ಸ್ವಾವಲಂಬನೆಯ ನವಭಾರತ ನಿರ್ಮಾಣಕ್ಕೆ ಪಣ-ಗೃಹ ಸಚಿವ

ಹಾವೇರಿ

    ಹಲವು ಸವಾಲುಗಳ ನಡುವೆ ಅದಮ್ಯ ವಿಶ್ವಾಸದಿಂದ ಸ್ವಾತಂತ್ರ್ಯ ಭಾರತವನ್ನು ಸ್ವಾವಲಂಬನೆಯ ಆತ್ಮನಿರ್ಭರ ನವಭಾರತ ನಿರ್ಮಾಣಕ್ಕೆ ಪಣತೊಡಲಾಗಿದೆ ಎಂದು ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

   ಜಿಲ್ಲಾಡಳಿತದಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 74ನೇ ಸ್ವಾತಂತ್ರ್ಯೋತ್ಸವ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಜಿಲ್ಲಾ ಸಾಧನೆಯ ಕಿರಿರುಹೊತ್ತಿಗೆ ಬಿಡುಗಡೆಮಾಡಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಅವರು ಕರ್ನಾಟಕ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಬರುವ ದಿನಗಳಲ್ಲಿ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿ ನಿಲ್ಲಿಸಲು ಪಣತೊಡಗಲಾಗಿದೆ ಎಂದು ಘೋಷಿಸಿದರು.

   ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅತ್ಯಂತ ಕಠಿಣ ಸವಾಲು ಎದುರಿಸಿ ಹೊಸ ಮಾರ್ಗದಲ್ಲಿ ಭಾರತ ದೇಶ ಸ್ವಾವಲಂಬನೆಯ ಎಡೆಗೆ ಬಹುದೊಡ್ಡ ಹೆಜ್ಜೆ ಇಟ್ಟಿದೆ. ಆಹಾರ ಸ್ವಾವಲಂಬನೆ, ರಕ್ಷಣಾ ವಲಯದಿಂದ ಬಾಹ್ಯಕಾಶದವರೆಗೆ ಸ್ವಾವಲಂಬನೆಯನ್ನು ಸಾಧಿಸಿದೆ. ಭಾರತವಲ್ಲದೆ ಜಗತ್ತಿನ ಇತರ ರಾಷ್ಟ್ರಗಗಳಿಗೂ ಸಾಟ್ಲೈಟ್ ನಿರ್ಮಾಣಮಾಡಿಕೊಡುವ ಮೂಲಕ ಸ್ವಾವಲಂಬಿ ಭಾರತವಾಗಿ ಮುನ್ನಡೆದಿದೆ ಎಂದು ಹೇಳಿದರು.

    ಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ವಿದ್ಯುತ್, ಪ್ರತಿಯೊಬ್ಬರಿಗೂ ಶಿಕ್ಷಣ, ಎಲ್ಲರಿಗೂ ಸೂರು, ಆತ್ಮಗೌರವದ ಸ್ವಾಭಿಮಾನದ ಬದುಕು ಕಲ್ಪಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ತೊಡೆದುಹಾಕಿ ಸಮಾನತೆಯ ಕಲ್ಪನೆಯ ರಾಮರಾಜ್ಯದ ನಿರ್ಮಾಣದ ಕನಸು ಸಹಕಾರಗೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಸಮಾನ ಸಮಾಜ ನಿರ್ಮಾಣ ಸ್ವಾವಲಂಬನೆಯ ಬದುಕು ರೂಪಿಸಿಕೊಡಲು ಪಣತೊಟ್ಟಿದೆ ಎಂದು ಹೇಳಿದರು.

    ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದ ಸಹಸ್ರಾರು ಜನರನ್ನು ನಾವು ನೆನಯಬೇಕಾಗಿದೆ. ಇವರ ತ್ಯಾಗದಿಂದ ಸ್ವಾತಂತ್ರ್ಯಗಳಿಸಿ 73 ವರ್ಷ ಕಳೆದಿದ್ದೇವೆ. ಆದರೆ ಇಂದಿನ ದಿನಗಳಲ್ಲಿ ದೇಶಕ್ಕಾಗಿ ನೀವು ಏನು ಮಾಡುತ್ತಿರಿ ಎಂದರೆ ಪ್ರಾಣಕೊಡುವ ಜನ ಇಂದಿಲ್ಲ. ಆದರೆ ಪ್ರತಿಯೊಬ್ಬರೂ ಸತ್ಯದ ಪ್ರಾಮಾಣಿಕವಾಗಿ ದೇಶದ ಸೇವೆ ಮಾಡುತ್ತೇವೆ ಎನ್ನುವ ಜನ ಇದ್ದಾರೆ. ದೇಶಕ್ಕಾಗಿ ನಾವು ಬದುಕಬೇಕಾಗಿದೆ. ದೇಶಕ್ಕಾಗಿ ಬದುಕಿ ಬಾಳಬೇಕು. ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಭಾರತೀಯನು ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಶತಮಾನದಲ್ಲಿ ಕಾಣದ ಭೀಕರ ಮಳೆ, ಪ್ರವಾಹದಂತಹ ಬಹುದೊಡ್ಡ ಸಂಕಷ್ಟದ ಸವಾಲನ್ನು ಕರ್ನಾಟಕ ರಾಜ್ಯ ಎದುರಿಸಿತ್ತು. ಈ ಸಂದರ್ಭದಲ್ಲಿ ಜನರ ಸಂಕಷ್ಟ ನೀಗಿಸಲು ಮುಖ್ಯಮಂತ್ರಿಗಳು ಪ್ರವಾಸಕೈಗೊಂಡು ಜನರಲ್ಲಿ ಆತ್ಮವಿಶ್ವಾಸತುಂಬಿ ಅಭಿವೃದ್ಧಿಗೆ ರೂ.7997 ಕೋಟಿ ಗಳನ್ನು ನೀಡಿದರು. ಜಿಲ್ಲೆಯಲ್ಲಿ ನೆರೆಯಿಂದ ಹಾನಿಯಾದ 21815 ಮನೆಗಳ ದುರಸ್ಥಿ ಹಾಗೂ ಪುನರ್ ನಿರ್ಮಾಣಕ್ಕೆ ರೂ. 236.26 ಕೋಟಿ ಪರಿಹಾರ ವಿತರಿಸಲಾಗಿದೆ. ರೂ. 202 ಕೋಟಿ ಬೆಳೆ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.

   ವಿಶ್ವಕ್ಕೆ ಮಾರಕವಾಗಿರುವ ಕೋವಿಡ್ ನಿರ್ವಹಣೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 1.40 ಕೋಟಿ ವೆಚ್ಚದಲ್ಲಿ ಸುಜ್ಜಿತವಾದ ಆರ್.ಪಿ.ಸಿ.ಆರ್ ಲ್ಯಾಬ್‍ನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ 340 ಹಾಸಿಗೆಗಳಿಗೆ ಕೇಂದ್ರೀಕೃತ ಹೈ-ಫ್ಲೋ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. 36 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ, ಐಸೋಲೇಷನ್ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಸಾವಿರ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ವೈರಾಣು ಕ್ಷಿಪ್ರ ಪತ್ತೆಗಾಗಿ 11,400 ಸಾವಿರ ರ್ಯಾಪಿಡ್ ಆಂಟಿಜನ್ ಕಿಟ್‍ಗಳು ಪೂರೈಕೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 704 ಗ್ರಾಮಗಳ 3.45 ಲಕ್ಷ ಕುಟುಂಬಗಳ 17.95 ಲಕ್ಷ ಜನ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಹೇಳಿದರು.

   ಹಾವೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡ ನಿರ್ಮಾಣದ ರೂ. 325 ಕೋಟಿ ಕಾಮಗಾರಿಗೆ ಈ ತಿಂಗಳಾಂತ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಿ ನಿಗಧಿತ ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ರೂ.120 ಕೋಟಿ ವೆಚ್ಚದಲ್ಲಿ ಪ್ರತಿ ತಾಲೂಕಿಗೊಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು. ಶಿಗ್ಗಾಂವ ಮತ ಕ್ಷೇತ್ರದ ಮೂರು ಪಟ್ಟಣಗಳಲ್ಲಿ 22 ಕೊಳಚೆ ಪ್ರದೇಶ ಘೋಷಣೆ ಮಾಡಲಾಗಿದೆ. 11 ಸಾವಿರ ಮನೆಗಳ ನಿರ್ಮಾಣ ಕೈಗೊಳ್ಳಲಾಗುವುದು. ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಒಂದು ಸಾವಿರ ಎಕರೆ ಭೂಮಿಯನ್ನು ಕಾಯ್ದಿರಿಸಿ ಕೈಗಾರಿಕಾ ಅಭಿವೃದ್ಧಿಗೆ ಪಣತೊಡಲಾಗಿದೆ ಎಂದು ಹೇಳಿದರು.

    ರೂ.185 ಕೋಟಿ ಸರ್ವಜ್ಞ ಏತ ನೀರಾವರಿ ಯೋಜನೆ, ರೂ.212 ಕೋಟಿ ವೆಚ್ಚದ ಆಣೂರ ಕೆರೆ ಸೇರಿ ಇತರೆ 30 ಕೆರೆಗಳ ತುಂಬಿಸುವ ಕಾಮಗಾರಿ, ರೂ.157 ಕೋಟಿ ವೆಚ್ಚದಲ್ಲಿ ಬುಡಪನಹಳ್ಳಿ ಇತರ 18 ಕೆರೆಗಳನ್ನು ತುಂಬಿಸುವ ಕಾಮಗಾರಿಗಳು, ರಾಣೇಬೆನ್ನೂರ ತಾಲೂಕಿನ ದೊಡ್ಡಕೆರೆ, ಅಸುಂಡಿ ಹಾಗೂ ಇತರ 17 ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಬಾಳಂಬೀಡ, ಹಿರೇಕಾಂಶಿ ಏತ ನೀರಾವರಿ ಯೋಜನೆಯಡಿ ರೂ.504 ಕೋಟಿ ವೆಚ್ಚದಲ್ಲಿ 280 ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಶಿಗ್ಗಾಂವ ಹಾಗೂ ಸವಣೂರ ಏತ ನೀರಾವರಿ ಯೋಜನೆಯಯನ್ನು ಇದೇ ನವಂಬರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

    ಶಾಸಕರಾದ ನೆಹರು ಓಲೇಕಾರ , ತಾ.ಪಂ.ಅಧ್ಯಕ್ಷರಾದ ಶ್ರೀಮತಿ ಕಮಲವ್ವ ಹೇಮನಗೌಡ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link