ಬೆಂಗಳೂರು
ಬೆಂಗಳೂರಿನ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಸಬ್ ಅರ್ಬನ್ ರೈಲು(ಉಪನಗರ ರೈಲು) ಮಾರ್ಗದ ನಿರ್ಮಾಣ ಒಪ್ಪಂದಕ್ಕೆ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಸಹಿ ಹಾಕಿದ್ದು, ಅದರನ್ವಯ ಕಾರ್ಯಸಾಧ್ಯತಾ ವರದಿಗೆ ಅನುಮೋದನೆ ದೊರೆತಿದೆ.
ರಾಜಧಾನಿ ಬೆಂಗಳೂರಿನ ಸಂಚಾರಿ ಒತ್ತಡವನ್ನು ಕಡಿಮೆ ಮಾಡುವ ಹಾಗೂ ಬೆಂಗಳೂರು ನಗರದ ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಮಹತ್ವದ ಉಪನಗರ ರೈಲು ಯೋಜನೆ ಜಾರಿಗೆ ಇದೀಗ ಬಿರುಸಿನ ಚಾಲನೆ ನೀಡಿದೆ.
2018ರ ಸಬ್ ಅರ್ಬನ್ ರೈಲ್ವೆ ನೀತಿಯ ಪರಿಷ್ಕೃತ ಕರಡು ಮಸೂದೆ ಅನುಸಾರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು 23 ಸಾವಿರ ಕೋಟಿ ವೆಚ್ಚದ ಯೋಜನೆಯಾಗಿದ್ದು, ಹಂತಹಂತವಾಗಿ ಜಾರಿಗೊಳಿಸಲಾಗುವುದು. ಯೋಜನೆಯ ಶೆ.20ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ, ಶೇ.20ರಷ್ಟು ರಾಜ್ಯ ಸರ್ಕಾರ ಹಾಗೂ ಉಳಿದ ಶೆ.60ರಷ್ಟು ಹಣವನ್ನು ಸಾಲದ ಮೂಲಕ ಸಂಗ್ರಹಿಸಲಾಗುವುದು. ಖಾಸಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಹೊರತುಪಡಿಸಿ ಇತರ ಸಾಲದ ವೆಚ್ಚವನ್ನು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಸಮಾನವಾಗಿ ಭರಿಸಲಿವೆ.
ಈ ಯೋಜನೆಯಲ್ಲಿ ಆರು ಸಬ್ ಅರ್ಬನ್ ರೈಲ್ವೆ ಮಾರ್ಗಗಳಿಗೆ ಅನುಮತಿ ದೊರೆತಿದ್ದು, ಬೆಂಗಳೂರು ನಗರದಿಂದ ದೇವನಹಳ್ಳಿ, ವಸಂತನರಸಾಪುರ, ತುಮಕೂರಿನಿಂದ ಬೈಯ್ಯಪ್ಪನಹಳ್ಳಿ, ರಾಮನಗರದಿಂದ ಜ್ಞಾನಭಾರತಿ, ವೈಟ್ಫೀಲ್ಡ್ ನಿಂದ ಬಂಗಾರಪೇಟೆ, ಹೊಸೂರಿನಿಂದ ದೊಡ್ಡಬಳ್ಳಾಪುರ, ಜ್ಞಾನಭಾರತಿಯಿಂದ ವೈಟ್ಫೀಲ್ಡ್ ಗೆ ಸಂಪರ್ಕ ಕಲ್ಪಿಸಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
