ದಾವಣಗೆರೆ:
ಸಂವಿಧಾನ ನಾಶವಾದರೆ ದೇಶದಲ್ಲಿ ಘೋರ ಅನ್ಯಾಯಗಳು ನಡೆಯಲಿವೆ ಎಂದು ಪ್ರಗತಿಪರ ಚಿಂತಕ ಪ್ರೊ.ಸಿ.ಕೆ.ಮಹೇಶ್ ತಿಳಿಸಿದ್ದಾರೆ.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದಿಂದ ‘ಸಂವಿಧಾನ ಉಳಿಸಿ-ಮನುವಾದ ಧಿಕ್ಕರಿಸಿ’ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸಂವಿಧಾನಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. ಸಂವಿಧಾನ ಇರುವ ಸಂದರ್ಭದಲ್ಲಿಯೇ ಉತ್ತರ ಪ್ರದೇಶ ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಸಂವಿಧಾನ ವಿರೋಧಿ ಗುಂಪುಗಳು ದಲಿತ ಹೆಣ್ಣು ಮಕ್ಕಳನ್ನು ಬೆತ್ತಲೆ ಗೊಳಿಸಿ ಥಳಿಸುತ್ತಿವೆ. ಒಂದು ವೇಳೆ ದೇಶದ ಸಂವಿಧಾನವೇ ನಾಶವಾದರೆ, ಅದೇ ಗುಂಪುಗಳು ದಲಿತರನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆಯುವುದು ಸೇರಿದಂತೆ ಹಲವು ಘೋರ ಅನ್ಯಾಯಗಳು ನಡೆಯಲಿವೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಜಗತ್ತಿನ ಯಾವ ದೇಶಗಳಲ್ಲೂ ಸಹ ಸಂವಿಧಾನ ಉಳಿಸಿ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಆದರೆ, ಭಾರತದಲ್ಲಿ ಇಂತಹ ಚರ್ಚೆಗಳು ನಡೆಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಬರೀ ಸಂವಿಧಾನಕ್ಕೆ ಮಾತ್ರ ಬಹುದೊಡ್ಡ ಅಪಾಯ ಎದುರಾಗಿಲ್ಲ. ಈ ದೇಶದ 130 ಕೋಟಿ ಜನರಿಗೂ ಅಪಾಯವಿದೆ. ಈ 130 ಕೋಟಿ ಜನರ ಪೈಕಿ ಶೇ.15ರಷ್ಟು ಜನ ಸುಖಕರ ಬದುಕು ನಡೆಸುತ್ತಿರಬಹುದು. ಆದರೆ, ಇನ್ನುಳಿದ ಸುಮಾರು 100 ಕೋಟಿಗೂ ಹೆಚ್ಚು ಜನರ ಬದುಕು ಸಂವಿಧಾನದ ಮೇಲೆಯೇ ನಿಂತಿದೆ. ಇದು ಸಹ ಕೆಲವರ ಅರಿವಿಗೆ ಬಾರದಿರುವುದು ನಿಜಕ್ಕೂ ದೌರ್ಭಾಗ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಸಂವಿಧಾನ ಉಳಿಸಲಿಕ್ಕಾಗಿ ದಲಿತರು ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಐದು ವರ್ಷಗಳ ಕಾಲ ದೇಶವನ್ನಾಳಿದ ಎನ್ಡಿಎ ಸರ್ಕಾರ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರನ್ನು ಭಯದ ವಾತಾವರಣಕ್ಕೆ ತಳ್ಳಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುವವರಿಗೆ ದೇಶ ದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ. ಮಂಡಲ್ ಕಮಿಷನ್ ವರದಿಯ ಪ್ರಕಾರ ಮೀಸಲಾತಿ ಸೌಲಭ್ಯ ಪಡೆದಿರುವ ಹಿಂದುಳಿದ ಸಮುದಾಯಗಳು ಸಹ ಮೀಸಲಾತಿಯ ವಿರುದ್ಧ ಮಾತನಾಡುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ ಎಂದು ಹೇಳಿದರು.
ಸಂವಿಧಾನದ ಮೂಲಕವೇ ಇಂದು ಹಲವು ಸಮುದಾಯಗಳಿಗೆ ಮೀಸಲಾತಿ ದೊರೆತಿದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಿಸಲು ಹೊರಟಿದ್ದಾರೆ. ಒಂದು ವೇಳೆ ಈ ದೇಶದ ಜನರ ಭಾವನೆಗೆ ಬೆಲೆ ಕೊಡದೇ, ಸಂವಿಧಾನವನ್ನು ಕಿತ್ತೆಸೆಯಲು ಮುಂದಾದರೆ, ಭಾರತದಲ್ಲಿ ರಕ್ತ ಕ್ರಾಂತಿಯೇ ನಡೆದು ಹೋಗಲಿದೆ ಎಂದು ಎಚ್ಚರಿಸಿದರು.
ಹಿಂದೆ ಬೆತ್ತಲೆ ಸೇವೆ, ದೇವದಾಸಿಗಳಂತಹ ಅನಿಷ್ಟ ಪದ್ಧತಿಗಳಿದ್ದವು. ಇವುಗಳ ಕ್ರೌರ್ಯಕ್ಕೆ ದಲಿತ ಮತ್ತು ಹಿಂದುಳಿದ ಮಹಿಳೆಯರೇ ಬಲಿಪಶುಗಳಾಗುತ್ತಿದ್ದರು. ಆದರೆ, ಸಂವಿಧಾನ ಆ ಸಮುದಾಯಗಳಿಗೆ ನೀಡಿದ ಹೋರಾಟದ ಹಕ್ಕಿನ ಕಾರಣಕ್ಕೆ ಈ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಬಿದ್ದಿದೆ. ಇಂತಹ ಶಕ್ತಿ ಇರುವ ಸಂವಿಧಾನವನ್ನೇ ಬದಲಿಸಲು ಮುಂದಾಗಿದ್ದಾರೆ. ಅಲ್ಲದೇ, ಪರಿಶಿಷ್ಟರ ಮೇಲೆ ಜಾತಿ ನಿಂದನೆಯಾಗುವುದನ್ನು ತಡೆಯಲು ಇರುವ ಅಟ್ರಾಸಿಟಿ ಕಾಯ್ದೆಯನ್ನೇ ಮನುವಾದಿ ಕೇಂದ್ರ ಸರ್ಕಾರ ದುರ್ಬಲಗೊಳಿಸಲು ಮುಂದಾಗಿದ್ದನ್ನು ಯಾರೂ ಮರೆಯಬಾರದು ಎಂದರು.
ಇಂದು ನಾವು ಜಾಗೃತರಾಗಿ ಸಂವಿಧಾನವನ್ನು ಉಳಿಸಿಕೊಳ್ಳಲು ಮನುವಾದಿಗಳನ್ನು ಈ ಚುನಾವಣೆಯಲ್ಲಿ ಧಿಕ್ಕರಿಸದಿದ್ದರೇ, ಮುಂದೆ ಜೀತ ಪದ್ಧತಿ, ದೇವದಾಸಿ ಪದ್ಧತಿ ಹಾಗೂ ಬೆತ್ತಲೆ ಸೇವೆಗಳಂತಹ ಅನಿಷ್ಟಗಳು ಮತ್ತೆ ಆಚರಣೆಗೆ ಬರಲಿವೆ. ಆದ್ದರಿಂದ ಮನುವಾದಿಗಳನ್ನು ಧಿಕ್ಕರಿಸಲಿಕ್ಕಾಗಿ ಈ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಗಳಿಗೆ ಮತ ನೀಡಬೇಕೆಂದು ಕರೆ ನೀಡಿದರು.
ಕ.ದ.ಸಂ.ಸ. ಜಿಲ್ಲಾ ಸಂಚಾಲಕ ಬಿ.ದುಗ್ಗಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಮುಖಂಡರಾದ ಎಸ್.ಸತೀಶ್, ಓಬಳೇಶಪ್ಪ, ಗೌರಿಪುರದ ಕುಬೇರಪ್ಪ, ಟಿ.ರವಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಿ.ಟಿ.ಸದಾನಂದ ಪ್ರಾಸ್ತಾವಿಕ ಮಾತನಾಡಿದರು. ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಲೋಕಿಕೆರೆ ಅಂಜಿನಪ್ಪ ಕ್ರಾಂತಿಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
