ವಿಕಲಚೇತನರ ಬಗ್ಗೆ ಸಮಾಜದ ಕಳಕಳಿ ಅವಶ್ಯ : ಕೆಂಗಬಾಲಯ್ಯ

ದಾವಣಗೆರೆ 

         ವಿಕಲಚೇತನರ ಬಗ್ಗೆ ಸಮಾಜದ ಕಳಕಳಿ ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆಂಗಬಾಲಯ್ಯ ಅಭಿಪ್ರಾಯಪಟ್ಟರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸರ್ಕಾರಿ ಬಾಲಕರ ಬಾಲ ಮಂದಿರ ಆವರಣ, ಎಂಸಿಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ವಿಕಲಚೇತನರಿಗೆ ಏರ್ಪಡಿಸಲಾಗಿದ್ದ ಮಾನಸಿಕ ಆರೋಗ್ಯ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

            ಹುಟ್ಟಿನಿಂದ, ಅಥವಾ ಹುಟ್ಟಿನ ಆನಂತರದಲ್ಲಿ, ಕೆಲವರಿಗೆ ವಂಶಪಾರಂಪರ್ಯವಾಗಿ ಹೀಗೆ ಅನೇಕ ಕಾರಣಗಳಿಂದ ಅಂಗವೈಕಲ್ಯತೆ ಉಂಟಾಗಿರುತ್ತದೆ. ಆದರೆ ಆ ಸ್ಥಿತಿಯಲ್ಲಿ ಹೇಗೆ ಬದುಕುತ್ತೇವೆ ಎಂಬುದು ಮುಖ್ಯವಾಗುತ್ತದೆ. ಮೊದಲೆಲ್ಲ ವಿಕಲಚೇತನ ಮಕ್ಕಳು ಪೋಷಕರ ಅವಜ್ಞೆಗೆ, ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದರು. ಆದರೆ ಸಂವಿಧಾನಾತ್ಮಕವಾಗಿ ಅವರಿಗೆ ರಕ್ಷಣೆ ಒದಗಿಸಿದ ತರುವಾಯ ಅನೇಕ ಸುಧಾರಣೆ ಕಂಡು ಬಂದಿದೆ.

          ಪೋಷಕರು ವಿಕಲಚೇತನ ಮಕ್ಕಳನ್ನು ನಿರ್ಲಕ್ಷಿಸಿದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿವಿಧ ಸೌಲಭ್ಯಗಳು ಲಭ್ಯವಿದ್ದು, ವಿಕಲಚೇತನತರ ಇದರ ಸದುಪಯೋಗ ಪಡೆಯಬಹುದು. ಎಲ್ಲರಂತೆ ಎಲ್ಲ ಅರ್ಹತೆಗಳನ್ನು ಹೊಂದಿರುವ ವಿಶೇಷಚೇತನರು ಅಂಗವೈಕಲ್ಯದ ಕಾರಣ ಸರ್ವಾಂಗರಂತೆ ಎಲ್ಲ ರಂಗಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಸರ್ಕಾರ ಇವರಿಗೆ ಮೀಸಲಾತಿ ನೀಡಿದೆ. ಆದರೆ ಎಷ್ಟೋ ಮೀಸಲಾದ ಹುದ್ದೆಗಳೂ ಸಹ ಅವರಿಗೆ ಲಭ್ಯವಾಗದಿರುವುದರ ಬಗ್ಗೆ ಅವರ ಕೂಗು, ಹೋರಾಟ ಸಾಗುತ್ತಿದ್ದರೂ ಅಂತಹ ಪ್ರಗತಿ ಕಾಣುತ್ತಿಲ್ಲ. ಆದ್ದರಿಂದ ಇವರ ಬಗ್ಗೆ ಸಮಾಜದ ಕಳಕಳಿಯು ಮುಖ್ಯವಾಗುತ್ತದೆ ಎಂದರು.

            ಅಂಗವೈಕಲ್ಯತೆ ಶಾಪವಲ್ಲ. ಸರಿಯಾದ ಅವಕಾಶ ಸಿಕ್ಕರೆ ಏನಾನ್ನದರೂ ಸಾಧಿಸಿ ತೋರಿಸುತ್ತಾರೆ. ಆದ್ದರಿಂದ ಪೋಷಕರು ಮತ್ತು ಸಮಾಜ ವಿಶೇಷಚೇತನರಿಗೆ ಪೂರಕ ಅವಕಾಶ ನೀಡಬೇಕು. ಅಂಗವೈಕಲ್ಯದಿಂದ ನೊಂದ ವ್ಯಕ್ತಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದರೆ ಅವರು ನ್ಯೂನ್ಯತೆಗಳನ್ನು ಗಮನಿಸಿ ಆಮೂಲಾಗ್ರ ಬದಲಾವಣೆಯನ್ನು ತರುತ್ತಾರೆ ಹಾಗೂ ಸಮಾಜಕ್ಕೆ ದಾರಿದೀಪವಾಗುತ್ತಾರೆ ಎಂದ ಅವರು ವಿಕಲಚೇತನರಿಗೆ ಉಚಿತ ಕಾನೂನು ಸೇವಾ ಸೌಲಭ್ಯವಿದೆ. ಹಾಗೂ ಇನ್ನಿತರೆ ಯಾವುದೇ ಸೌಲಭ್ಯಗಳನ್ನು ವಿಕಲಚೇತನರ ಇಲಾಖೆ ಮತ್ತಿತರೆ ಇಲಾಖೆಯಿಂದ ಪಡೆದುಕೊಳ್ಳಬಹುದೆಂದರು

           ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎನ್.ಟಿ.ಮಂಜುನಾಥ್ ಮಾತನಾಡಿ, ವಿಶೇಷಚೇತನರಿಗೆ ನಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಮಮಕಾರದ ಅವಶ್ಯಕತೆ ಇದೆ. ವಿಶೇಷಚೇತನರಿಗೆ ಹಾಗೂ ಮಾನಸಿಕ ಸಮಸ್ಯೆ ಇರುವವರಿಗೆ ಸಕಾಲದಲ್ಲಿ ಚಿಕಿತ್ಸೆ, ಆಪ್ತ ಸಮಾಲೋಚನೆ ನೀಡಿದಲ್ಲಿ ಪರಿಹಾರ ಸಾಧ್ಯವಿದೆ ಎಂದರು.

           ವಕೀಲರಾದ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ, ವಿಕಲಚೇತನರು ಮತ್ತು ಮಾನಸಿಕ ಸಮಸ್ಯೆ ಇರುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಅವಕಾಶ ನೀಡಿದಲ್ಲಿ ಸಮಾಜಕ್ಕೆ ಪೂರಕವಾದ ಅತ್ಯುತ್ತಮ ಕೆಲಸ ಮಾಡುತ್ತಾರೆ. ಆದರೆ ಸದೃಢರಾದವರೇ ಇಂದು ಸಮಾಜಕ್ಕೆ ಮಾರಕವಾಗುತ್ತಿರುವುದು ವಿಷಾಧನೀಯ. ಕಣ್ಣಿದ್ದವರು ಎಡುವುತ್ತಿದ್ದಾರೆ. ಅಂಧರೇ ಸೂಕ್ಷ್ಮವಾಗಿ ನಡೆಯುತ್ತಾರೆ.

          ಅಂಗವೈಕಲ್ಯವನ್ನು ಮರೆಮಾಚುವಂತೆ ಸಾಧಸಿ ಕೆಲವರು ಬದುಕುತಿದ್ದು ಅವರು ಎಲ್ಲರಿಗೂ ಮಾದರಿ ಎಂದರು.ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳಾದ ಡಾ.ಸರೋಜಬಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಮಗೆ ದೊರೆತ ಹಕ್ಕು ಮತ್ತು ಸೌಲಭ್ಯಗಳನ್ನು ನಿರ್ಲಕ್ಷಿಸಬಾರದು. ವಿಕಲಚೇತನರಲ್ಲಿ ಅಪ್ರತಿಮ ಪ್ರತಿಭೆ ಇದೆ.

        ಅದನ್ನು ಹೊರ ಹಾಕಲು ಉತ್ತಮ ಅವಕಾಶಗಳು ಬೇಕು. ಹಾಗೆಯೇ ಪ್ರತಿ ಮಾನಸಿಕ ಸಮಸ್ಯೆಗಳು ಹುಚ್ಚುತನ ಅಲ್ಲ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದೆ. ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಹೋಗಬಾರದು. ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾನಸಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತ ಆಪ್ತ ಸಮಾಲೋಚನೆ ಸೌಲಭ್ಯ ಇದೆ ಎಂದರು.

           ಜಿಲ್ಲಾ ಮನೋವೈದ್ಯರಾದ ಡಾ.ಗಂಗಂ ಸಿದ್ದಾರೆಡ್ಡಿ ಮಾತನಾಡಿ, ಭ್ರಮೆ, ವಿಭ್ರಮೆ, ಖಿನ್ನತೆ, ಮೂರ್ಚೆ ರೋಗ, ಮನೋದೈಹಿಕ ಕಾಯಿಲೆಗಳು, ಮದ್ಯವ್ಯಸಸನ ಹೀಗೆ ಅನೇಕ ಸಮಸ್ಯೆಗಳು ಹಾಗೂ ಮಕ್ಕಳಲ್ಲಿ ಆಟಿಸಂ, ಎಡಿಹೆಚ್‍ಡಿ, ನಡವಳಿಕೆ ತೊಂದರೆ ಹೀಗೆ ಅನೇಕ ಲಕ್ಷಣಗಳನ್ನು ಗುರತಿಸಿ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆಯನ್ನು ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾಡಲಾಗುತ್ತದೆ ಎಂದರು. ಹಾಗೂ ವೇದಿಕೆ ಕಾರ್ಯಕ್ರಮದ ನಂತರ ಪಿಪಿಟಿ ಮೂಲಕ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು.

            ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂತೋಷ್‍ಕುಮಾರ್ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್, ಮಾನಸಿಕ ಆರೋಗ್ಯ ವಿಭಾಗದ ವಿಜಯ್‍ಕುಮಾರ್, ಅಂಜಿನಮ್ಮ, ಸಿಬ್ಬಂದಿ ವರ್ಗ, ವಿಕಲಚೇತನರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link