋಕಸಭಾ ಸದಸ್ಯರು ಹಕ್ಕುಪತ್ರ ಕೊಡಿಸುವುದರ ಬಗ್ಗೆ ಇಚ್ಚಾಶಕ್ತಿ ವ್ಯಕ್ತಪಡಿಸಬೇಕೆಂದು ತಾಲ್ಲೂಕು ಅಧ್ಯಕ್ಷ ಕೂಬ್ಯನಾಯ್ಕ್, ಹೇಳಿದರು.
ತಾಲ್ಲೂಕಿನ ಯಡ್ಡಿಹಳ್ಳಿ, ಕೆ.ಕಲ್ಲಹಳ್ಳಿ, ಹೇರೆಮೆಗಳಗೇರಿ, ಅಣಜೆಗೆರೆ, ನಾರಾಯಣಪುರ, ಹಾರಕನಾಳ, ಹುಲಿಕಟ್ಟಿ, ಹರಪನಹಳ್ಳಿ, ಅನಂತನಹಳ್ಳಿ, ಹಾಗೂ ತೊಗರಿಕಟ್ಟೆ ವ್ಯಾಪ್ತಿಯ ಗ್ರಾಮೀಣ ರೈತರು ಜಮೀನುಗಳ ಉತ್ಪಾದನೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಭೂಮಿ ಮೇಲಿನ ಸಂವಿಧಾನಾತ್ಮಕ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಕಾರ್ಯದರ್ಶಿ ಪ್ರಭುದೇವ, ಸಂಚಾಲಕ ಹೆಚ್.ಸಿ.ಕೆಂಚಪ್ಪ, ಸದಸ್ಯೆ ಡಿ.ಈರಮ್ಮ ಹಾಗೂ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/11hrp1.gif)