ತುಮಕೂರು
ಸಿರಾದಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಇನ್ನೆರಡು ಮೂರು ದಿನಗಳಲ್ಲಿ ಕೆಪಿಸಿಸಿ ವತಿಯಿಂದ ಕ್ಯಾಂಪ್ ಆಫೀಸ್ ಆರಂಭಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಎಸ್.ಆರ್. ಮೆಹರೋಜ್ಖಾನ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಸಿರಾ ಉಪಚುನಾವಣೆ ಸಂಬಂಧ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಮಾಹಿತಿ ಪಡೆದುಕೊಂಡ ನಂತರ ಮಾತನಾಡಿದ ಅವರು, ಸಿರಾ ಉಪಚುನಾವಣೆ ನಡೆಯುತ್ತಿರುವುದರಿಂದ ಚುನಾವಣಾ ಪ್ರಚಾರ ಸೇರಿದಂತೆ ಇತರ ರಾಜಕೀಯ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಸುವ ಸಂಬಂಧ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಲಹೆ ಮೇರೆಗೆ ಸಿರಾದಲ್ಲಿ ಕ್ಯಾಂಪ್ ಆಫೀಸ್ ಹಾಗೂ ವಾರ್ರೂಮ್ ಸ್ಥಾಪಿಸಲಾಗುತ್ತಿದೆ ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪಕ್ಷದ ನಾಯಕರು ಚುನಾವಣಾ ಪ್ರಚಾರಕ್ಕೆ ಬರಲಿರುವ ಹಿನ್ನೆಲೆಯಲ್ಲಿ ಈ ಕ್ಯಾಂಪ್ ಆಫೀಸ್ ಚುನಾವಣೆ ಮುಗಿಯುವವರೆಗೆ ತೆರೆದಿರುತ್ತದೆ. ಸಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ 51 ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಕ್ಯಾಂಪ್ ಆಫೀಸ್ಗೆ 14 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಇದೇ ತಿಂಗಳ 14 ರಿಂದ ಸಿರಾದಲ್ಲಿ ಕೆಪಿಸಿಸಿ ವತಿಯಿಂದ ಚುನಾವಣಾ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಕೆಪಿಸಿಸಿ ಕಾರ್ಯದರ್ಶಿ ಮೆಹರೋಜ್ಖಾನ್ ಅವರನ್ನು ಅಭಿನಂದಿಸಲಾಯಿತು. ಕೆಪಿಸಿಸಿ ಸಂಶೋಧನಾ ವಿಭಾಗದ ಸಂಚಾಲಕ ರಘು ದೊಡ್ಡೇರಿ, ಕೆಂಚಮಾರಯ್ಯ, ಶ್ರೀನಿವಾಸ್, ಮಂಜಣ್ಣ, ನಟರಾಜು, ಯುವ ಮುಖಂಡ ಸುಮುಖ್ ಕೊಂಡವಾಡಿ, ಆದಿಲ್ ಬಾಷಾ, ಸುಜಾತ, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
