ಚಿತ್ರದುರ್ಗ;
ಐತಿಹಾಸಿಕ ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಮುರುಘಾಮಠದಲ್ಲಿ ಸಡಗರ-ಸಂಭ್ರಮ ಮೈದೆಳೆದು ಎಲ್ಲಿ ನೋಡಿದಲ್ಲಿ ಜನಸಾಗರವೇ ತುಂಬಿಹೋಗಿತ್ತು. ಕಳೆದ ಅಕ್ಟೋಬರ್ 13ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಶರಣಸಂಸ್ಕøತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು.
ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾಮಠದ ಶೂನ್ಯಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಶ್ರೀಗಳು ರುದ್ರಾಕ್ಷಿ ಕಿರೀಟಧಾರಣೆ ಮಾಡಿ, ಸರಳವಾಗಿ ಪೀಠಾರೋಹಣ ಮಾಡಿದರು.
ಶ್ರೀಮುರುಘಾಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಶ್ರೀಮಠದ ಕರ್ತೃ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಿಸಿ, ಚಿನ್ನದ ಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ, ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನಿಡಿದುಕೊಂಡು ಪೀಠಾರೋಹಣ ಮಾಡಿದರು. ಈ ಸಂಧರ್ಭದಲ್ಲಿ ನಾಡಿನ ಹರಗುರುಚರಮೂರ್ತಿಗಳು, ಸಾಧಕರು, ಭಕ್ತರು, ಉತ್ಸವ ಸಮಿತಿ ಅಧ್ಯಕ್ಷರು, ಕಾರ್ಯಧ್ಯಕ್ಷರು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಶಾಲಾಕಾಲೇಜುಗಳ ಮುಖ್ಯಸ್ಥರುಗಳು, ನೌಕರ ವರ್ಗದವರು, ಅಪಾರ ಸಂಖ್ಯೆಯ ಜನ ಸಮೂಹ ಜಯಘೋಷಣೆಗಳೊಂದಿಗೆ ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣವನ್ನು ವೀಕ್ಷಿಸಿದರು. ವಿವಿಧ ಕಲಾತಂಡಗಳು ಶ್ರೀಮಠದ ಆವರಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಸರದಿ ಸಾಲಿನಲ್ಲಿ ನಿಂತು ಶೂನ್ಯಪೀಠಾರೋಹಣ ವೀಕ್ಷಣೆ ಮಾಡಿ, ಶರಣರಿಗೆ ಫಲಪುಷ್ಪ ಕಾಣಿಕೆಗಳನ್ನು ನೀಡಿ ಆಶೀರ್ವಾದ ಪಡೆದು ಧನ್ಯತಾಭಾವ ಮೆರೆದರು
ಶ್ರೀಮಠದ ಪ್ರಾಂಗಣದಲ್ಲಿ ವಿಶ್ವಗುರು ಬಸವೇಶ್ವರರ ಹಾಗೂ ಶೂನ್ಯಪೀಠದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆಗೆ ಶ್ರೀಮುರುಘಾ ಶರಣರು ಚಾಲನೆ ನೀಡಿದರು. ಜಾನಪದ ಕಲಾತಂಡಗಳೊಂದಿಗೆ ಶ್ರೀಮಠದ ಆವರಣದಲ್ಲಿ ಶರಣರ, ಹರಗುರುಚರಮೂರ್ತಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.
ಶ್ರೀಮಠದಲ್ಲಿಂದು ನಡೆದ ಐತಿಹಾಸಿಕ ಸನ್ನಿವೇಶಗಳಿಗೆ ಶ್ರೀಮಠವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀಮಠದ ರಾಜಾಂಗಣದಲ್ಲಿ ಬಿಡಿಸಿದ್ದ ಹೂವಿನ ಬೃಹತ್ ಚಿತ್ತಾರ ಎಲ್ಲರ ಗಮನ ಸೆಳೆಯಿತು. ಇಂದಿನ ಸಮಾರಂಭದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು, ಬರುವ ಎಲ್ಲ ಭಕ್ತಾದಿಗಳಿಗೆ ಮಹಾದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
