ಚಳ್ಳಕೆರೆ
ನಗರದ ವೆಂಕಟಸಾಯಿ ಸೇವಾಟ್ರಸ್ಟ್ ಸಾಯಿಭಕ್ತರ ಸಹಕಾರದಿಂದ ನಿರ್ಮಿಸಿದ ಭಗವಾನ್ ಶ್ರೀಸಿರಿಡಿ ಸಾಯಿಬಾಬಾ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಸಾಯಿವನದ ಭೂಮಿ ಪೂಜೆ ಹಾಗೂ ಡಾ.ಶಿವಕುಮಾರ ಸ್ವಾಮೀಜಿಯವರ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಫೆ.14ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪುಟಪರ್ತಿ ಸಾಯಿಬಾಬಾ ದೇವಸ್ಥಾನದ ಪ್ರಧಾನ ಆರ್ಚಕರಾದ ಸುಲೇಖ್ ಮಹಾರಾಜ್ ಪಂಡಿತ್ ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವರು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ತಿಳಿಸಿದರು.
ಅವರು, ಸೋಮವಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲಾ ಸಾಯಿ ಸದ್ಭಕ್ತರ ಸಹಕಾರದೊಂದಿಗೆ ಬಹುಕೋಟಿ ಮೌಲ್ಯದ ಭಗವಾನ್ ಸಿರಿಡಿ ಸಾಯಿಬಾಬಾ ಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಈ ಮಹಾನ್ ಕಾರ್ಯಕ್ಕೆ ರಾಜ್ಯದ ವಿವಿಧಡೆಗಳಿಂದ ಸಾಯಿ ಭಕ್ತರು ಸಹಕರಿಸಿದ್ದಾರೆ. ದ್ವಿತೀಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಶ್ವದ ಗಮನ ಸೆಳೆದ ನಡೆದಾಡುವ ದೇವರು, ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಯವರ ಶ್ರದ್ದಾಂಜಲಿ ಕಾರ್ಯಕ್ರಮ ಹಾಗೂ ಸಾಯಿವನದ ಭೂಮಿ ಪೂಜೆಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಭಕ್ತರು ಆಗಮಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ಧಾರೆ.
ಟ್ರಸ್ಟ್ನ ಯೋಜನೆ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಬಿ.ವಿ.ಚಿದಾನಂದಮೂರ್ತಿ, ಅಂದು ಬೆಳಗ್ಗೆ 5.30ದಿಂದ ಮಧ್ಯಾಹ್ನ 12ರ ತನಕ ಸಾಯಿಬಾಬಾರವರಿಗೆ ಆರತಿ, ಅಭಿಷೇಕ, ಅಲಂಕಾರ ಸೇವೆಯನ್ನು ನಡೆಸಲಾಗುವುದು. ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನರಹರಿ ಸದ್ಗುರು ಪೀಠಾಧ್ಯಕ್ಷ ವೈ. ಸದ್ಗುರು ಮೂರ್ತಿ ಸ್ವಾಮೀಜಿ ವಹಿಸುವರು. ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರನ್ನು ಅಭಿನಂದಿಸಲಾಗುವುದು ಎಂದರು.
ಟ್ರಸ್ಟ್ನ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಭಗವಾನ್ ಸಾಯಿಬಾಬಾ ಮಂದಿರಕ್ಕೆ ನೆರವು ನೀಡಿದ ದಾನಿಗಳಾ ಪ್ರೇಮ್ ಆನಂದ್, ಚೇತನ್ಕುಮಾರ್, ಡಾ.ಚಂದ್ರಾನಾಯ್ಕ, ಎ.ಎಸ್.ಚಿದಾನಂದಗುಪ್ತ ಮುಂತಾದವರನ್ನು ಸನ್ಮಾನಿಸಲಾಗುವುದು. ಸಾಯಿ ಭಕ್ತರಾದ ಎನ್.ಲಕ್ಷ್ಮಿನರಸಿಂಹ, ಯು.ಎಸ್.ಕುಬೇರ್, ಎಚ್.ಜಯದೇವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿಭಕ್ತರು ಆಗಮಿಸಿ ಯಶಸ್ಸಿಗೊಳಿಸುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
