ಹುಬ್ಬಳ್ಳಿ
ಸರ್ಕಾರಕ್ಕೆ ಟೈಂ ಬಾಂಬ್ ಇಟ್ಟವರು ಸಿದ್ದರಾಮಯ್ಯ ಮೇ.೨೩ ರ ನಂತರ ಆ ಬಾಂಬ್ ಸ್ಪೊಟ್ ಗೋಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಕುಂದಗೋಳ ಉಪಚುಣಾವಣೆ ಹಿನ್ನಲೆಯಲ್ಲಿ ನಗರದಲ್ಲಿಂದು ಸುದ್ದಿಗೊಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಗ್ಗೆ ನಾನು ಹಲವು ಬಾರಿಹೇಳಿರುವ ಹಾಗೇ ಯಾವುದೇ ಸಮಯದಲ್ಲಿ ಸರ್ಕಾರ ಪತನ ಆಗಬಹುದು. ಈಗ ಆ ಸಮಯ ಬಂದಿದೆ. ಮೈತ್ರಿ ಸರ್ಕಾರ ಪತನಗೊಳ್ಳಲು ಸರ್ಕಾರಕ್ಕೆ ಟೈಂ ಬಾಂಬ್ ಇಟ್ಟೋರು ಸಿದ್ದರಾಮಯ್ಯ, ಮೇ೨೩ ರಂದು ಲೋಕಸಭಾ ಚುಣಾವಣೆಯ ಫಲಿತಾಂಶ ಬಂದ ಮೇಲೆ ಆ ಟೈಮ್ ಬಾಂಬ್ ಸ್ಪೋಟ್ ಆಗುತ್ತೆ. ಇದೆಲ್ಲದರ ಸೆಂಟರ್ ಪಾಯಿಂಟ್ ಸಿದ್ದರಾಮಯ್ಯ ಆಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆಯೂ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಸುಮಲತಾ ವಿಚಾರದಲ್ಲಿ ಸಿದ್ದರಾಮಯ್ಯ ಪಾತ್ರವಿದ್ದು ಅವರೇ ಸುಮಲತಾ ಅವರಿಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಅಂತಾ ಹೇಳಿದ್ದರು. ನಂತರ ಇಲ್ಲ ಅಂತಾ ಹೇಳುತ್ತಿದ್ದಾರೆ. ಚೆಲುವರಾಯಸ್ವಾಮಿ ಸೇರಿದಂತೆ ಹಲವರು ಸುಮಲತಾ ಪರವಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ವೋಟ್ ಹಾಕಿರೋದಾಗಿಯೂ ಬಹಿರಂಗವಾಗಿ ಹೇಳಿದ್ದಾರೆ. ಇವರೆಲ್ಲರ ಹಿಂದೆ ಇರೋರು ಸಿದ್ದರಾಮಯ್ಯ ಎಂದು ಗಂಭೀರ ಆರೋಪ ಮಾಡಿದರು.
ಸಿಎಂ ಕ್ಯಾಂಪೇನ್ ಸಿರಿಯಸ್ ಅಲ್ಲ: ಕುಮಾರಸ್ವಾಮಿ ಸೋಮವಾರ ಮಾಡಿದ ಕ್ಯಾಂಪೇನ್ ಸಿರಿಯಸ್ ಅಲ್ಲ. ಅವರು ಕೇವಲ ಜೆಡಿಎಸ್ ಧಾರವಾಡ ಜಿಲ್ಲಾದ್ಯಕ್ಷ ರಾಜಣ್ಣ ಕೋರವಿ ಅವರ ಮಗಳ ಮದುವೆಗೆ ಬಂದಿದ್ದರು. ಮೈತ್ರಿ ಸರ್ಕಾರಕ್ಕೂ ಕುಮಾರಸ್ವಾಮಿ ಅಕ್ಕಿ ಕಾಳು ಹಾಕಿ ಹೋಗಿದ್ದಾರೆ. ರಾಜ್ಯದ ಸಿಎಂ ಕುರ್ಚಿ ಖಾಲಿ ಇಲ್ಲದಿದ್ದರೂ ಕೆಲವರು ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಹೇಳುತ್ತಿದ್ದಾರೆ. ಆಗ ಕುಮಾರಸ್ವಾಮಿ ಆದರೂ ಕೆಲವು ಶಾಸಕರ ಬಾಯಿ ಮುಚ್ಚಿಸಬೇಕಿತ್ತು. ಅಥವಾ ಮೈತ್ರಿ ಧರ್ಮಪಾಲನೆ ಇದರೆ ಸಿದ್ದರಾಮಯ್ಯ ಆದರೂ ಶಾಸಕರಿಗೆ ಹೇಳಬೇಕು ಅದನ್ನು ಮಾಡಲಿಲ್ಲ ಎಂದು ಆರೋಪ ಮಾಡಿದರು.
ಅಧಿಕಾರ ಹೋದ ಮೇಲೆ ಸರ್ಕಾರಿ ಕಚೇರಿ ಖಾಲಿ ಮಾಡಬೇಕು ಎಂಬ ನಿಯಮವಿದೆ. ಆದರೆ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಬಂದು ಎಷ್ಟೋ ತಿಂಗಳು ಕಳೆದರು ಕಾವೇರಿ ಮನೆಯಲ್ಲಿ ಇದ್ದಾರೆ. ಯಾರೇ ಆಗಲಿ ಎರಡು ತಿಂಗಳ ಬಳಿಕ ಸರ್ಕಾರಿ ಬಂಗಲೇ ಖಾಲಿ ಮಾಡಬೇಕು. ಆದರೆ ಅವರು ಹಾಗೇ ಮಾಡದೇ ಅನಧಿಕೃತವಾಗಿ ಕಟ್ಟಡ ಬಳಸುತ್ತಿದ್ದಾರೆ ಎಂದು ಆರೋಪ ಮಾಡಿದ ಅವರು, ಸಿದ್ದರಾಮಯ್ಯ ಅವರೇ ನೀವೆನಾದರೂ ಕಾವೇರಿ ಮನೆಗೆ ಬಾಡಿಗೆ ಕೊಟ್ಟಿದ್ದೀರಾ ? ಬೇರೆ ಮಂತ್ರಿಗಳ ಹೆಸರಿನಲ್ಲಿ ಮನೆಯಲ್ಲಿರೋ ನಿಮಗೆ ಬುದ್ದಿ ಹೇಳೋ ನೈತಿಕತೆ ಇಲ್ಲ ಎಂದು ಕಟುಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








