ಶ್ರೀನಗರ
ಜಮ್ಮು ಕಾಶ್ಮೀರದ ರಾಜಕಾರಣಕ್ಕಾಗಿ ರಕ್ತ ಹರಿಸುವ ಪರಂಪರೆ ಮುಂದುವರೆದಿದ್ದು, ನಿನ್ನೆ ರಾತ್ರಿ ಅನಂತ್ನಾಗ್ ಜಿಲ್ಲೆಯ ಬಿಜೆಪಿ ಮುಂಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅನಂತ್ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿರುವ ಗುಲ್ ಮೊಹಮ್ಮದ್ ಮಿರ್ ಎಂಬುವರನ್ನು ನಿನ್ನೆ ರಾತ್ರಿ ಕೆಲವು ಅಪರಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಅವರು ವಾಹನ ಚಲಾಯಿಸುತ್ತಿದ್ದಾಗ ಮತ್ತೊಂದು ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅವರನ್ನು ಹತ್ಯೆ ಮಾಡಿದ್ದಾರೆ.ಹಿಂದಿನಿಂದಲೂ ಅವರಿಗೆ ಉಗ್ರಗಾಮಿಗಳಿಂದ ಜೀವ ಬೆದರಿಕೆ ಇತ್ತು, ಅದಾಗ್ಯೂ ಅವರಿಗೆ ಒದಗಿಸಿದ್ದ ಭದ್ರತೆ ಹಿಂತೆಗೆದುಕೊಳ್ಳಲಾಗಿತ್ತು, ಹೀಗಾಗಿ ಅವರು ಉಗ್ರಗಾಮಿಗಳಿಗೆ ಸುಲಭ ಬಲಿಯಾಗಿದ್ದಾರೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ .
ಮಿರ್ ಹತ್ಯೆಯನ್ನು ಮೋದಿ ಸೇರಿದಂತೆ ಇತರ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಉಗ್ರಗಾಮಿಗಳ ವಿರುದ್ಧ ಶೀಘ್ರವೇ ಕ್ರಮ ಜರುಗಿಸಬೇಕು ಎಂದು ಜಮ್ಮು-ಕಾಶ್ಮೀರ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ. ಓಮರ್ ಅಬ್ದುಲ್ಲಾ , ಮೆಹಬೂಬಾ ಮಫ್ತಿ ಅವರು ಸಹ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಕಾಶ್ಮೀರದಲ್ಲಿ ರಕ್ತ-ಸಿಕ್ತ ರಾಜಕೀಯ ಪದೇ ಪದೇ ನಡೆಯುತ್ತಲೇ ಇದೆ. ಪ್ರಸ್ತುತ ಅಲ್ಲಿ ಚುನಾವಣೆಗಳು ನಡೆಯುತ್ತಿದ್ದು, ಸೋಮವಾರ ಸಹ ಕೆಲವು ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮತಚಲಾಯಿಸದಂತೆ ಉಗ್ರಗಾಮಿಗಳು, ಪ್ರತ್ಯೇಕವಾದಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
