ಚಿತ್ರದುರ್ಗ:
ನಿರ್ಲಕ್ಷಿತ ಬುಡಕಟ್ಟು ಸಮುದಾಯದ ಉನ್ನತಿಗಾಗಿ ಜೀವನದ ಕೊನೆಯುಸಿರಿರುವತನಕ ಹೋರಾಟ ನಡೆಸಿ ಕಣ್ಮರೆಯಾಗಿರುವ ಇಬ್ಬರು ದಿಗ್ಗಜರುಗಳಾದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿ.ನಾಗಪ್ಪ ಹಾಗೂ ರಾಜ್ಯ ಯಾದವ ಸಂಘದ ಮಾಜಿ ಅಧ್ಯಕ್ಷರು ಹಾಗೂ ವಿಜ್ಞಾನಿ, ವಿಶ್ರಾಂತ ಉಪಕುಲಪತಿ ಡಾ.ಆರ್.ದ್ವಾರಕಿನಾಥ್ ಇವರುಗಳು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ ಎಂದು ಕವಿ, ಹೋರಾಟಗಾರ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ಜಿಲ್ಲಾ ಯಾದವ ಗೊಲ್ಲರ ಸಂಘ ಹಾಗೂ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದಿಂದ ರಂಗಯ್ಯನಬಾಗಿಲು ಸಮೀಪವಿರುವ ಗೊಲ್ಲರ ಸಂಘದಲ್ಲಿ ವಿ.ನಾಗಪ್ಪ ಹಾಗೂ ಡಾ.ಆರ್.ದ್ವಾರಕಿನಾಥ್ ಇವರುಗಳಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದಿಂದ ದೊರಕುವ ಸೌಲಭ್ಯ ಹಾಗೂ ಎಲ್ಲಾ ಸಾಮಾಜಿಕ ಮಾನ್ಯತೆಗಳಿಂದ ವಂಚಿತರಾಗಿರುವವರ ಪರವಾಗಿ ಹೋರಾಟ ನಡೆಸುವವರು ಸಿಗುವುದು ತುಂಬಾ ಅಪರೂಪ. ಕಾಡುಗೊಲ್ಲರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕೆಂದು ಕೊನೆಯತನಕ ವಿ.ನಾಗಪ್ಪ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿದರು. ಅದೇ ರೀತಿ ಡಾ.ಆರ್.ದ್ವಾರಕಿನಾಥ್ ವಿಜ್ಞಾನಿಯಾಗಿ ಉಪಕುಲಪತಿಯಾಗಿ ಕೆಲಸ ಮಾಡಿದರೂ ಬಹಳಷ್ಟು ಜನಕ್ಕೆ ಅವರು ಗೊಲ್ಲ ಸಮುದಾಯದವರು ಎಂಬುದೇ ಗೊತ್ತಿರಲಿಲ್ಲ. ನಮ್ಮನ್ನಗಲಿರುವ ಈ ಇಬ್ಬರು ಮಹನೀಯರು ಎಲ್ಲಿಯೂ ದೊಡ್ಡ ನಾಯಕರುಗಳೆಂದು ಬಿಂಬಿಸಿಕೊಳ್ಳದೆ ನಿಸ್ವಾರ್ಥವಾಗಿ ಸಮುದಾಯದ ಹಿತಕ್ಕಾಗಿ ಹೋರಾಟ ನಡೆಸಿದರು ಎಂಬುದನ್ನು ಗೊಲ್ಲ ಸಮಾಜ ಎಂದಿಗೂ ಮರೆಯಬಾರದು ಎಂದು ನೆನಪಿಸಿದರು.
ನಿರ್ಲಕ್ಷಿತ ಸಮುದಾಯದ ಪರವಾಗಿ ಹೋರಾಟ ಮಾಡುವವರಲ್ಲಿ ತ್ಯಾಗ ನಿಸ್ವಾರ್ಥವಿರಬಾರದು. ಸಮುದಾಯದ ಹಿತಕ್ಕೆ ವ್ಯಕ್ತಿ ಸ್ವಾರ್ಥ ಅಡ್ಡಿಯಾಗಬಾರದು. ಅದಕ್ಕಾಗಿ ಗೊಲ್ಲ ಸಮಾಜದ ಈ ಇಬ್ಬರು ನಾಯಕರುಗಳ ಆದರ್ಶ ತತ್ವಗಳನ್ನು ಪಾಲಿಸುವುದರ ಮೂಲಕ ಸರ್ಕಾರದ ಸವಲತ್ತುಗಳಿಗಾಗಿ ಹೋರಾಟ ನಡೆಸುವ ಪ್ರಜ್ಞಾಪೂರ್ವಕ ಜಾಗೃತಿಯನ್ನು ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಆಸೆ ಇಟ್ಟುಕೊಂಡಿದ್ದ ವಿ.ನಾಗಪ್ಪನವರ ಕನಸು ನನಸಾಗಿಯೇ ಉಳಿದಿದೆ. ನಿಜವಾಗಿಯೂ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡುತ್ತ ವಿ.ನಾಗಪ್ಪ ಹಾಗೂ ಡಾ.ಆರ್.ದ್ವಾರಕಿನಾಥ್ ಇವರುಗಳು ಗೊಲ್ಲ ಸಮುದಾಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸರಳ ಮತ್ತು ಶಿಸ್ತುಬದ್ದ ಜೀವನ ನಡೆಸಿದ ಈ ಇಬ್ಬರು ನಾಯಕರುಗಳನ್ನು ನಮ್ಮ ಸಮುದಾಯದ ಯುವ ಪೀಳಿಗೆಯವರು ಮಾದರಿಯನ್ನಾಗಿಟ್ಟುಕೊಳ್ಳಿ ಎಂದು ತಿಳಿಸಿದರು.
ವಿ.ನಾಗಪ್ಪನವರು ತುಂಬು ಜೀವನ ನಡೆಸಿ ದೀರ್ಘಕಾಲ ಆರೋಗ್ಯವಾಗಿದ್ದರು. ಆದರೆ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕಾಗಿರುವುದರಿಂದ ಮೃತ್ಯು ಅವರನ್ನು ಸೆಳೆದಿದೆ. ತಮ್ಮದೇ ಆದ ತತ್ವ ಸಿದ್ದಾಂತದ ಮೇಲೆ ನಡೆಯುತ್ತಿದ್ದ ನಾಗಪ್ಪನವರು ಎಂತಹ ಕಠಿಣ ಸಂದರ್ಭ ಎದುರಾದರೂ ರಾಜಿ ಮಾಡಿಕೊಳ್ಳುವ ಜಾಯಮಾನದವರಲ್ಲ. ಅದೇ ರೀತಿ ಡಾ.ಆರ್.ದ್ವಾರಕಿನಾಥ್ ಉನ್ನತ ಹುದ್ದೆಯಲ್ಲಿದ್ದಾಗ ಎಲೆಮರೆಯ ಕಾಯಿಯಂತಿದ್ದುಕೊಂಡು ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಇನ್ನು ಅನೇಕರಿಗೆ ಸಾಕಷ್ಟು ನೆರವು ನೀಡಿದ್ದಾರೆ.
ಈ ಇಬ್ಬರು ದಿಗ್ಗಜರನ್ನು ಸ್ಮರಣೆ ಮಾಡುತ್ತಿರುವುದು ಅರ್ಥಪೂರ್ಣ. ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಬೇಕೆಂಬ ಅವರ ಹೋರಾಟದ ಫಲವಾಗಿ ದೆಹಲಿವರೆಗೆ ಮುಟ್ಟಿದೆ ಎಂದು ಗೊಲ್ಲ ಸಮುದಾಯದ ಬಗ್ಗೆ ಅವರಲ್ಲಿದ್ದ ಕಾಳಜಿಯನ್ನು ಗುಣಗಾನ ಮಾಡಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಗೊಲ್ಲ ಸಮಾಜದ ಏಳಿಗೆಗಾಗಿ ವಿ.ನಾಗಪ್ಪ ಒಬ್ಬರೇ ಹೋರಾಟ ನಡೆಸಿದರೆ ಸಾಲದು ಜನಾಂಗದ ಎಲ್ಲರೂ ಹೋರಾಟಕ್ಕೆ ಸಿದ್ದರಾಗಿ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷ ಸಿ.ಮಹಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಆನಂದ್, ಜಿ.ಪಂ.ಮಾಜಿ ಅಧ್ಯಕ್ಷರುಗಳಾದ ಗೀತನಂದಿನಿಗೌಡ, ಶಾಂತಮ್ಮ, ಮಾಜಿ ಸದಸ್ಯೆ ಮೀನಾಕ್ಷಿ ನಂದೀಶ್, ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ, ನ್ಯಾಯವಾದಿ ಶಿವುಯಾದವ್, ಗೊಲ್ಲ ಸಮಾಜದ ಮುಖಂಡರುಗಳಾದ ಸಿದ್ದೇಶ್ಯಾದವ್, ದೊಡ್ಡನಾಗಯ್ಯ, ಬಿ.ಜಯಪ್ಪ, ಕೆಂಗಾವರ ಕರಿಯಣ್ಣ, ಶ್ರೀಕಂಠನ್, ಚಿಕ್ಕಪ್ಪಯ್ಯ, ಪಾಪಣ್ಣ, ಪಿ.ಟಿ.ರಂಗಸ್ವಾಮಿ, ಡಿ.ಜಿ.ಗೋವಿಂದಪ್ಪ, ಪಿ.ಕರಿಯಣ್ಣ, ಎಸ್.ಟಿ.ಪಲ್ಗುಣೇಶ್ವರ, ಕೆ.ಸಿ.ರಮೇಶ್, ಪಿ.ಬಿ.ಪ್ರಕಾಶ್, ವೀರಭದ್ರಪ್ಪ ಸೇರಿದಂತೆ ಚಿಕ್ಕಮಂಗಳೂರು, ಬಳ್ಳಾರಿ, ತುಮಕೂರು, ಹಾಸನ, ದಾವಣಗೆರೆ ಜಿಲ್ಲೆಗಳಿಂದ ಆಗಮಿಸಿದ್ದ ಗೊಲ್ಲ ಸಮಾಜದವರು ಹಾಗೂ ಅವರ ಅಭಿಮಾನಿಗಳು ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
