ದಾವಣಗೆರೆ:
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಭಾವಸಿರಿ ಪ್ರಕಾಶನ, ಅಣಬೇರು ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 12ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ದೊಡ್ಮನೆ ಪ್ರಕಾಶನ ಉದ್ಘಾಟನೆ ಹಾಗೂ ಕವಿಯತ್ರಿ ಸರಿತಾ.ಕೆ ಗುಬ್ಬಿಯವರ ಚೊಚ್ಚಲ ಕೃತಿಗಳಾದ ‘ಹಣ್ಣಿಮೆಯ ಹೂ ನಗೆ’ ಕವನ ಸಂಕಲನ ಹಾಗೂ ‘ಅವನೊಳಗಿನ ನಾನು’ ಕಥಾ ಸಂಕಲನ ಬಿಡುಗಡೆ ಸಮಾರಂಭ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಶಿವಯೋಗಿ ಹಿರೇಮಠ, ಅಂದು ಬೆಳಿಗ್ಗೆ 10.15ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಮಿಡಿತ ಪತ್ರಿಕೆ ಸಂಪಾದಕ ಜಿ.ಎಂ.ಆರ್.ಆರಾಧ್ಯ ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
‘ಅವನೊಳಗಿನ ನಾನು’ ಕಥಾ ಸಂಕಲನವನ್ನು ಧಾರವಾಡದ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ್ ದೇಸಾಯಿ, ‘ಹುಣ್ಣಿಮೆಯ ಹೂ ನಗೆ’ ಕವನ ಸಂಕಲನವನ್ನು ಹುಬ್ಬಳ್ಳಿಯ ಲೇಖಕ ರಾಜೇಂದ್ರ ಪಾಟೀಲ್ ಅವರುಗಳು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಕೆ.ಎಸ್.ವೀರಭದ್ರಪ್ಪ ತೆಲಿಗಿ ಕೃತಿ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಧ್ಯಾಪಕಿ ಜಯಶ್ರೀ ಹರೀಶ್ ರಾಜು ಭಾಗವಹಿಸಲಿದ್ದಾರೆ. ಕು||ಬೃಂದಾ ಭರತ ನಾಟ್ಯ ಪ್ರಸ್ತುತ ಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಂತರ ನಡೆಯುವ ರಾಜ್ಯ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ್ ಗುಂಡಗಟ್ಟಿ ವಹಿಸುವರು. ತಾಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಕವಿಗೋಷ್ಠಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎಸ್.ಎಂ.ಮಲ್ಲಮ್ಮ, ಸಾಹಿತಿ ಬಿ.ಎಲ್.ಗಂಗಾಧರ ನಿಟ್ಟೂರ್ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ 52 ಕವಿಗಳು ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದಾರೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕವಿಯತ್ರಿ ಸರಿತಾ .ಕೆ ಗುಬ್ಬಿ, ಶೋಭಾ ಮಂಜುನಾಥ್, ಅಂಜಿನಪ್ಪ, ಕೆ.ಎಸ್.ವೀರಭದ್ರಪ್ಪ ತೆಲಿಗಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
