ದಾವಣಗೆರೆ:
ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ವಿಶೇಷ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಹಿರಿಯ ಪತ್ರಕರ್ತ ಸಂಪಿಗೆ ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ನಗರದ ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಸವಿತಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆಯಾಗಿರುವ ಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಿ, ವಿಶೇಷ ಮೀಸಲಾತಿ ಕಲ್ಪಿಸಬೇಕೆಂಬ ಕೂಗು ಇಂದು-ನಿನ್ನೆಯದಲ್ಲ. ಆದರೂ ಸರ್ಕಾರಗಳು ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಮ್ಮ ಹಕ್ಕು ನಾವು ಪಡೆಯಲು ಸಂಘಟಿತ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು.
ದೇಶದಲ್ಲಿರುವ ಎಲ್ಲಾ ಸಮುದಾಯಗಳಿಗೂ ಹೋಲಿಸಿದರೆ, ಸವಿತಾ ಸಮಾಜವು ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ನಮ್ಮ ಸಮುದಾಯಕ್ಕೆ ಅನಕ್ಷರತೆ ಒಂದು ರೀತಿಯ ಶಾಪವಾಗಿ ಪರಿಣಮಿಸಿದೆ. ನಮ್ಮಲ್ಲಿ ಅಜ್ಞಾನ, ಬಡತನ ಮನೆ ಮಾಡಿರುವುದಲ್ಲದೇ, ಜಾಗೃತಿ ಹಾಗೂ ಸಂಘಟನೆಯ ಕೊರತೆಯಿಂದ ಯಾವ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.
ಸವಿತಾ ಸಮಾಜ ಇಂದು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ, ಶಿಕ್ಷಣವೇ ಮುಖ್ಯ ಅಸ್ತ್ರವಾಗಿದೆ. ಆದ್ದರಿಂದ ಸಮಾಜದ ಪೋಷಕರು ಮಕ್ಕಳನ್ನು ಕುಲ ಕಸುಬಿಗೆ ಸೀಮಿತ ಮಾಡದೇ, ಒಳ್ಳೆಯ ಶಿಕ್ಷಣ ಕೊಡಿಸಬೇಕಾದ ಅವಶ್ಯಕತೆ ಇದೆ ಎಂದರು.ಹಿಂದೆ ವಿದ್ಯೆ ಕೇವಲ ಮೇಲ್ವರ್ಗಕ್ಕೆ ಸೀಮಿತವಾಗಿತ್ತು. ಶೋಷಿತರು, ದಲಿತರು, ಅಲ್ಪಸಂಖ್ಯಾತರು ಹಿಂದೆ ಋಷಿಮುನಿಗಳು ಶಿಕ್ಷಣ ನೀಡುತ್ತಿದ್ದ ಗುರುಕುಲಗಳ ಕಡೆಗೆ ಸುಳಿಯಲು ಸಹ ಅವಕಾಶ ಇರಲಿಲ್ಲ.
ಹೀಗಾಗಿ ನಮ್ಮಂತಹ ತಳ ಸಮುದಾಯಗಳಿಗೆ ಶಿಕ್ಷಣ ಎಂಬುದೇ ಮರಿಚೀಕೆಯಾಗಿತ್ತು. ಆದರೆ, ಕಾಲ ಕ್ರಮೇಣ ಅದರಲ್ಲೂ ಭಾರತ ಸ್ವಾತಂತ್ರ್ಯಗೊಂಡ ಬಳಿಕ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ಎಲ್ಲರೂ ಅಕ್ಷರ ಕಲಿಯಲು ಸಾಧ್ಯವಾಯಿತು. ಅಲ್ಲದೆ, ಸರ್ಕಾರಗಳು ಸಹ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ನೀಡಲು ಹಲವು ಯೋಜನೆಗಳನ್ನು ರೂಪಿಸಿದ್ದು, ಇದರ ಸದುಪಯೋಗ ಪಡೆದು ಮಕ್ಕಳು ಅಕ್ಷರಸ್ಥರಾಗಬೇಕೆಂದು ಸಲಹೆ ನೀಡಿದರು.
ವೇದೋಪನಿಷತ್ಗಳಲ್ಲೂ ಸವಿತಾ ಸಮಾಜದ ಬಗ್ಗೆ ಉಲ್ಲೇಖ ಇರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕಿದೆ. ಸವಿತಾ ಸಮಾಜವು ಶ್ರೇಷ್ಠ ಸಮಾಜವಾಗಿದ್ದು, ಸವಿತಾ ಮಹರ್ಷಿಗಳು ಆ ಕಾಲದಲ್ಲೇ ಉತ್ತಮ ಸ್ಥಿತಿಯಲ್ಲಿದ್ದರು. ನಮ್ಮ ಸಮಾಜದ ಇತಿಹಾಸ, ಪರಂಪರೆ ಅರಿತು ನಮ್ಮಲ್ಲಿ ಬೇರೂರಿರುವ ಕೀಳರಿಮೆಯಿಂದ ಹೊರಬಂದು ಸ್ವಾಭಿಮಾನಿಗಳಾಗಿ ಬದುಕಬೇಕೆಂದು ಕಿವಿಮಾತು ಹೇಳಿದರು.
ಸವಿತಾ ಸಮಾಜದ ಅಭಿಮಾನ ಹೊಂದಿದಾಗ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿದೆ. ಜನನದಿಂದ ಮರಣದವರೆಗೂ ನಮ್ಮ ಸಮಾಜ ಎಲ್ಲಾ ವರ್ಗದವರಿಗೂ ಅವಶ್ಯಕತೆ ಇದೆ. ನಮ್ಮ ಸಮಾಜದಲ್ಲಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು. ಅಲ್ಲದೇ, ಆ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡಲಿವೆ ಎಂದರು.
ಸಮಾಜದ ಉಪಾಧ್ಯಕ್ಷ ಪಿ.ಬಿ.ವೆಂಕಟಾಚಲಪತಿ ಮಾತನಾಡಿ, ಸವಿತಾ ಸಮಾಜ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಮಾಜವಾಗಿದೆ. ಎಲ್ಲ ರಂಗಳಲ್ಲಿಯೂ ಹಿಂದುಳಿದಿರುವ ನಮ್ಮ ಸಮಾಜವು ಪ್ರಸ್ತುತ ಪ್ರವರ್ಗ -2ಎ ಅಲ್ಲಿ ಇದೆ. ಇದರಲ್ಲಿ ಸುಮಾರು 100ಕ್ಕೂ ಹೆಚ್ಚು ಜಾತಿಗಳಿರುವುದರಿಂದ ಬೇರೆ ಮುಂದುವರೆದ ಜಾತಿಗಳ ಜನರೊಂದಿಗೆ ಪೈಪೋಟಿ ನಡೆಸಿ, ಸರ್ಕಾರದ ಸೌಲಭ್ಯ ಪಡೆಯಲಾಗುತ್ತಿಲ್ಲ.
ಹೀಗಾಗಿ ನಮ್ಮನ್ನೂ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿ, ವಿಶೇಷ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ಸವಿತಾ ಸಮಾಜವನ್ನು ಜಾತಿಯಿಂದ ಹೀಯಾಳಿಸಿ ಮಾತನಾಡುವ, ಜಾತಿ ನಿಂಧನೆ ಮಾಡುವವರನ್ನು ತಕ್ಷಣವೇ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಸಮಾಜವು ಜಾತಿ ನಿಂದನೆಯಿಂದ ಮುಕ್ತವಾಗಲು, ಸಮಾಜದ ಮುಖ್ಯವಾಹಿನಿಗೆ ಬರಲು ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರುವುದು ಅನಿವಾರ್ಯವೂ ಆಗಿದೆ. ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
ಬಹುರಾಷ್ಟ್ರೀಯ ಕಂಪನಿಗಳು, ಅನ್ಯ ರಾಜ್ಯಗಳ ಜನರಿಂದ ನಮ್ಮ ವೃತ್ತಿ ಬಾಂಧವರು ಎದುರಿಸುತ್ತಿರುವ ಪೈಪೋಟಿ ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗಪಟು ಎನ್.ವಿ.ಸುನೀಲ್ಕುಮಾರ, ದಾವಣಗೆರೆ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿರುವ ಪಿ.ಎಲ್.ಗುರುರಾಜ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಪಿ.ಜೆ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರಿನ ಸ್ಪಿನ್ ದೇವಾ ಪ್ರತಿಷ್ಠಾನದ ನಾಮದೇವ ನಾಗರಾಜ, ತುಮಕೂರಿನ ನಿವೃತ್ತ ಪ್ರಾಧ್ಯಾಪಕ ಭೀಮಸೇನ, ಶಿವಮೊಗ್ಗದ ಮೆಸ್ಕಾಂ ಅಧೀಕ್ಷಕ ಅಭಿಯಂತರ ಜೆ.ಶಿವಪ್ರಸಾದ, ನಿವೃತ್ತ ಡಿಎಚ್ಓ ಡಾ.ಎಂ.ಎನ್.ಶ್ರೀಪತಿ, ಮಂಗಳೂರಿನ ಬಿಎಸ್ಎನ್ಎಲ್ ಅಭಿಯಂತರ ರಾಜಶೇಖರ, ಆರೋಗ್ಯ ಇಲಾಖೆ ನಿವೃತ್ತ ನೌಕರ ಬಿ.ಕರಿಯಪ್ಪ, ಶಿಕ್ಷಕ ನಾರಾಯಣ ರಾಂಪುರ, ಕಿರಣ್, ರಾಜ್, ಎನ್.ಆರ್.ರಾಜೇಂದ್ರಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
