ಹಾವೇರಿ :
ಸಮಾಜದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮಗಳು ಉತ್ತಮ ಸಮಾಜಕ್ಕೆ ಮಾರಕ ಎಂದು ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿಗಳಾದ ಶ್ರೀ ನಿರಜನಾನಂದ ಪುರಿ ಶ್ರೀಗಳು ಅಭಿಮತ ವ್ಯಕ್ತಪಡಿಸಿದರು. ಜಿಲ್ಲೆಯ ಕಾಗಿನೆಲೆಯಲ್ಲಿ ನಡೆದ ಗುರುಪೌರ್ಣಿಮೆಯ ಅಂಗವಾಗಿ ನಡೆದ ಗುರುವಂಧನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗುರುಪೌರ್ಣಿಮೆಯಂದು ನಾವು ಕನಿಷ್ಠ ಪಕ್ಷ ನಮಗೆ ಜನ್ಮ ಕೊಟ್ಟ ತಂದೆ-ತಾಯಿಗಳ ಹಸಿವು ನೀಗಿಸಲು ಒಂದು ತುತ್ತು ಅನ್ನ ವ್ಯವಸ್ಥೆಯನ್ನು ನಮ್ಮ ಸುತ್ತ-ಮುತ್ತಲೂ ಸೃಷ್ಠಿ ಮಾಡಿಕೊಂಡರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ.ಆದರೆ, ಇಂದು ಸಾಕಷ್ಟು ಮುಂದುವರೆದ ನಗರದಲ್ಲಿ ವೃದ್ಧಾಶ್ರಮಗಳ ಹೆಚ್ಚಿನ ಪ್ರಮಾಣದಲ್ಲಿ ಆರಂಭವಾಗುತ್ತಿದೆ.
ಅಪ್ಪ ಮಾಡಿದ ಆಸ್ತಿಯಲ್ಲಿ ಭಾಗ ಕೇಳುವ ಮಕ್ಕಳು, ಜನ್ಮ ನೀಡಿದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುವದು ಯಾವ ಪರಂಪರೆ ಎಂದು ಪ್ರಶ್ನಿಸಿದ ಶ್ರೀಗಳು, ಇಂದು ಮಕ್ಕಳು ಯಾತಕ್ಕೆ ಹುಟ್ಟಿಸಿದೆ ಎಂದು ತಾಯಿಯನ್ನು ಪ್ರಶ್ನಿಸುವ ಮಟ್ಟಿಗೆ ಬೆಳೆಯುತ್ತಿದ್ದಾರೆ. ಆದರೆ ಆ ತಾಯಿ ತನ್ನ ಹುಟ್ಟಿಗೆ ರಕ್ತವನ್ನು ಹಾಲಿನಂತೆ ಹರಿಸಿದ್ದಾಳೆ ಎಂದು ಸಾಮಾನ್ಯ ಪರಿಜ್ಞಾನವನ್ನು ಮರೆಯುತ್ತಿರುವದು ಆತಂಕಕಾರಿ ಬೆಳವಣಿಯಾಗಿದೆ. ಆದ್ದರಿಂದ ಇಂದಿನ ಯುವಕರು, ಮೊದಲು ತಂದೆ-ತಾಯಿಗಳನ್ನು ಮೊದಲ ಗುರುವೆಂದು ಪೂಜಿಸಿ, ಸಾಕಿ, ಸಲುಹಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಖಾ ಮಠದ ಉಬಯ ಶ್ರೀಗಳು, ಶ್ರೀಪೀಠದ ಧರ್ಮದರ್ಶಿ ಎಸ್.ಎಫ್.ಎನ್.ಗಾಜೀಗೌಡ್ರ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಕುರುಬ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
