ಸಾವಿತ್ರಿಬಾಯಿ ಫುಲೆ ಅವರ ಜಯಂತಿ

ಶಿಗ್ಗಾವಿ :

         ಇಂದು ಮಹಿಳೆಗೆ ಪುರುಷ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಕಾರಣ ಅಂದು ಸಮಾನತೆಯ ಹಕ್ಕಿಗೆ ಕಾರಣವಾಗಿ ಕ್ರಾಂತಿಕಾರಿ ಮಹಿಳೆಯಾಗಿ ಹೊರಹೊಮ್ಮಿದ್ದ ಸಾವಿತ್ರಿಬಾಯಿ ಪುಲೆ ಅವರಂಥ ಶ್ರಮವೇ ಕಾರಣ ಎಂದು ಸ್ಥಳೀಯ ರಂಭಾಪುರಿ ಕಾಲೇಜಿನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ವಿ ಕುಲಕರ್ಣಿ ಹೇಳಿದರು.

         ಪಟ್ಟಣದ ಹುಲಗೂರ ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಮಾನವ ಬಂಧುತ್ವ ವೇಧಿಕೆ ಕರ್ನಾಟಕ, ಮಾನವ ಬಂಧುತ್ವ ವೇಧಿಕೆ ಶಿಗ್ಗಾವಿ ವತಿಯಿಂದ ಹಮ್ಮಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಪ್ರಯುಕ್ತ ಅತ್ತ್ಯುತ್ತಮ ಮಹಿಳಾ ಶಿಕ್ಷಕಿಯರಿಗೆ ಸನ್ಮಾನ, ಪ್ರಭಂದ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ “ಸಾವಿತ್ರಿಬಾಯಿ ಫುಲೆ ಅವರ ಬದುಕು” ವಿಷಯ ಕುರಿತು ಉಪನ್ಯಾಸ ನೀಡುತ್ತ ಮಾತನಾಡಿ, 1848 ರಿಂದ 1852 ರ ಅವಧಿಯಲ್ಲಿ ಸುಮಾರು 18 ಪಾಠ ಶಾಲೆಗಳನ್ನು ಸಾವಿತ್ರಿಬಾಯಿ ಫುಲೆ ದಂಪತಿಗಳು ತೆರೆದರು, ಸಮಾಜದ ಎಲ್ಲ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣವಾಗುವ ಮೂಲಕ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ ಸೇರಿದಂತೆ ಸಮಾಜದ ಅನಿಷ್ಠ ಪದ್ದತಿಗಳ ವಿರುದ್ದ ಹೋರಾಡಿದವರಾಗಿದ್ದಾರೆ.

          ಆ ಕಾಲದಲ್ಲಿ ಸ್ತ್ರೀಯೋಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ ಹಾಗೂ ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆಯಲ್ಲಿದ್ದ ಜನತೆಗೆ ಅವರು ಪಾಠ ಶಾಲೆಗೆ ಹೋಗುವಾಗ ಕೆಲವರು ಕೇಕೆ ಹಾಕಿ ನಗುವುದರೊಂದಿಗೆ ಅವರ ಮೇಲೆ ಕೆಸರು, ಸೆಗಣಿ ಎರಚುತ್ತಿದ್ದರು ಇದರಿಂದ ದೃತಿ ಗೆಡದ ಸಾವಿತ್ರಿ ಬಾಯಿ ಫುಲೆ ಅವರು ಯಾವಾಗಲೂ ಒಂದು ಹೆಚ್ಚಿಗೆ ಸೀರೆಯನ್ನು ಇಟ್ಟು ಕೊಂಡಿರುತ್ತಿದ್ದರು ಎಂದು ಹೇಳಿ ಅವರ ಜೀವನ ಯಶೋಗಾಥೆಯನ್ನು ಎಳೆ ಎಳೆಯಾಗಿ ವಿವರಿಸಿದರಲ್ಲದೇ ಇವರ ಅಂದಿನ ಎಲ್ಲ ಸಾಧನೆಗಳನ್ನು ಪರಿಗಣಿಸಿ ಬ್ರಿಟೀಷ್ ಸರಕಾರ ಅವರಿಗೆ “ಇಂಡಿಯನ್ ಫಷ್ಠ್ ಲೇಡಿ ಟೀಚರ್” ಎಂದು ಬಿರುದು ನೀಡಿದೆ ಎಂದರು.

            ಸಮಾಜ ಸೇವಕ ಮಂಜುನಾಥ ಮಣ್ಣಣ್ಣವರ ಮಾತನಾಡಿ, ಇಂದು ವಿದ್ಯಾರ್ಥಿಗಳಲ್ಲಿ ಗೌರವಿಸುವ ಭಾವನೆ ಕಡಿಮೆಯಾಗಿದೆ ಅದು ಆಗಬಾರದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಿಂದಲೇ ಗೌರವಿಸುವ ಭಾವನೆ ಇರಬೇಕು ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಯಮಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಇಂಥಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಲು ಪ್ರೇರೆಪಣೆಯಾಗುವ ನಿಟ್ಟಿನಲ್ಲಿ ಇಂಥಹ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶವನ್ನು ಈ ಮಾನವ ಬಂಧುತ್ವ ವೇಧಿಕೆ ಹೊಂದಿದೆ ಎಂದರು.

            ಮಾನವ ಬಂಧುತ್ವ ವೇಧಿಕೆಯ ಜಿಲ್ಲಾ ಸಂಚಾಲಕರಾದ ಪ್ರಕಾಶ ಹಾದಿಮನಿ ಅದ್ಯಕ್ಷತೆ ವಹಿಸಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ಮುಖ್ಯೋಪಾದ್ಯಾಯಿನಿಯಾಗಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಭಾರತದ ಮೊಟ್ಟ ಮೊದಲ ಶಿಕ್ಷಕಿಯಾಗಿ, ದಣಿವರಿಯದ ಸತ್ಯ ಶೋಧಕಿಯಾಗಿ ಆಧುನಿಕ ಶಿಕ್ಷಣದ ತಾಯಿಯಾಗಿ ತಮ್ಮದೆ ಆದ ಸೇವೆಯ ಮೂಲಕ ಗುರುತಿಸಿಕೊಂಡವಾರಾಗಿದ್ದರು ಅಂತಹ ಅಕ್ಷರದವ್ವಳ ನೆನಪಿಗಾಗಿ ಶಿಕ್ಷಕಿಯರಿಗೆ ಸನ್ಮಾನಿಸಿರುವುದು ಸಂತಸ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಅತ್ಯುತ್ತಮ ಶಿಕ್ಷಕೀಯರನ್ನು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ರಮೇಶ ಇಂಗಳಗಿಯವರನ್ನು ಸನ್ಮಾನಿಸಲಾಯಿತು.

          ಕ.ಸಾ.ಪ ಅದ್ಯಕ್ಷ ನಾಗರಾಜ ದ್ಯಾಮಕೊಪ್ಪ ಕಾರ್ಯಕ್ರಮ ಉದ್ಘಾಟಿಸಿದರು, ಸರಕಾರಿ ಪಪೂ ಕಾಲೇಜಿ ಪ್ರಾಚಾರ್ಯ ಉಮೇಶ ಪಾಟೀಲ, ಕ.ರಾ.ಪ್ರಾ.ಶಾ.ಶಿ ಸಂಘದ ಅದ್ಯಕ್ಷ ಎಸ್ ಎನ್ ಮುಗಳಿ, ಮಾನವ ಬಂಧುತ್ವ ವೇಧಿಕೆಯ ಸಂಚಾಲಕರುಗಳಾದ ವಿಶಾಲ ಮರಾಠೆ, ಸುನೀಲ ಬಂಡಿವಡ್ಡರ, ಮುತ್ತುರಾಜ ಗೊಟಗೋಡಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು, ಪ್ರೋ. ಚೂಡಿ ಉಪನ್ಯಾಸಕರು ನಿರೂಪಿಸಿದರು, ಪ್ರೋ ರಂಜಾನ್ ಕಿಲ್ಲೇದಾರ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link